ಚಿಕ್ಕಮಗಳೂರು: ಬಸವಣ್ಣನವರನ್ನು ಬೈಯ್ಯಲು ಅವನ್ಯಾರು?: ಕನ್ನೇರಿ ಸ್ವಾಮೀಜಿ ವಿರುದ್ಧ ನಿವೃತ್ತ ಉಪನ್ಯಾಸಕ ಆಕ್ರೋಶ
ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕೊಲ್ಲಾಪುರದ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ವಿರುದ್ಧ ನಿವೃತ್ತ ಉಪನ್ಯಾಸಕರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸ್ವಾಮೀಜಿ ಅವರ ನಡೆ ಹಾಗೂ ಹೇಳಿಕೆಗಳ ವಿರುದ್ಧ ಅಸಮಾಧಾನ ಹೊರಹಾಕಿದ ನಿವೃತ್ತ ಉಪನ್ಯಾಸಕರು, ಕಲಾಮಂದಿರದ ಆವರಣದಲ್ಲೇ ತೀವ್ರ ವಾಗ್ದಾಳಿ ನಡೆಸಿದರು.
ನಮ್ಮ ಗುರುಗಳನ್ನು ಬೈಯಲು ಅವನ್ಯಾರು? ಉಪನ್ಯಾಸಕರ ಪ್ರಶ್ನೆ
“ಅವನಿಗೆ ‘ಗೋ ಬ್ಯಾಕ್’ (ಹಿಂದಕ್ಕೆ ಹೋಗು) ಎಂದು ಘೋಷಣೆ ಕೂಗಲು ನಾನು ಕಾಯುತ್ತಿದ್ದೆ, ಆದರೆ ಆತ ನನಗೆ ಸಿಗಲಿಲ್ಲ. ವಿಶ್ವಗುರು ಬಸವಣ್ಣನ ಅನುಯಾಯಿಗಳು ಇರುವ ಈ ನಾಡಿಗೆ ಬರಲು ಅವನಿಗೆ ಯಾವುದೇ ಅಧಿಕಾರವಿಲ್ಲ. ಧರ್ಮವನ್ನು ಒಡೆದು, ಅಪಪ್ರಚಾರ ಮಾಡುವ ಉದ್ದೇಶದಿಂದಲೇ ಆತ ಇಲ್ಲಿಗೆ ಬಂದಿದ್ದಾನೆ. ಲಿಂಗ ಧರಿಸಿರುವವರನ್ನು ದಾರಿ ತಪ್ಪಿಸಲು ಸಂಚು ರೂಪಿಸುತ್ತಿದ್ದಾನೆ” ಎಂದು ಉಪನ್ಯಾಸಕರು ಕಿಡಿಕಾರಿದರು.
ಮುಂದುವರಿದು ಮಾತನಾಡಿದ ಅವರು, “ಕನ್ನೇರಿ ಸ್ವಾಮೀಜಿ ಯಾವುದೋ ಒಂದು ಸಂಘಟನೆಗೆ ಗುಲಾಮನಾಗಿದ್ದಾನೆ. ಕೋಟಿ ಕೋಟಿ ಹಣ ಕೊಟ್ಟು ಆತನನ್ನು ಬುಕ್ ಮಾಡಲಾಗಿದೆ. ಅವನು ಕೇವಲ ಒಬ್ಬ ಗುಲಾಮ. ನಮ್ಮ ಪೂಜ್ಯ ಗುರುಗಳನ್ನು ಬೈಯಲು ಅವನಿಗೆ ಎಷ್ಟು ಧೈರ್ಯ? ಬಸವಣ್ಣನ ಅನುಯಾಯಿಗಳನ್ನು ಆತ ‘ತಾಲಿಬಾನಿಗಳು’ ಎಂದು ಕರೆದಿದ್ದಾನೆ. ವಿಶ್ವಗುರು ಬಸವಣ್ಣನವರಿಗೆ ಈ ಮೂಲಕ ಘೋರ ಅಪಮಾನ ಮಾಡಲಾಗಿದೆ. ಖಾವಿ ತೊಟ್ಟ ಧರ್ಮಗುರುಗಳ ಬಾಯಲ್ಲಿ ಇಂತಹ ಕೆಟ್ಟ ಮಾತುಗಳು ಬರಬಾರದು” ಎಂದು ತೀವ್ರ ಬೇಸರ ಹಾಗೂ ಆಕ್ರೋಶ ಹೊರಹಾಕಿದರು.
ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದ ನಿಮಿತ್ತ ಕನ್ನೇರಿ ಶ್ರೀಗಳು ಚಿಕ್ಕಮಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದ್ದು, ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























