ಪತ್ರಗಳ ಮೂಲಕ ಭಗವಂತನಿಗೆ ಮೊರೆಯಿಟ್ಟ ಭಕ್ತರು: ಏನೇನು ಬೇಡಿಕೆಯಿಟ್ಟಿದ್ದಾರೆ ನೋಡಿ - Mahanayaka

ಪತ್ರಗಳ ಮೂಲಕ ಭಗವಂತನಿಗೆ ಮೊರೆಯಿಟ್ಟ ಭಕ್ತರು: ಏನೇನು ಬೇಡಿಕೆಯಿಟ್ಟಿದ್ದಾರೆ ನೋಡಿ

biligiri ranganatha
13/07/2023


Provided by

ಚಾಮರಾಜನಗರ: ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಹಾಗೂ ಚಿಕ್ಕ ತಿರುಪತಿ ಎಂದೇ ಹೆಸರಾದ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇವಾಯದ ಹುಂಡಿ ಎಣಿಕೆ ಬುಧವಾರ ನಡೆದಿದ್ದು ಭಕ್ತರು ಪತ್ರಗಳ ಮೂಲಕ ಭಗವಂತನಿಗೆ ಮೊರೆ ಇಟ್ಟಿದ್ದಾರೆ.

ಬುಧವಾರ ನಡೆದ ಹುಂಡಿ ಎಣಿಕೆ ವೇಳೆ 4-5  ಮಂದಿ ಭಕ್ತರು ಹಣದ ಜೊತೆಗೆ ಪತ್ರಗಳನ್ನು ಬಿಳಿಗಿರಿರಂಗನಾಥ ಸ್ವಾಮಿಗೆ ಅರ್ಪಣೆ ಮಾಡಿದ್ದು ಆಸ್ತಿ, ಧೈರ್ಯ, ಆರೋಗ್ಯ ಭಾಗ್ಯ, ಮಗನಿಗೆ ಒಳ್ಳೆಯ ಬುದ್ಧಿ ಕೊಡುವಂತೆ ತರಹೇವಾರಿ ಬೇಡಿಕೆಗಳನ್ನು ಭಗವಂತನ‌ ಮುಂದೆ ಇಟ್ಟಿದ್ದಾರೆ.

ಪತ್ರಗಳಲ್ಲಿ ಏನಿದೆ..?:

ಭಕ್ತರೊಬ್ಬರು ಚೀಟಿಯೊಂದನ್ನು ಹುಂಡಿಗೆ ಹಾಕಿದ್ದು ಆಸ್ತಿ ವ್ಯಾಜ್ಯದ ಬಗ್ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಕ್ಕ-ತಂಗಿಯರಿಗೆ ಆಸ್ತಿ ಸಿಗದಿರಲಿ- ಗಂಡು ಮಕ್ಕಳ ಪರವಾಗಿ ಕೋರ್ಟ್ ತೀರ್ಪು ಬರಲಿ, ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ಆಸ್ತಿ ಆಗಬಾರದು ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು, ಮತ್ತೊಂದು ಪತ್ರದಲ್ಲಿ ಯುವಕನೋರ್ವ ಸಮಾಜದಲ್ಲಿ ಮುಖಂಡನಾಗಿ ಗುರುತಿಸಿಕೊಳ್ಳುವ ಆಸೆಯನ್ನು ಹೊರಹಾಕಿ ಗಮನ ಸೆಳೆದಿದ್ದಾನೆ.

ತನಗೇ ಮಾತನಾಡುವ ಧೈರ್ಯ ಕೊಡು, ನಮ್ಮ ಏರಿಯಾದಲ್ಲಿ ಗುರುತಿಸಿಕೊಳ್ಳುತ್ತೇನೆ, ಹಣ ಸಂಪಾದನೆ ಮಾಡುತ್ತೇನೆ, ಇಡೀ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಲಿದ್ದು, ಏರಿಯಾದಲ್ಲಿ ಧೈರ್ಯವಾಗಿ ಮಾತನಾಡುತ್ತೇನೆ ಎಂದು ದೇವರ ಬಳಿ ತನ್ನ ಆಸೆ ಹೊರಹಾಕಿದ್ದಾನೆ‌.

ಮತ್ತೊಂದು ಪತ್ರದಲ್ಲಿ ತಾಯಿಯೊಬ್ಬರು ಬರೆದಿದ್ದು ಮಗನಿಗೆ ಒಳ್ಳೆಯ ಬುದ್ಧಿ ಕೊಡಲಿ, ತನ್ನನ್ನು ಬೈಯ್ಯದಿರಲಿ,  ಹಿಂದೆ ಮಾಡಿದ್ದ ತಪ್ಪನ್ನು ತಾನು ಮಾಡುವುದಿಲ್ಲ. ಆರೋಗ್ಯ ಭಾಗ್ಯ ಕೊಡಲಿ  ಎಂದು ಎರಡು ಪುಟಗಳ ದೀರ್ಘ ಪತ್ರ ಬರೆದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

ಫಾರಿನ್ ಭಕ್ತರಿಂದ ಕಾಣಿಕೆ:  ಇನ್ನು, ಬಿಳಿಗಿರಿರಂಗನಾಥನ ಹುಂಡಿ ಎಣಿಕೆಯಲ್ಲಿ 42,11,305 ಹಣ ಸಂಗ್ರಹವಾಗಿದ್ದು ವಿದೇಶಿ ಭಕ್ತರು ದೇವರಿಗೆ ಕಾಣಿಕೆ ಅರ್ಪಿಸಿದ್ದಾರೆ. 132 ಅಮೇರಿಕನ್ ಡಾಲರ್, ನೇಪಾಳದ ಎರಡು ನೋಟುಗಳು, ಅರಬ್ ಎಮಿರೇಟ್ಸ್ ನ 10 ಧೀರಂ, ಆಫ್ರೀಕನ್ ಗಾಂಬಿಯಾದ 50 ರೂ. ನ ಒಂದು ನೋಟ್ ನ್ನು ಭಕ್ತರು ರಂಗನಾಥನಿಗೆ ಅರ್ಪಿಸಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ