ಔಟ್: ಸ್ವದೇಶಿ ಮೇಳದಿಂದ ಮುಸ್ಲಿಂ ವ್ಯಾಪಾರಿಗಳನ್ನು ಹೊರಹಾಕಿದ ಆಯೋಜಕರು - Mahanayaka

ಔಟ್: ಸ್ವದೇಶಿ ಮೇಳದಿಂದ ಮುಸ್ಲಿಂ ವ್ಯಾಪಾರಿಗಳನ್ನು ಹೊರಹಾಕಿದ ಆಯೋಜಕರು

22/11/2024


Provided by

ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಿಂದ ಮುಸ್ಲಿಂ ವ್ಯಾಪಾರಿಗಳನ್ನು ಹೊರಹಾಕಲಾಗಿದೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ. ಸ್ವ ಉದ್ಯೋಗ ಮತ್ತು ಸ್ಥಳೀಯ ಉತ್ಪಾದನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಮೇಳವನ್ನು ದಾಮೋಹ್ ಜಿಲ್ಲೆಯ ತಹಸಿಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ. ಈ ಮೇಳ ಅಕ್ಟೋಬರ್ 14ರಂದು ಆರಂಭವಾಗಿದ್ದು ನವೆಂಬರ್ 24ರ ವರೆಗೆ ಮುಂದುವರೆಯಲಿದೆ.

ಈ ಸ್ವದೇಶಿ ಮೇಳವನ್ನು ಸ್ವದೇಶಿ ಜಾಗರಣ್ ಮಂಚ್ ಆಯೋಜಿಸಿದೆ. ಸಮಾನತೆ ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆ ಎಂಬ ಧ್ಯೇಯದೊಂದಿಗೆ ಈ ಮೇಳವನ್ನು ಏರ್ಪಡಿಸಲಾಗಿದ್ದು ಯಾವುದೇ ತಾರತಮ್ಯವಿಲ್ಲದೆ ಜೊತೆಯಾಗಿ ಬದುಕೋಣ ಎಂದು ಈ ಮೇಳಕ್ಕೆ ನಾಮಕರಣ ಮಾಡಲಾಗಿದೆ. ಆದರೆ ಈ ಮೇಳದ ಆಯೋಜಕರು ಈ ಧ್ಯೇಯ ವಾಕ್ಯಕ್ಕೆ ಪೂರ್ಣ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಮಾಧ್ಯಮ ವರದಿಯು ತಿಳಿಸಿದೆ.

ಅವರು ನನ್ನ ಹೆಸರನ್ನು ಕೇಳಿದರು ಮತ್ತು ನಾನು ಮುಸ್ಲಿಮ್ ಎಂದು ಗೊತ್ತಾದ ತಕ್ಷಣ ನನ್ನ ಅಂಗಡಿಯನ್ನು ಬಂದ್ ಮಾಡಿಸಿದರು. ನಾವು ಒಟ್ಟು ಹತ್ತು ಅಂಗಡಿಯನ್ನು ಇಲ್ಲಿ ತೆರೆದಿದ್ದೆವು. ಮುಸ್ಲಿಮರಿಗೆ ಈ ಮೇಳಕ್ಕೆ ಅವಕಾಶ ಇಲ್ಲ ಎಂದು ಆಯೋಜಕರು ಹೇಳಿದರು. ನಾವು ನೀಡಿದ ಬಾಡಿಗೆ ಮತ್ತು ಪ್ರಯಾಣ ವೆಚ್ಚಗಳೆಲ್ಲ ನಷ್ಟವಾದವು ಎಂದು ಆಗ್ರಾದ ವ್ಯಾಪಾರಿ ಮುಹಮ್ಮದ್ ರಾಶಿದ್ ಹೇಳಿದ್ದಾರೆ. ಹಾಗೆಯೇ ವಕೀಲ್ ಅಹಮದ್ ಎಂಬ ವ್ಯಾಪಾರಿಯೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಮುಸ್ಲಿಂ ಎಂದು ಗೊತ್ತಾದ ತಕ್ಷಣ ನಮ್ಮನ್ನು ಇಲ್ಲಿಂದ ಹೋಗುವಂತೆ ಬಲವಂತ ಪಡಿಸಿದರು. ನಮ್ಮಂತೆ ಸುಮಾರು 15ರಿಂದ 20 ಮುಸ್ಲಿಂ ವ್ಯಾಪಾರಿಗಳನ್ನು ಹೀಗೆ ಇಲ್ಲಿಂದ ಹೊರ ಹಾಕಿದರು ಎಂದು ವಕೀಲ್ ಅಹ್ಮದ್ ಹೇಳಿದ್ದಾರೆ.

ಇದೇ ವೇಳೆ ದಾಮೊಹ್ ಜಿಲ್ಲಾಧಿಕಾರಿ ಸುಧೀರ್ ಕೋಚಾರ್ ಅವರು ಮಾಧ್ಯಮದೊಂದಿಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಈ ಮೇಳವನ್ನು ಸ್ವದೇಶಿ ಜಾಗರಣ ಮಂಚ್ ಏರ್ಪಡಿಸಿರುವುದರಿಂದ ಇಲ್ಲಿ ಯಾರು ಇರಬೇಕು ಮತ್ತು ಇರಬಾರದು ಎಂಬುದನ್ನು ನಿರ್ಧರಿಸುವ ಹಕ್ಕು ಅವರಿಗೆ ಇದೆ ಎಂದು ಸಮರ್ಥಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ