ಊಟದ ನಂತರ ಹಾಳೆಯ ಪ್ಲೇಟ್ ಎಸೆಯಲು ಹೋದಾಗ ಕುಸಿದು ಬಿದ್ದ ನೀರಿನ ಟ್ಯಾಂಕ್: ಮಹಿಳೆ ಸಾವು

31/01/2024
ಉಡುಪಿ: ದೇವಸ್ಥಾನದಲ್ಲಿ ಭೋಜನ ಸೇವಿಸಿದ ಬಳಿಕ ಹಾಳೆಯ ಪ್ಲೇಟ್ ಎಸೆಯಲು ಹೋದ ಮಹಿಳೆಯ ಮೇಲೆ ನೀರಿನ ಟ್ಯಾಂಕ್ ಕುಸಿದು ಬಿದ್ದು, ಮಹಿಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಂದಳಿಕೆ ಶ್ರೀಮಹಾಮ್ಮಾಯಿ ದೇವಸ್ಥಾನದಲ್ಲಿ ನಡೆದಿದೆ.
ಶ್ರೀಲತಾ(50) ಮೃತಪಟ್ಟವರಾಗಿದ್ದಾರೆ. ಇವರು ಬೆಳ್ಮಣ್ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿದ್ದಾರೆ.
ನಂದಳಿಕೆ ಶ್ರೀಮಹಾಮ್ಮಯಿ ದೇವಸ್ಥಾನದ ವಾರ್ಷಿಕ ಮಾರಿ ಪೂಜೆ ಕಾರ್ಯಕ್ರಮ ಮಂಗಳವಾರ ನಡೆದಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಊಟದ ನಂತರ ಹಾಳೆಯ ಪ್ಲೇಟ್ ಎಸೆಯಲು ತೆರಳಿದ್ದರು. ಈ ವೇಳೆ ಏಕಾಏಕಿ ಕೆಂಪು ಕಲ್ಲಿನಲ್ಲಿ ಕಟ್ಟಲಾಗಿದ್ದ ನೀರಿನ ಟ್ಯಾಂಕ್ ಕುಸಿದು ಮೈಮೇಲೆಯೇ ಬಿದ್ದಿದ್ದು, ಪರಿಣಾಮವಾಗಿ ಶ್ರೀಲತಾ ಅವರು ಸಾವನ್ನಪ್ಪಿ ಅವರ ಮಗಳು ಪೂಜಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಕಾರ್ಕಳ ಗ್ರಾಮಾಂತತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.