ದಲಿತರ ಹಕ್ಕುಗಳನ್ನು ರಕ್ಷಿಸುವವರಾರು ? - Mahanayaka

ದಲಿತರ ಹಕ್ಕುಗಳನ್ನು ರಕ್ಷಿಸುವವರಾರು ?

dalith
04/05/2022

ಮೂಲ :ಹರೀಶ್‌ ಎಸ್‌ ವಾಂಖೆಡೆ –ಡೆಕ್ಕನ್‌ ಹೆರಾಲ್ಡ್‌ 1/5/2022

ಅನುವಾದ : ನಾ ದಿವಾಕರ

ಇತ್ತೀಚಿನ ದಿನಗಳಲ್ಲಿ ದಲಿತರ ಮೇಲಿನ ಹಿಂಸಾಕೃತ್ಯದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ದಿನನಿತ್ಯ ಅನುಭವಿಸುವ ಸಾಮಾಜಿಕ ಕಿರುಕುಳ ಮತ್ತು ತಾರತಮ್ಯಗಳೊಂದಿಗೇ, ದಲಿತ ಯುವಕರು ಮೀಸೆ ಬೆಳೆಸಿದ್ದಕ್ಕಾಗಿ, ಕುದುರೆ ಸವಾರಿ ಮಾಡಿದ್ದಕ್ಕಾಗಿ, ಅಂತರ್ಜಾತಿ ವಿವಾಹವಾಗಿದ್ದಕ್ಕಾಗಿ ಮತ್ತು ಸಮಾನ ವೇತನ ಆಗ್ರಹಿಸಿದ್ದಕ್ಕಾಗಿಯೂ ಸಹ ದಲಿತ ಯುವಕರ ಹತ್ಯೆಯಾಗುತ್ತಿದ್ದು, ಹಿಂಸಾಚಾರವನ್ನು ಎದುರಿಸಬೇಕಿದೆ. ನಿರಂತರವಾದ ಜಾತಿ ಹಿಂಸಾಚಾರಗಳು ಎದೆಗುಂದಿಸುವಂತಿದ್ದರೂ, ಆಡಳಿತಾರೂಢ ಆಳುವ ವರ್ಗಗಳು ಈ ಶೋಚನೀಯ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ರೂಪುರೇಷೆಗಳನ್ನು ಒದಗಿಸುತ್ತಿಲ್ಲ. ಪ್ರಭುತ್ವದ ಅಧಿಕಾರ ಕೇಂದ್ರಗಳು ಸಾಮಾನ್ಯವಾಗಿ ಹಿಂದುತ್ವ ಗುಂಪುಗಳ ಮಾರ್ಗದರ್ಶನದಂತೆಯೇ ನಡೆಯುವುದರಿಂದ, ಇವತ್ತಿನ ಪರಿಸ್ಥಿತಿಯಲ್ಲಿ ದಲಿತರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಬಹುಶಃ ಕನಸಾಗಿಯೇ ಉಳಿಯಲಿದೆ.

ಅಂಬೇಡ್ಕರ್‌ ಮತ್ತು ಪ್ರಜಾಪ್ರಭುತ್ವ

ಚಾರಿತ್ರಿಕವಾಗಿ ನೋಡಿದರೂ ಅಸ್ಪೃಶ್ಯರನ್ನು ಸದಾ ಪೂರ್ವಗ್ರಹಗಳೊಂದಿಗೇ, ತಾತ್ಸಾರದೊಂದಿಗೇ ಕಾಣಲಾಗಿದೆ. ಅಸ್ಪೃಶ್ಯರನ್ನು ಹೀನ ಕೀಳುಮಟ್ಟದ ಕೆಲಸಗಳಿಗೇ ಸೀಮಿತಗೊಳಿಸಲಾಗಿದೆ. ಸಾಮಾನ್ಯವಾಗಿ ನಾಗರಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ಅಸ್ಪೃಶ್ಯರನ್ನು ಹೊರಗಿರಿಸಲಾಗಿದೆ. ಡಾ ಬಿ ಆರ್‌ ಅಂಬೇಡ್ಕರ್‌ ಅಸ್ಪೃಶ್ಯರು ಎದುರಿಸುತ್ತಿದ್ದ ಈ ಸಮಸ್ಯೆಗಳನ್ನು ರಾಷ್ಟ್ರೀಯ ಸಂಕಥನದ ಒಂದು ಭಾಗವನ್ನಾಗಿ ಮಾಡಿದ್ದೇ ಅಲ್ಲದೆ ಈ ಅಮಾನುಷ ಪದ್ಧತಿಗಳ ವಿರುದ್ಧ  ವೀರೋಚಿತ ಹೋರಾಟವನ್ನೂ ನಡೆಸಿದ್ದರು. ಭಾರತದ ಹೊಸ ಸಂವಿಧಾನದಲ್ಲಿ ಈ ಕೆಳಸ್ತರದ ಸಾಮಾಜಿಕ ಜನಸಮೂಹಗಳನ್ನು ಸಾಮಾಜಿಕ ದಬ್ಬಾಳಿಕೆ ಮತ್ತು ಶೋಷಣೆಯಿಂದ ಮುಕ್ತಗೊಳಿಸಿ, ಅವರಿಗೆ ಒಂದು ಘನತೆ ಮತ್ತು ಸ್ವಾತಂತ್ರ್ಯವನ್ನು ಕಲ್ಪಿಸುವ ಮಾರ್ಗಗಳನ್ನು ಕಲ್ಪಿಸಲಾಗಿದೆ. ಸ್ವತಂತ್ರ ಭಾರತದ ಪ್ರಭುತ್ವವು, ಸಮಾನತೆ, ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಐಕ್ಯತೆಯ ಧ್ಯೇಯೋದ್ದೇಶಗಳನ್ನು ಹೊತ್ತು ಮುನ್ನಡೆಯುವುದರಿಂದ, ಅದು ಹಿಂದಿನ ಬ್ರಾಹ್ಮಣಶಾಹಿ ಪರಂಪರೆಯಿಮದ ವಿಭಿನ್ನವಾಗಿರುತ್ತದೆ ಎಂದು ಡಾ ಅಂಬೇಡ್ಕರ್ ಭಾವಿಸಿದ್ದರು.

ಎರಡನೆಯದಾಗಿ, ಅಂಬೇಡ್ಕರ್‌ ಅವರ ರಾಜಕೀಯ ಚಟುವಟಿಕೆಗಳು ಪ್ರಜೆ ಎನ್ನುವುದಕ್ಕೆ ಇನ್ನೂ ಉನ್ನತವಾದ ಅರ್ಥಗಳನ್ನು ಕಲ್ಪಿಸಿದ್ದವು. ಮೀಸಲಾತಿ ನೀತಿಗಳ ಮೂಲಕ ಪ್ರಭುತ್ವದ ಸಂಸ್ಥೆಗಳಲ್ಲಿ ಸಾಮಾಜಿಕ ಒಳಗೊಳ್ಳುವಿಕೆ ಸಾಧ್ಯವಾಗಿದೆ.  ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಾಮಾಜಿಕ ದಬ್ಬಾಳಿಕೆಗೊಳಗಾದ ದಮನಿತ ವರ್ಗಗಳಿಗೆ ಪ್ರಾತಿನಿಧಿಕ ಸ್ಥಾನವನ್ನು ನೀಡುವುದು ಸಾಧ್ಯವಾಗಿದೆ. ಈ ಸಾಂವಿಧಾನಿಕ ಹಕ್ಕುಗಳ ಅಸ್ತ್ರದೊಂದಿಗೇ ದಲಿತರು ಸುಶಿಕ್ಷಿತ ಮಧ್ಯಮ ವರ್ಗಗಳಾಗಿ ರೂಪುಗೊಂಡಿದ್ದು, ತಮ್ಮ ಪ್ರಜಾ ಹಕ್ಕುಗಳನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಕೊನೆಯದಾಗಿ, ದಲಿತರು ಸ್ವತಂತ್ರ ರಾಜಕೀಯ ಭಾಗಿದಾರರಾಗಿ ಪ್ರಜಾಸತ್ತಾತ್ಮಕ ಸಂವಾದದಲ್ಲಿ ಪಾಲ್ಗೊಳ್ಳುವಂತೆ ಅಂಬೇಡ್ಕರ್‌ ಪ್ರೇರೇಪಣೆ ನೀಡಿದ್ದರು. ಸಾಮಾಜಿಕವಾಗಿ ದುರ್ಬಲವಾದ ಗುಂಪುಗಳು ಮತ್ತು ಶ್ರಮಜೀವಿ ವರ್ಗಗಳಿಗೆ ಸಮರ್ಥ ನಾಯಕತ್ವ ಕೊಡುವವರಾಗಿ ದಲಿತರು ರೂಪಗೊಳ್ಳುತ್ತಾರೆ ಎಂದು ಅಂಬೇಡ್ಕರ್‌ ಭಾವಿಸಿದ್ದರು. ಸರ್ಕಾರಿ ಸವಲತ್ತುಗಳಿಗಾಗಿ ಆಗ್ರಹಿಸುವ ಹಕ್ಕುದಾರರಾಗಿ ಮಾತ್ರವೇ ಉಳಿದುಕೊಳ್ಳದೆ ದಲಿತರು, ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ, ಮುಂಚೂಣಿ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದು ಅಂಬೇಡ್ಕರ್‌ ಆಶಿಸಿದ್ದರು. ಆನಂತರದ ದಲಿತ ಚಳುವಳಿಗಳು ಸಾಮಾಜಿಕ ಅನ್ಯಾಯ ಮತ್ತು ವರ್ಗ ಶೋಷಣೆಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ದಲಿತ-ಬಹುಜನ ರಾಜಕೀಯ ಪಕ್ಷಗಳನ್ನೂ ಕಟ್ಟಿ ರಾಜಕೀಯ ರಂಗದಲ್ಲಿ ಪ್ರಭಾವ ಬೀರಲು ಯಶಸ್ವಿಯಾಗಿದ್ದರು.

ಸಾಮಾಜಿಕ ನ್ಯಾಯದ ಹಪಹಪಿ:

ನಾಗರಿಕ ಸ್ವಾತಂತ್ರ್ಯದ ಫಲಾನುಭವಿಗಳಾಗಿ ದಲಿತರ ಹಕ್ಕೊತ್ತಾಯಗಳನ್ನಾಗಲೀ, ಆಧುನಿಕ ಅಧಿಕಾರ ಕೇಂದ್ರಗಳಲ್ಲಿ ಸ್ವತಂತ್ರರಾಗಿ ಪಾಲ್ಗೊಳ್ಳುವ ಅವಕಾಶಗಳನ್ನಾಗಲೀ ಮೇಲ್ಪದರದ ಸಾಮಾಜಿಕ ಗಣ್ಯ ಸಮುದಾಯ ಸ್ವಾಗತಿಸುವುದಿಲ್ಲ. ಪ್ರಜಾತಂತ್ರಕ್ಕಾಗಿ ದಲಿತರ ಹಕ್ಕೊತ್ತಾಯದ ದನಿಗಳನ್ನು ಹಿಂದೂ ನಾಗರಿಕತೆಯ ಭಾವನೆಗಳ ಪ್ರತಿರೋಧ ಎಂದೇ ಭಾವಿಸಲಾಗುತ್ತದೆ. ಸಮಕಾಲೀನ ಸಂದರ್ಭಗಳಲ್ಲಿ ದಲಿತರು ಮುಖ್ಯವಾಹಿನಿಯ ರಾಜಕೀಯ ಗುಂಪುಗಳಾಗಿ ಸವಾಲುಗಳನ್ನು ಎದುರಿಸುತ್ತಿರುವುದೇ ಅಲ್ಲದೆ, ಸಾರ್ವಜನಿಕ ವಲಯದಲ್ಲಿ ತಮ್ಮದೇ ಆದ ಹಕ್ಕುಗಳೊಂದಿಗೆ ಪಾಲ್ಗೊಳ್ಳುವ ಅವಕಾಶವೂ ಅಪಾಯದಲ್ಲಿದೆ.

ಉದಾರೀಕರಣದ ನಂತರದ ಅವಧಿಯಲ್ಲಿ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ತೀವ್ರವಾಗುತ್ತಿರುವುದರಿಂದ ಆಧುನಿಕ ಸಂಸ್ಥೆಗಳಲ್ಲಿ ದಲಿತರ ಪ್ರವೇಶಕ್ಕೆ ನಿರ್ಬಂಧಗಳು ಹೆಚ್ಚಾಗಿವೆ. ಮಾರುಕಟ್ಟೆಯೂ ಸಹ ಜಾತಿ ಪೂರ್ವಗ್ರಹಗಳಿಂದ ಮುಕ್ತವಾಗಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಕಾರ್ಮಿಕರನ್ನು ನೇಮಕ ಮಾಡುವಾಗ ಜಾತಿ ಅಥವಾ ವರ್ಗಗಳ ಸಾಂಪ್ರದಾಯಿಕ ಜಾಲಗಳ ಮೂಲಕವೇ ನಿರ್ವಹಿಸಲಾಗುತ್ತದೆ. ಈ ಜಾಲಗಳಲ್ಲಿ ನೇರವಾಗಿಯೇ ದಲಿತ ಅಭ್ಯರ್ಥಿಗಳ ವಿರುದ್ಧ ತಾರತಮ್ಯ ಎಸಗಲಾಗುತ್ತದೆ. ಆಧುನಿಕ ಸಂಸ್ಥೆಗಳು ಮತ್ತು ಮುಕ್ತ ಮಾರುಕಟ್ಟೆ ಸಾಮಾಜಿಕ ನ್ಯಾಯದ ಆದರ್ಶಗಳನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿವೆ.

ಅಷ್ಟೇ ಅಲ್ಲದೆ, ದಲಿತ ರಾಜಕಾರಣದ ಭವಿಷ್ಯ ಕ್ಷೀಣಿಸುತ್ತಿರುವಂತೆ ಕಾಣುತ್ತಿದೆ. ಹಿಂದುತ್ವ ರಾಜಕಾರಣ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಸಂದರ್ಭದಲ್ಲಿ ದಲಿತರ ನಾಯಕತ್ವ ಹೊಂದಿರುವ ರಾಜಕೀಯ ಪಕ್ಷಗಳು, ಉದಾಹರಣೆಗೆ ಉತ್ತರಪ್ರದೇಶದ ಬಹುಜನ ಸಮಾಜ ಪಕ್ಷ ಮತ್ತು ಬಿಹಾರದ ಲೋಕ ಜನಶಕ್ತಿ ಪಕ್ಷ, ತಮ್ಮ ಸಾಮಾಜಿಕ ತಳಪಾಯವನ್ನೇ ಕಳೆದುಕೊಂಡಿವೆ. ಬಹುಮುಖ್ಯವಾಗಿ, ಸಾಮಾಜಿಕ ವಲಯವೇ ದಲಿತರ ಪಾಲಿಗೆ ನಿರುತ್ಸಾಹಕದಾಯವಾಗಿ ಪರಿಣಮಿಸುತ್ತಿದೆ.

ಸಾಂಪ್ರದಾಯಿಕ ಹಿಂದೂ ಮನಸ್ಥಿತಿಯಲ್ಲಿ ದಲಿತರ ಮೇಲಿನ ದ್ವೇಷ ಒಂದು ಅಂತರ್ಗತ ಭಾಗವೇ ಆಗಿದ್ದು ಬ್ರಾಹ್ಮಣಶಾಹಿಯ ಜಾತಿ ಪದ್ಧತಿಯನ್ನು ಕಾಪಾಡಿಕೊಳ್ಳಲು ಇದು ಅತ್ಯವಶ್ಯಕ ಎಂದೇ ಭಾವಿಸಲಾಗಿದೆ. ಆದುದರಿಂದಲೇ ನಮ್ಮ ರಾಜಕೀಯ ಮತ್ತು ನಾಗರಿಕ ಪ್ರಜ್ಞೆಯು ಜಾತಿ ಕ್ರೌರ್ಯಗಳಿಂದ ವಿಮುಖವಾಗಿರುತ್ತದೆ ಮತ್ತು ಈ ಕ್ರೌರ್ಯಗಳನ್ನು ಸಾಮಾಜಿಕ ಅನಿಷ್ಠ ಎಂದು ಭಾವಿಸುವುದೂ ಇಲ್ಲ. ಈ ದೌರ್ಜನ್ಯವನ್ನು ಎಸಗುವವರಿಗೆ ಪ್ರಭುತ್ವ, ನ್ಯಾಯಾಂಗ ಮತ್ತು ನಾಗರಿಕ ಸಮಾಜ ಶ್ರೀರಕ್ಷೆಯನ್ನು ನೀಡುವುದರಿಂದಲೇ ಜಾತಿ ಹಿಂಸಾಚಾರ, ಅತ್ಯಾಚಾರ ಮತ್ತು ಹತ್ಯೆಗಳು ಸಾಮಾಜಿಕ ವಿದ್ಯಮಾನದಂತೆ ಸ್ವೀಕೃತವಾಗಿಬಿಟ್ಟಿದೆ. ಗುಪ್ತವಾಹಿನಿಯಂತೆ ಹರಿಯುವ ಜಾತಿ ಪೂರ್ವಗ್ರಹಗಳು ಮತ್ತು ದಲಿತ ವಿರೋಧಿ ಭಾವನೆಗಳು ಇಂದು ಸಕ್ರಿಯವಾಗಿಯೇ ಕಂಡುಬರುತ್ತಿವೆ.

ದಲಿತರ ಮಾನವ ಹಕ್ಕುಗಳು:

ಜಾತಿ ದೌರ್ಜನ್ಯಗಳು ಮತ್ತು ಸಾಮಾಜಿಕ ಅನ್ಯಾಯದ ಪ್ರಶ್ನೆ ಎದುರಾದಾಗ ಬಲಪಂಥೀಯ ರಾಜಕೀಯ ಸಿದ್ಧಾಂತದಿಂದ ಯಾವುದೇ ರೀತಿಯ ನಿರೀಕ್ಷೆಗಳನ್ನಿಟ್ಟುಕೊಳ್ಳಲಾಗುವುದಿಲ್ಲ.  ಹಿಂದುತ್ವದ ಪ್ರತಿಪಾದಕರು ಭಾರತದ ಭವ್ಯ ಸಮಾಜ ಸುಧಾರಣೆಯ ಪರಂಪರೆಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡುತ್ತಾರೆ. ಅಲ್ಲದೆ, ವಿವಿಧ ಜಾತಿಗಳ ನಡುವೆ ಸಾಮಾಜಿಕ ಸೌಹಾರ್ದತೆಯನ್ನು ಸಾಧಿಸುವ ಸಲುವಾಗಿ ತಮ್ಮ ಸಾಂಸ್ಕೃತಿಕ ಸಂಘಟನೆಗಳು ಸದಾ ದುಡಿಯುತ್ತವೆ ಎಂದು ಹೇಳುತ್ತಾರೆ. ಆದರೆ ವಾಸ್ತವ ಎಂದರೆ ಜಾತಿ ದೌರ್ಜನ್ಯ ಮತ್ತು ಹಿಂಸೆಗೊಳಗಾದ ಸಂತ್ರಸ್ತರಿಗೆ ಸಾಮಾಜಿಕ ಭದ್ರತೆಯನ್ನು ನೀಡುವುದರಲ್ಲಾಗಲೀ, ಕಾನೂನು ರಕ್ಷಣೆಯನ್ನು ಒದಗಿಸುವುದರಲ್ಲಾಗಲೀ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಕಾಣುವುದೇ ಇಲ್ಲ.  ಈ ದೌರ್ಜನ್ಯಗಳ ವಿರುದ್ಧ ಕೇವಲ ದಲಿತ ಸಂಘಟನೆಗಳು ಮಾತ್ರವೇ ದನಿ ಎತ್ತುತ್ತಿದ್ದುದನ್ನು ಇತ್ತೀಚಿನವರೆಗೂ ನೋಡಿದ್ದೇವೆ.

ಗುಜರಾತ್‌ನ ಊನ ಘಟನೆಯ ವಿರುದ್ಧ ಪ್ರತಿಭಟನೆಯಾಗಲೀ,  ದೆಹಲಿಯಲ್ಲಿ ನಡೆದ ರೋಹಿತ್‌ ವೇಮುಲಾ ಪರ  ಪ್ರತಿಭಟನೆಯಲ್ಲಾಗಲೀ, 2018ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯನ್ನು ಸಡಿಲಗೊಳಿಸುವುದರ ವಿರುದ್ಧ ದೆಹಲಿಯಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಾಗಲೀ, ಹಥ್ರಾಸ್‌ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲು ನಡೆದ ರಾಷ್ಟ್ರೀಯ ಜನಾಂದೋಲನದಲ್ಲಾಗಲೀ, ದಲಿತ ಸಂಘಟನೆಗಳು ತಮ್ಮದೇ ಆದ ನೆಲೆಯಲ್ಲಿ ಆತ್ಮಸ್ಥೈರ್ಯದೊಂದಿಗೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದು ನ್ಯಾಯಕ್ಕಾಗಿ ಹೋರಾಡಿವೆ. ಆದರೆ ಇಂದು, ಪ್ರಭುತ್ವವು ದಲಿತ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರ ಪ್ರತಿರೋಧಗಳನ್ನು ಹತ್ತಿಕ್ಕಲು ಪ್ರಬಲ ಅಸ್ತ್ರಗಳನ್ನು ಬಳಸುತ್ತಿರುವುದರಿಂದ, ದಲಿತರ ಮಾನವ ಹಕ್ಕುಗಳ ರಕ್ಷಣೆಗಾಗಿ ನಾಗರಿಕ ಪ್ರತಿಭಟನೆಯನ್ನು ಆಯೋಜಿಸುವುದೂ ಸಹ ಅಪಾಯಕಾರಿಯಾಗಿದ್ದು, ಕಷ್ಟಕರವಾಗಿದೆ.

ದಲಿತರ ಮಾನವ ಹಕ್ಕುಗಳನ್ನು ಸಂರಕ್ಷಿಸಿ, ಕಾಪಾಡುವ ನಿಟ್ಟಿನಲ್ಲಿ ಒಂದು ವಸ್ತುನಿಷ್ಠ ರಾಷ್ಟ್ರೀಯ ಸಂವಾದವನ್ನು ಏರ್ಪಡಿಸುವ ಅವಶ್ಯಕತೆ ಇದೆ. ತನ್ಮೂಲಕ ಆಧುನಿಕ ಅಧಿಕಾರ ಕೇಂದ್ರಗಳಲ್ಲಿ ದಲಿತರ ಭಾಗವಹಿಸುವಿಕೆಗೆ ಅವಕಾಶಗಳನ್ನು ಕಲ್ಪಿಸಬೇಕಾಗಿದೆ. ಹಾಗೂ ದಲಿತ ಬಹುಜನ ರಾಜಕೀಯ ಸಿದ್ಧಾಂತದ ಬಗ್ಗೆ ಮರು ಆಲೋಚನೆ ಮಾಡಬಹುದಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರು, ದಲಿತರ ನಾಗರಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಸುರಕ್ಷತೆಯ ನಿಯಮಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಜನಾಂದೋಲನವನ್ನು ಸಂಘಟಿಸಲು ಮುಂದಾಗಬೇಕಿದೆ. ಈ ರೀತಿಯ ಒಂದು ಸಂಯುಕ್ತ ಹೋರಾಟದ ಮೂಲಕ ಪ್ರಭುತ್ವದ ಮೇಲೆ ಪ್ರಭಾವ ಬೀರಿ, ಸರ್ಕಾರಗಳು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಠೆ ಮತ್ತು ಬದ್ಧತೆಯಿಂದ ನಿರ್ವಹಿಸುವಂತೆ ಒತ್ತಾಯಿಸಬೇಕಿದೆ. ಹಾಗೆಯೇ ಈ ದೇಶದ ಪ್ರಜೆಗಳಾಗಿ ದಲಿತರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಉಂಟುಮಾಡದಂತೆ ನಾಗರಿಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ರೀತಿಯ ಸಂವಾದದ ಮೂಲಕ ಒಂದು ವಿನೂತನ ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ನಾಂದಿ ಹಾಡಬಹುದು.

(ಲೇಖಕರು ಜೆ ಎನ್‌ ಯು ವಿಶ್ವವಿದ್ಯಾಲಯದಲ್ಲಿ ರಾಜಕೀಯ ಅಧ್ಯಯನ ಕೇಂದ್ರದಲ್ಲಿ ಬೋಧಕರು)

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ