ಕೊಳ್ಳೇಗಾಲದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಚಿವ ಸುಧಾಕರ್ ಗೆ ಶಾಸಕ ಎನ್.ಮಹೇಶ್ ಮನವಿ - Mahanayaka

ಕೊಳ್ಳೇಗಾಲದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಚಿವ ಸುಧಾಕರ್ ಗೆ ಶಾಸಕ ಎನ್.ಮಹೇಶ್ ಮನವಿ

13/12/2020

ಕೊಳ್ಳೇಗಾಲ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಾಗೂ ರೋಗಿಗಳಿಗೆ ತುರ್ತು ಅವಶ್ಯಕ ಚಿಕಿತ್ಸೆ ದೊರೆಯದೇ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಮಾಜಿ ಶಿಕ್ಷಣ ಸಚಿವ ಕೊಳ್ಳೇಗಾಲದ ಶಾಸಕರಾಗಿರುವ ಎನ್.ಮಹೇಶ್ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಶುಕ್ರವಾರ ಭೇಟಿ ಮಾಡಿ ಅವರ ಗಮನ ಸೆಳೆದರು.

ಕ್ಷೇತ್ರದಲ್ಲಿ ಖಾಲಿ ಇರುವ ಎಲ್ಲಾ ವೈದ್ಯರ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಿಕೊಡಬೇಕು. ಅಲ್ಲದೇ, ಕೊಳ್ಳೆಗಾಲದ ಉಪ ವಿಭಾಗ ಆಸ್ಪತ್ರೆಯಲ್ಲಿ ಸ್ಕಾನಿಂಗ್ ತಜ್ಞರನ್ನು ಒಳಗೊಂಡಂತೆ 5 ತಜ್ಞ ವೈದ್ಯರುಗಳನ್ನು ಸೇರಿ ಒಟ್ಟು 9 ವೈದ್ಯರ ಕೊರತೆಯಿದೆ. ಸಂತೆ ಮರಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 3 ವೈದ್ಯರ ಕೊರತೆಯಿದ್ದು ಪಕ್ಕದಲ್ಲಿ ಇರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 6 ತಜ್ಞ ವೈದ್ಯರುಗಳ ಕೊರತೆಯಿದೆ ಎಂದು ಸಚಿವ ಸುಧಾಕರ್ ಅವರಿಗೆ ಮನವರಿಕೆ ಮಾಡಿದರು.

2006-07 ರಲ್ಲಿಯೇ ಯಳಂದೂರು ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, ಸುಮಾರು 13 ವರ್ಷಗಳಿಂದಲೂ ನನೆಗುದಿಗೆ ಬಿದ್ದಿರುವ ಇಲ್ಲಿ ಉತ್ತಮ ಕಟ್ಟಡವೂ ಇಲ್ಲದೆ ಸಾಕಷ್ಟು ವೈದ್ಯರುಗಳ ನೇಮಕಾತಿಯೂ ಆಗದೆ ತಾಲೂಕಿನ ರೋಗಿಗಳಿಗೆ ಆಗುತ್ತಿರುವ ಅನಾನುಕೂಲವನ್ನು ಸಚಿವರಿಗೆ ಎನ್.ಮಹೇಶ್ ವಿವರಿಸಿದರು.

ಎನ್.ಮಹೇಶ್ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಬೇಡಿಕೆಯಲ್ಲಿರುವ ಕ್ಷೇತ್ರದ ಎಲ್ಲಾ ಖಾಲಿ ಇರುವ ವೈದ್ಯರುಗಳ ಹುದ್ದೆಗಳಿಗೆ ಜನವರಿ ತಿಂಗಳಲ್ಲಿ ನೇಮಕಾತಿ ಮಾಡಿಕೂಡುವುದಾಗಿ ಭರವಸೆ ನೀಡಿದರು. ಮತ್ತು ಮುಂದಿನ ಬಜೆಟ್ ನಲ್ಲಿ ಮೇಲ್ದರ್ಜೆಗೇರಿಸಿರುವ ಯಳಂದೂರು ತಾಲೂಕಿನ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ಇತ್ತೀಚಿನ ಸುದ್ದಿ