ಉಗ್ರರ ಜೊತೆಗಿನ ಹೋರಾಟದಲ್ಲಿ ಯೋಧ ಹುತಾತ್ಮ: ನೊಂದ ತಾಯಿಯ ಕೈಗೆ ಬಲವಂತವಾಗಿ ಚೆಕ್ ಕೊಟ್ಟು ಫೋಟೋ ತೆಗೆಸಿಕೊಂಡ ಯುಪಿ ಸಚಿವ: ವ್ಯಾಪಕ ಟೀಕೆ

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗೆ ಹೋರಾಡುತ್ತಿದ್ದಾಗ ಹತರಾದ ಕ್ಯಾಪ್ಟನ್ ಶುಭಂ ಗುಪ್ತಾ ಅವರ ತಾಯಿ ಮನೆಗೆ ಹೋಗಿದ್ದ ವೇಳೆ ಉತ್ತರಪ್ರದೇಶದ ಸಚಿವರೊಬ್ಬರು ಯಡವಟ್ಟು ಮಾಡಿ ತೀವ್ರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ನೊಂದ ತಾಯಿಗೆ ಸಾಂತ್ವನ ಮಾಡಲು ಹೋಗಿದ್ದ ಯೋಗಿ ಆದಿತ್ಯನಾಥ್ ಸರ್ಕಾರದ ಸಂಪುಟ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು ಕ್ಯಾಪ್ಟನ್ ಗುಪ್ತಾ ಅವರ ತಾಯಿ ಅಳುತ್ತಿದ್ದಾಗ ಅದರ ಮಧ್ಯೆ ಚೆಕ್ ಹಸ್ತಾಂತರಿಸಲು ಪ್ರಯತ್ನಿಸುತ್ತಿರುವುದನ್ನು ಹಲವರು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಮುಂದಾಗಿದ್ದು, ಆಗ ಕ್ಯಾಪ್ಟನ್ ತಾಯಿ ನನಗೆ ಏನೂ ಬೇಡ ಎಂದು ಅಧಿಕಾರಿಯನ್ನು ತಡೆದಿದ್ದಾರೆ. ಆದರೆ ಸಚಿವರು ಬಲವಂತವಾಗಿ ಅವರ ಕೈಗೆ ಚೆಕ್ ಕೊಟ್ಟು ಕ್ಯಾಮರಾಗೆ ಫೋಸ್ ನೀಡಿದ್ದಾರೆ.
ಇದಕ್ಕೆ ವಿರೋಧ ಪಕ್ಷಗಳು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿವೆ. ಉದ್ಧವ್ ಠಾಕ್ರೆಯವರ ಪಕ್ಷದ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಇದೊಂದು “ಹೃದಯಹೀನ” ಘಟನೆ. ದುಃಖತಪ್ತ ತಾಯಿ ಸಮಾಧಾನದಿಂದ ಮನವಿ ಮಾಡಿದರೂ ಸಚಿವರಿಗೆ ಫೋಟೋ ಮುಖ್ಯವಾಗಿತ್ತು. ಇದು ನಾಚಿಕೆಗೇಡಿತನ ಎಂದು ಟೀಕಿಸಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರು, ನಾಚಿಕೆ ಇಲ್ಲದ ಬಿಜೆಪಿಯವರು. ಪ್ರಚಾರಕ್ಕಾಗಿ ಮಾಡುವುದನ್ನು ನಿಲ್ಲಬೇಕು ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗಿನ ಹೊರಾಟದಲ್ಲಿ ಹತರಾದ ಐವರು ಸೇನಾ ಸಿಬ್ಬಂದಿಗಳಲ್ಲಿ ಕ್ಯಾಪ್ಟನ್ ಶುಭಂ ಗುಪ್ತಾ ಕೂಡ ಒಬ್ಬರು. ಸರ್ಕಾರಿ ವಕೀಲರ ಪುತ್ರರಾದ ಕಗುಪ್ತಾ ಅವರು 2015 ರಲ್ಲಿ ಸೈನ್ಯಕ್ಕೆ ಸೇರಿದ್ದರು. 2018 ರಲ್ಲಿ 9 ಪ್ಯಾರಾ ಎಸ್ಎಫ್ (ವಿಶೇಷ ಪಡೆಗಳು) ಎಂದು ಹೆಚ್ಚು ಜನಪ್ರಿಯವಾಗಿ ಕರೆಯಲ್ಪಡುವ ಆರ್ಮಿಯ ಎಲೈಟ್ ಪ್ಯಾರಾಚೂಟ್ ರೆಜಿಮೆಂಟ್ನ ಒಂಬತ್ತನೇ ಬೆಟಾಲಿಯನ್ಗೆ ನಿಯೋಜಿಸಲ್ಪಟ್ಟಿದ್ದರು.