ಮತ್ತೆ ತೀವ್ರತೆ ಪಡೆದುಕೊಂಡ ಸೌಜನ್ಯ ಪ್ರಕರಣ: ನ್ಯಾಯಕ್ಕಾಗಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಅಭಿಯಾನ ಆರಂಭ - Mahanayaka

ಮತ್ತೆ ತೀವ್ರತೆ ಪಡೆದುಕೊಂಡ ಸೌಜನ್ಯ ಪ್ರಕರಣ: ನ್ಯಾಯಕ್ಕಾಗಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಅಭಿಯಾನ ಆರಂಭ

sowjanya
20/07/2023


Provided by

ಬೆಳ್ತಂಗಡಿ: ಸೌಜನ್ಯ ಪ್ರಕರಣದ ತನಿಖೆ ಎಲ್ಲವೂ ಮುಗಿಯಿತು, ತೀರ್ಪೂ ಬಂತು ಅನ್ನೋವಷ್ಟರಲ್ಲೇ, ಈ ಪ್ರಕರಣ ಮುಕ್ತಾಯವಾಗಿಲ್ಲ, ಈಗಷ್ಟೇ ಆರಂಭಗೊಂಡಿದೆ ಅನ್ನೋವಂತೆ ಮತ್ತೆ ಹೋರಾಟ ಎದ್ದು ನಿಂತಿದೆ. ಈ ಬಾರಿ ಹೋರಾಟ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರವೇ ಸೀಮಿತವಾಗದೇ ಇಡೀ ರಾಜ್ಯದಲ್ಲೇ ಆರಂಭವಾಗುವ ಮುನ್ಸೂಚನೆ ಲಭ್ಯವಾಗಿದೆ.

ಹೌದು..! ಇದು ಕೇವಲ ಒಬ್ಬಳು ಸೌಜನ್ಯಳಿಗಾಗಿ ನಡೆಯುತ್ತಿರುವ ಹೋರಾಟವಲ್ಲ, ಮುಂದಿನ ಪೀಳಿಗೆಯ ನೂರಾಟ ಸೌಜನ್ಯರಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆ ಕೂಡ ಸೌಜನ್ಯ ಹೋರಾಟಕ್ಕೆ ಧುಮುಕಿದ್ದು, ಈಗಾಗಲೇ ಹೋರಾಟ ಆರಂಭಿಸಿದೆ. ಇದೀಗ ಈ ಹೋರಾಟಕ್ಕೆ ಅತೀ ದೊಡ್ಡ ಮಾಧ್ಯಮವಾಗಿರುವ ಸಾಮಾಜಿಕ ಜಾಲತಾಣದ ಬಲ ಕೂಡ ಸಿಗುತ್ತಿದೆ.  ಈಗಾಗಲೇ ಸೌಜನ್ಯಳ ಪರವಾಗಿ ಹೋರಾಡಲು ಜಿಲ್ಲೆ ಹಾಗೂ ರಾಜ್ಯದಲ್ಲಿ ವಾಟ್ಸಾಪ್ ಗ್ರೂಪ್ ಗಳು, ಫೇಸ್ ಬುಕ್, ಯೂಟ್ಯೂಬ್ ಗಳಲ್ಲೂ ಜಾಗೃತಿ ಆರಂಭವಾಗಿದೆ.

ಈ ಬಗ್ಗೆ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಸೌಜನ್ಯಳ ಪರವಾಗಿ ನಿರಂತರವಾಗಿ ಹೋರಾಡುತ್ತಿರುವ ಸೌಜನ್ಯಳ ಮಾವ ವಿಠಲ್ ಗೌಡ,  ಮಾಡಿದ ಪಾಪವನ್ನು ಮುಚ್ಚಿಡಲಾಗುತ್ತಿವೆ. ಅಂತಹ ಪ್ರಯತ್ನಗಳಿಗೆ ಪ್ರಭಾವಿಗಳ ಬಲವಿದೆ. ಇಂದು ನಮ್ಮ ಮನೆ ಹೆಣ್ಣು ಮಗುವಿಗೆ ಆದ ಅನ್ಯಾಯ ಮುಂದೆ ಬೇರೆ ಯಾರಿಗೂ ಆಗಬಾರದು, ಸತ್ಯ ಏನು ಅನ್ನೋದು ಹೊರಗೆ ಬರಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ವಾಟ್ಸಾಪ್ ಗ್ರೂಪ್ ಗಳನ್ನು ತೆರೆದು ಮನೆಮನೆಗೂ ಹೋರಾಟ ತಲುಪುವಂತೆ ಮಾಡುತ್ತೇವೆ ಎಂದರು.

ಸೌಜನ್ಯ ಪರ ಹೋರಾಟ ದ್ವೇಷದ ಹೋರಾಟವಲ್ಲ, ಸತ್ಯ ಏನು ಅನ್ನೋದು ಹೊರ ಪ್ರಪಂಚಕ್ಕೆ ಗೊತ್ತಾಗಬೇಕು. ಇಲ್ಲಿ ನಡೆದ ಕೊಲೆಗಳ ರಹಸ್ಯ ಹೊರ ಬೀಳಬೇಕು, ಇನ್ನಾದರೂ ಹೆಣ್ಣು ಹೆತ್ತವರು ಇಲ್ಲಿ ನೆಮ್ಮದಿಯಾಗಿ ಜೀವಿಸುವಂತಾಗಬೇಕು. ಕಾನೂನು, ನ್ಯಾಯ ಪ್ರಭಾವಿಗಳ ಹಣದ ಮುಂದೆ ಮಂಡಿಯೂರಬಾರದು.  ಈ ಪ್ರಕರಣದಲ್ಲಿ ತಪ್ಪು ಮಾಡಿರುವ ಒಬ್ಬೊಬ್ಬ ಅಧಿಕಾರಿಗೆ ಕೂಡ ಶಿಕ್ಷೆಯಾಗಬೇಕು ಎನ್ನುವುದೇ ಹೋರಾಟದ ಉದ್ದೇಶವಾಗಿದೆ ಎಂಬ ಸಂದೇಶವನ್ನು ಹೋರಾಟಗಾರರು ಸಾರುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ