ದೇವಸ್ಥಾನದ ಆವರಣದಲ್ಲಿಯೇ ಬರ್ಬರವಾಗಿ ಹತ್ಯೆಗೀಡಾದ ಅರ್ಚಕ! - Mahanayaka
12:12 PM Saturday 24 - January 2026

ದೇವಸ್ಥಾನದ ಆವರಣದಲ್ಲಿಯೇ ಬರ್ಬರವಾಗಿ ಹತ್ಯೆಗೀಡಾದ ಅರ್ಚಕ!

08/02/2021

ಬದೌನ್:  ಅರ್ಚಕನನ್ನು ದೇವಸ್ಥಾನದ ಆವರಣದಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಧಾಕ್ನಗ್ಲಾ ಗ್ರಾಮದಲ್ಲಿ ನಡೆದಿದ್ದು, ಕೃತ್ಯದ ಬಳಿಕ ಆರೋಪಿಯು ತಲೆ ಮರೆಸಿಕೊಂಡಿದ್ದಾನೆ.

75 ವರ್ಷ ವಯಸ್ಸಿನ  ಜಯ ಸಿಂಗ್ ಯಾದವ್ ಸಖಿ ಬಾಬಾ ಹತ್ಯೆಗೀಡಾದವರಾಗಿದ್ದಾರೆ.  ಇವರಿಗೆ ಪರಿಚಿತನೇ ಆಗಿರುವ ರಾಮವೀರ್ ಯಾದವ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಇವರ ನಡುವೆ ಯಾವುದೋ ವೈಯಕ್ತಿ ವಿಚಾರವಿದ್ದು, ಈ ಕಾರಣಕ್ಕಾಗಿಯೇ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ.

ಹತ್ಯೆಗೀಡಾದ ಸಖಿ ಬಾಬಾ, ಕಾಳಿ ದೇವಿಯ ಆರಾಧಕರಾಗಿದ್ದು, ಕಾರಂ ಸೀರೆ ಹಾಗೂ ಬಳೆಗಳನ್ನು ಧರಿಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.  ಈ ಪ್ರದೇಶದಲ್ಲಿ ಇವರು ಬಹಳ  ಪ್ರಖ್ಯಾತರೂ ಆಗಿದ್ದರು.

ಸಖಿ ಬಾಬಾ ದೇವಸ್ಥಾನದ ಆವರಣದಲ್ಲಿ ಇದ್ದ ಮನೆಯೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಭಾನುವಾರ ಬೆಳಗ್ಗೆ ದೇವಸ್ಥಾನಕ್ಕೆ ಬಂದ ಸಖಿ ಎಂದಿನಂತೆ ಪೂಜೆ ನೆರವೇರಿಸಿ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಆರೋಪಿ ರಾಮ್ ವೀರ್ ಏಕಾ ಏಕಿ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಕೃತ್ಯದ ಬಳಿಕ ಆರೋಪಿ ರಾಮ್ ವೀರ್ ಸ್ಥಳದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ.  ಈತನ ವಿರುದ್ಧ ಐಪಿಎಸ್​ ಸೆಕ್ಷನ್​ 302ರ ಅಡಿಯಲ್ಲಿ ಕೊಲೆ ಕೇಸ್​ ದಾಖಲಿಸಲಾಗಿದೆ. ಈತನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದ್ದು ಶೀಘ್ರದಲ್ಲೇ ರಾಮವೀರ್​ನನ್ನ ಬಂಧಿಸಲಿದ್ದೇವೆ. ಈ ಕೊಲೆಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ