ಸ್ಟೀಲ್ ಕಂಪನಿಯಲ್ಲಿ ದುರಂತ: ನೀರಿನ ಸುರಂಗದಲ್ಲಿ ಕೊಚ್ಚಿಹೋದ ಮೂವರು ಸಾವು

ಬಳ್ಳಾರಿ: ಕೈಗಾರಿಕಾ ಕೇಂದ್ರ ತೋರಣಗಲ್ ನಲ್ಲಿರುವ ಜೆಎಸ್ ಡಬ್ಲ್ಯು ಸ್ಟೀಲ್ ಕಂಪನಿಯಲ್ಲಿ ಸಂಸ್ಥೆಯ ಮೂವರು ಉದ್ಯೋಗಿಗಳು ನೀರಿನ ಸುರಂಗದಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ಕಂಪನಿಯ ಸಿವಿಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹೊಸಪೇಟೆಯ ಗಂಟೆ ಜಡೆಪ್ಪ (31), ಚೆನ್ನೈನ ಶಿವಮಗದೇವ್ (22), ಬೆಂಗಳೂರಿನ ಸುಶಾಂತ್ ಕೃಷ್ಣ ನೈನಾರು (23) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ವಿದ್ಯುತ್ ಪೂರೈಕೆಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ಜೆಎಸ್ ಡಬ್ಲ್ಯು ಸ್ಟೀಲ್ ನ ಎಚ್ ಎಸ್ ಎಮ್–3 ಘಟಕದ ಸುರಂಗದಲ್ಲಿ ನೀರಿನ ಹರಿವು ಸ್ಥಗಿತಗೊಂಡಿತ್ತು. ಈ ವೇಳೆ ಸುರಂಗದ ಪರಿಶೀಲನೆ ನಡೆಸಲು ಮೂವರೂ ಸಿಬ್ಬಂದಿ ಅದರ ಒಳಗೆ ಪ್ರವೇಶಿಸಿದ್ದರು.
ಸಿಬ್ಬಂದಿ ಒಳಗಿರುವಾಗಲೇ ಸುರಂಗದಲ್ಲಿ ನೀರು ಏಕಾಏಕಿ ಪ್ರವಾಹವಾಗಿದೆ. ಆಗ ಮೂವರೂ ಕೊಚ್ಚಿಕೊಂಡು ಹೋಗಿ 70–80 ಅಡಿ ಆಳದ ಬೇರೆ ಬೇರೆ ಟ್ಯಾಂಕ್ ಗಳಲ್ಲಿ ಬಿದ್ದಿದ್ದಾರೆ.
ಗುರುವಾರ ರಾತ್ರಿ ಹೊತ್ತಿಗೆ ಎರಡು ಮೃತದೇಹಗಳು ಸಿಕ್ಕಿದ್ದವು. ಇನ್ನೊಬ್ಬರ ಮೃತದೇಹ ಶುಕ್ರವಾರ ಬೆಳಿಗ್ಗೆ ಸಿಕ್ಕಿದೆ. ಕಬ್ಬಿಣದ ಬಿಸಿ ಸರಳುಗಳನ್ನು ತಣಿಸಲು ಈ ಸುರಂಗಗಳ ಮೂಲಕ ನಿರಂತರವಾಗಿ ನೀರು ಹರಿಸಲಾಗುತ್ತದೆ. ಹೀಗೆ ಹರಿಸಿದ ನೀರು ವಿವಿಧ ಟ್ಯಾಂಕ್ ಗಳಲ್ಲಿ ಸಂಗ್ರಹವಾಗುತ್ತದೆ. ಈ ಸುರಂಗಳಲ್ಲಿನ ಸಮಸ್ಯೆ ಸರಿಪಡಿಸಲು ಈ ಮೂವರು ಸಿಬ್ಬಂದಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97