ಪಹಲ್ಗಾಮ್ ಉಗ್ರವಾದಿ ಕೃತ್ಯ: ಕೇಂದ್ರ ಸರಕಾರದ ರಕ್ಷಣಾ ವೈಫಲ್ಯ ಕಾರಣ | ಪ್ರಧಾನಿ, ರಕ್ಷಣಾ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು: ಜಾನಿ ಕೆ.ಪಿ. - Mahanayaka

ಪಹಲ್ಗಾಮ್ ಉಗ್ರವಾದಿ ಕೃತ್ಯ: ಕೇಂದ್ರ ಸರಕಾರದ ರಕ್ಷಣಾ ವೈಫಲ್ಯ ಕಾರಣ | ಪ್ರಧಾನಿ, ರಕ್ಷಣಾ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು: ಜಾನಿ ಕೆ.ಪಿ.

johnny k p
27/04/2025

ಪಹಲ್ಗಾಮ್ ನಲ್ಲಿ ನಡೆದಿರೋ ಭಯೋತ್ಪಾದಕ ದಾಳಿ ಅತ್ಯಂತ ಖಂಡನೀಯ. ಉಗ್ರವಾದ ಮನುಷ್ಯತ್ವದ ವಿರುದ್ದವಾದುದಾಗಿದೆ. ಉಗ್ರವಾದಿ ಮನೋಭಾವವೇ ಜಗತ್ತಿನಿಂದ ತೊಲಗಬೇಕಿದೆ. ಅದಕ್ಕಾಗಿ ಆಡಳಿತ ಪಕ್ಷಕ್ಕೆ ದೇಶದ ಪ್ರಜೆಗಳಾಗಿ ಬೆಂಬಲಕ್ಕೆ ನಿಲ್ಲಬೇಕಿರುವುದು ಪ್ರಜೆಗಳ ಕರ್ತವ್ಯ. ಹಾಗಿದ್ದರೂ ಆತ್ಮವಿಮರ್ಶೆ ಅತ್ಯಂತ ಅಗತ್ಯವಾಗಿದೆ ಎಂದು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ ಕೆ.ಪಿ. ಹೇಳಿದ್ದಾರೆ.

ಈ ಸಂಬಂಧ ಪ್ರಕಟಣೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು,  ದೇಶದ ರಕ್ಷಣಾ ಬಜೆಟಿನ ಸಿಂಹ ಗಾತ್ರದ ಮೊತ್ತ ವ್ಯಯಿಸಲ್ಪಡುತ್ತಿರೋದು ಜಮ್ಮು ಕಾಶ್ಮಿರದಲ್ಲಾಗಿದೆ. ಬಿಜೆಪಿಯವರ ಇಂಗಿತದಂತೆ 370 ಕಾಯ್ದೆಯನ್ನು ರದ್ದುಗೊಳಿಸಿದ್ದೂ ಆಯ್ತು, ಅಚ್ಚರಿಯೇನೆಂದರೆ ನಮ್ಮೂರಿನಲ್ಲಿ ಒಂದು ಜಾತ್ರೆಯೋ ,ಕೋಲವೋ ಅಥವಾ 500–1000 ಜನ ಸೇರುವ ಕಾರ್ಯಕ್ರಮದಲ್ಲಿ ಕನಿಷ್ಠ ಹತ್ತಿಪ್ಪತ್ತು ಪೊಲೀಸರು ಇರ್ತಾರೆ. ಆದರೆ ಸುಮಾರು ಐದು ಸಾವಿರ ಪ್ರವಾಸಿಗಳು ಸೇರುವ ದೇಶದ ಅತೀಸೂಕ್ಷ್ಮ ಪ್ರದೇಶದಲ್ಲಿ ಕನಿಷ್ಟ ಒಬ್ಬ ಪೊಲೀಸೂ ಇರಲಿಲ್ಲ ಎನ್ನೋದರ ಅರ್ಥವೇನು ? ಎಂದು ಅವರು ಪ್ರಶ್ನಿಸಿದ್ದಾರೆ.

ಕೃತ್ಯ ನಡೆದು ಅರ್ಧ ಗಂಟೆಗಳ ನಂತರ ಅಲ್ಲಿಗೆ  ಸೈನಿಕರು ಬಂದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಇದು ಏನನ್ನು ತಿಳಿಸುತ್ತದೆ ? ಹಾಗಾದರೆ ಪಹಲ್ಗಾಮಿನಲ್ಲಿ ರಕ್ಷಣಾವ್ಯವಸ್ಥೆ ಬೇಡ ಎಂದು ನಿರ್ಧರಿಸಲು ಕಾರಣವೇನು ? ಮಾತ್ರವಲ್ಲ ಸೈನಿಕರಿಗೆ ಮಾಹಿತಿ ತಿಳಿಯಲು ಅಷ್ಟು ತಡವಾಗಲು ಕಾರಣವೇನು ? ಮತ್ತು ಅವರಿಗೆ ತುರ್ತು ಸಂಚರಿಸಲು ಹೆಲಿಕಾಪ್ಟರ್ ನಂತಹ ವ್ಯವಸ್ಥೆಗಳು ಲಭ್ಯವಿರಲಿಲ್ಲವೇ ? ಇಂತಹಾ ಅನೇಕ ಪ್ರಶ್ನೆಗಳಿಗೆ ದೇಶದ ಆಡಳಿತ ಉತ್ತರಕೊಡಬೇಕಿದೆ. ಲಕ್ಷ, ಲಕ್ಷ ಕೋಟಿ ಖರ್ಚು ಮಾಡಿಯೂ  ಈ ರೀತಿ ಕೃತ್ಯ ನಡೆಯಿತು ಎನ್ನೋದು ರಕ್ಷಣಾ ವೈಫಲ್ಯವಲ್ಲದೆ ಇನ್ನೇನಾಗಲು ಸಾಧ್ಯ? ಎಂದು ಅವರು  ಪ್ರಶ್ನಿಸಿದ್ದಾರೆ.


Provided by

ಜಮ್ಮು ಕಾಶ್ಮೀರದಲ್ಲಿ ಇಷ್ಟು ದೊಡ್ಡ ಕೃತ್ಯ ನಡೆದು ಇಡೀ ದೇಶಕ್ಕೆ ದೇಶವೇ ಮರುಕಪಡುತ್ತಿರುವಾಗ ದೇಶದ ಪ್ರಧಾನಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿಲ್ಲ ?! ಹಾಗೇ ಸರ್ವಪಕ್ಷದ ಸಭೆ ಕರೆದಾಗ ಅದರಲ್ಲೂ ಭಾಗವಹಿಸಲಿಲ್ಲ ಯಾಕೆ ?! ಕನಿಷ್ಠ ಒಂದು ಪತ್ರಿಕಾಘೋಷ್ಟಿ ಕರೆದು ಮಾತನಾಡಿಲ್ಲ ಯಾಕೆ ?! ಬಿಹಾರದ ಚುನಾವಣಾ ಪ್ರಚಾರ ಈ ಎಲ್ಲಕ್ಕಿಂತಲೂ ಮಹತ್ವದ್ದಾಗಿತ್ತೇ ? ಜನರ ಜೀವದ ಬಗೆಗಿನ ಕಾಳಜಿಗಿಂತಲೂ ಇವರಿಗೆ ಬಿಹಾರದ ಚುನಾವಣಾ ಭಾಷಣವೇ ದೊಡ್ಡದಾಗಿತ್ತು ಎಂದಲ್ಲವೇ ?  ಎಂದು ಅವರು ಪ್ರಶ್ನಿಸಿದರು.

ಈ ಎಲ್ಲಾ ಕಾರಣಗಳಿಂದ ಸಾಮಾನ್ಯ ಜನಕ್ಕೆ ಅರ್ಥವಾಗೋದು ಕೇಂದ್ರ ಸರಕಾರದ ಇಂಟೆಲಿಜೆನ್ಸ್ ವ್ಯವಸ್ಥೆ ಸಂಪೂರ್ಣ ಕುಸಿದು, ದೇಶದ ರಕ್ಷಣಾ ವ್ಯವಸ್ಥೆಯನ್ನು ಕೇಂದ್ರ ಸರಕಾರ ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿಲ್ಲ ಎಂದಾಗಿದೆ. ಆದ್ದರಿಂದ ಪಹಲ್ಗಾಮ್ ನಲ್ಲಿ ನಡೆದಿರೋದು ಕೇಂದ್ರ ಸರಕಾರದ ಸಂಪೂರ್ಣ ರಕ್ಷಣಾ ವೈಫಲ್ಯ ಎನ್ನೋದು ಮೇಲ್ನೋಟಕ್ಕೆ ಕಾಣುತ್ತಿದೆ. ಇವರಿಗೆ ದೇಶದ ಬಗ್ಗೆ ಕಾಳಜಿಯಿದ್ದರೆ, ಈ ವೈಫಲ್ಯದ ಕಾರಣಕ್ಕಾಗಿ ಪ್ರಧಾನಿ ಮತ್ತು ರಕ್ಷಣಾ ಸಚಿವರು ಹೊಣೆಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ಹಾಗೆಯೇ ಕಲಬುರ್ಗಿಯಲ್ಲಿ ರಸ್ತೆ ಮೇಲೆ ಪಾಕಿಸ್ತಾನದ ಧ್ವಜ ಅಂಟಿಸಿದ್ದು, ಯಾರು ಎನ್ನೋದು ಈಗ ಸ್ಪಷ್ಟ, ಈ ಘಟನೆಯನ್ನು ಮುಂದಿಟ್ಟು ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭಪಡೆಯಲು ಮುಂದಾದವರಿಗೂ ಉಗ್ರವಾದಿ ಕೃತ್ಯ ನಡೆಸುವಾಗ ನಿನ್ನ ಧರ್ಮ ಯಾವುದೆಂದು ಕೇಳಿದವರಿಗೂ ಯಾವ  ವ್ಯತ್ಯಾಸವೂ  ಇಲ್ಲ, ಇಬ್ಬರದ್ದೂ ಉದ್ದೇಶ ಒಂದೇ ಆಗಿತ್ತು. ಭಾರತದಲ್ಲಿ ಹಿಂದೂ ಮುಸ್ಲಿಂ ಮತ್ತು ಇತರೇ ಧರ್ಮೀಯರು ಭಾರತೀಯರು ಎಂದು ಸಹಬಾಳ್ವೆ ನಡೆಸಬಾರದು ಎನ್ನೋದಾಗಿದೆ ಎಂದು ಜಾನಿ.ಕೆ.ಪಿ ಎಂದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ