ಯುವ ಜನತೆಯ ಸವಾಲುಗಳು ಮತ್ತು ಚಟಗಳು

“ಮನಸ್ಸಿನ ಬೆಳವಣಿಗೆ ಮಾನವ ಅಸ್ತಿತ್ವದ ಅಂತಿಮ ಗುರಿಯಾಗಿರಬೇಕು” — ಡಾ.ಬಿ.ಆರ್.ಅಂಬೇಡ್ಕರ್
ಮಹನೀಯರ ಅನುಭವದ ದಾರಿಯಲ್ಲಿ ನಡೆಯಬೇಕಾದ ಯುವಕರು ತಮ್ಮ ಜೀವನದ ಗುರಿಯನ್ನೇ ಮರೆತು ಮಾಯದ ಬದುಕಿಗೆ ಸಿಲುಕಿ ನಲುಗಿ ಹೋಗುತ್ತಿದ್ದಾರೆ. ಜೀವ ಜಗತ್ತಿನಲ್ಲಿ ಶ್ರೇಷ್ಟವಾದ ಸ್ಥಾನ ಪಡೆದಿರುವ ಮಾನವನು, ತನ್ನೆಲ್ಲಾ ಬುದ್ಧಿ ಶಕ್ತಿಯನ್ನೂ ಆಡಂಬರದ ಜೀವನಶೈಲಿಗೆ ಕೊಟ್ಟು, ಮನುಷ್ಯತ್ವವನ್ನೇ ಮರೆತು ಹೋಗುವ ಸುಳಿಯಲ್ಲಿ ಸಿಲುಕಿದ್ದಾನೆ.
ಎಲ್ಲೆಲ್ಲಿಯೂ ಬೂಟಾಟಿಕೆಯ ಜಗತ್ತು, ಮೋಸದಾಟ, ಡ್ರಗ್ಸ್ ದಂಧೆ, ಜೂಜಾಟ, ಮಾನವ ಕಳ್ಳ ಸಾಗಾಣೆ, ಹನಿಟ್ರ್ಯಾಪ್, ಅತ್ಯಾಚಾರಗಳು, ಚಿನ್ನದ ಕಳ್ಳ ಸಾಗಾಣೆ, ದೇವರ ಹೆಸರಿನಲ್ಲಿ ಮೋಸ, ಪ್ರೀತಿ ಹೆಸರಿನಲ್ಲಿ ಮೋಸ, ಮಕ್ಕಳ ಕಳ್ಳತನ, ಮನೆ ದೋಚುವುದು, ರಸ್ತೆ ರಾಬರಿ, ಸೈಬರ್ ಕ್ರೈಂ, ಆನ್ ಲೈನ್ ಫ್ರಾಡ್, ಎಐ ಫೇಕ್ ವಿಡಿಯೋ, ಸರ್ಕಾರಿ ಭೂಗಳ್ಳತನ, ಸರ್ಕಾರಿ ಕೆಲಸದ ಮಾರಾಟ, ಕೋಮುಗಲಭೆಗಳು, ಪ್ರತಿಷ್ಟೆಗಾಗಿ ಕೊಲೆ, ಸುಪಾರಿಗಾಗಿ ಕೊಲೆ, ಪ್ರೀತಿಗಾಗಿ ಕೊಲೆ, ಮರ್ಯಾದಾ ಹತ್ಯೆ, ಆಸ್ತಿಗಾಗಿ ಕೊಲೆ, ಧಾರ್ಮಿಕ ಮತಾಂದತೆ, ಜಾತೀಯತೆ, ವ್ಯಕ್ತಿಗಳ ಅಂಧ ವೈಭವೀಕರಣ, ಎಲ್ಲೆಡೆ ಕಾಣಸಿಗುವ ಪುಡಿ ರೌಡಿಗಳ ಎಗ್ಗು ಸಿಗ್ಗು ಇಲ್ಲದ ಪೋಸ್ಟರ್ಗಳು, ಬ್ಯಾನರ್ಗಳು, ಸೋಷಿಯಲ್ ಮೀಡಿಯಾ ಷೋ ಆಫ್ಗಳು, ಆನ್ಲೈನ್ ಗೇಮ್ ಮತ್ತು ಬೆಟ್ಟಿಂಗ್ ವ್ಯಸನಗಳು………. ಅಬ್ಬಬ್ಬಾ..! ಹೇಳಿದಷ್ಟು ಹೆಚ್ಚುತ್ತಲೇ ಇರುವ ಸಮಾಜದಲ್ಲಿನ ಅನಾಚಾರಗಳ ಸಾಲುಗಳು ಇವುಗಳೆಲ್ಲಕ್ಕೂ ಕಡಿವಾಣವೇ ಇಲ್ಲವೇ..? ಇವೆಲ್ಲವೂ ನಿಜಕ್ಕೂ ಮನುಷ್ಯತ್ವದ ಹಾದಿಯೇ..?
ಇಂದಲ್ಲ ನಾಳೆ ತನಗೆ ಸಾವು ನಿಶ್ಚಿತ ಎಂದು ತಿಳಿದಿರುವ ಮಾನವ ಇಷ್ಟು ಹೇಯ ಕೃತ್ಯಗಳಿಗೆ ದಾಸನಾದರೆ ಇನ್ನು ಭೂಮಿಯ ಮೇಲೆಯೇ ಮನುಷ್ಯ ಶಾಶ್ವತವಾಗಿ ಇದ್ದುಬಿಡುವುದಾಗಿದ್ದರೆ! ಇವೆಲ್ಲವೂ ಇನ್ನೂ ಎಷ್ಟರ ಮಟ್ಟಿಗೆ ತಲುಪುತ್ತಿದ್ದೆಂಬುದು ಊಹೆಗೂ ನಿಲುಕದ್ದಾಗಿದೆ. ಸ್ವಚ್ಚಂದ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸಬೇಕಿರುವ ಮಾನವನು ತನ್ನನ್ನು ತಾನು ದ್ವೇಷ, ಅಸೂಯೆ, ಪ್ರತಿಷ್ಟೆ, ಅಹಂ, ದುಡ್ಡಿನ ದಾಹ, ಕಾಮದ ತೃಷೆಯಲ್ಲಿ ತನ್ನ ದಿನಗಳನ್ನು ಸಾಗಿಸುತ್ತಿದ್ದಾನೆ. ಇದರ ಪ್ರತೀಕವಾಗಿಯೇ ಎಲ್ಲೆಲ್ಲಿಯೂ ಅಪರಾದ ಪ್ರಕರಣಗಳು ಹೆಚ್ಚುತ್ತಿರುವುದು.
ಭಾರತದ ಜನಸಂಖ್ಯೆ ಅಂಕಿ ಸಂಖ್ಯೆಗಳ ಮತ್ತು ಕೆಲವೊಂದು ಅಧ್ಯಯನದ ಪ್ರಕಾರ ಭಾರತದ ಜನಸಂಖ್ಯೆಲ್ಲಿ ಶೇ.50% ರಷ್ಟು ಯುವಕರು 25 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು, ಶೇ 30% ರಷ್ಟು 10—25 ವರ್ಷದೊಳಗಿನವರು ಹಾಗೂ ಅಂದಾಜು ಶೇ.40% ರಷ್ಟು ಜನರು 16—30 ವರ್ಷದೊಳಗಿನವರಾಗಿದ್ದಾರೆಂದು ಹೇಳುತ್ತವೆ.
ಬೆಳೆಯುವ ಮುಗ್ಧ ಮನಸುಗಳು ಯಾವುದನ್ನು ಮಾದರಿಯಾಗಿ ಪಡೆಯತ್ತಿವೆ..? ಯಾವ ಸೈದ್ಧಾಂತಿಕತೆಯನ್ನು ಮಾದರಿಯಾಗಿ ಪಡೆಯುತ್ತಿವೆ? ಸ್ವಾತಂತ್ರ ಹೋರಾಟಗಾರರ, ಸಮಾಜಪರಿವರ್ತಕರ ಸಾಧನೆಗಳು ಕೇವಲ ಪುಸ್ತಕದ ಓದಿಗೆ ಮಾತ್ರ ಸೀಮಿತವಾಗಿವೆ. ಇಂದು ಸಮಾಜದಲ್ಲಿರುವ ಸಮಸ್ಯೆಗಳನ್ನು ಯುವಜನತೆ ಪ್ರಶ್ನೆ ಮಾಡುವ ದೈರ್ಯ ತೋರುತಿಲ್ಲ. ಅದನ್ನೊರತು ಪಡಿಸಿ ಹೊರಗಿನ ಜಗತ್ತಿಗೆ ಕಾಣುವುದೆಲ್ಲವೂ ಬರೀ ಪುಡಿ ರೌಡಿಗಳ ಬ್ಯಾನರ್ ಗಳು, ಪೋಸ್ಟರ್ಗಳು ಮತ್ತು ಸೋಷಿಯಲ್ ಮೀಡಿಯಾ ಷೋ-ಆಫ್ಗಳು. ಇವುಗಳೇ ಬದುಕು ಇರಬಹುದೇನೋ ಎಂದು ಮಾದರಿಯಾಗಿ ತೆಗೆದುಕೊಳ್ಳುವ ಯುವಜನತೆ ಅವರ ಮಾದರಿಯಂತೆಯೇ ಪುಡಿ ರೌಡಿಗಳ ವರ್ತನೆ, ಹಾಗೂ ಸೋಷಿಯಲ್ ಮೀಡಿಯಾದ ರೀಲ್ಸ್ಗಳಿಗೆ ಅಂಟಿಕೊಂಡು ತನ್ನ ಮುಂದಿನ ಭವಿಷ್ಯದ ಜೀವನದ ಓದು ಮತ್ತು ಗುರಿಗಳನ್ನು ಮರೆತುಬಿಟ್ಟಿದ್ದಾರೆ. ಇವೆಲ್ಲವೂ ಸಾಧನೆಯ ಶಿಖರಗಳೇ..? ಇನ್ನಾದರೂ ಯುವಜನರು ಈ ಕಡೆಗೆ ಗಮನ ಹರಿಸುವರೇ..? ತಿಳಿಯದು.
ತಂದೆ–ತಾಯಿ ಪೋಷಕರುಗಳು ತಾವು ಎಚ್ಚೆತ್ತುಕೊಂಡು ತಮ್ಮ ಮಕ್ಕಳಿಗೆ ಓದು ಮತ್ತು ಕೌಶಲ್ಯಭರಿತ ಜೀವನದ ಕಡೆ ಅವರನ್ನು ಎಳೆದುತಂದರೆ ಮಾತ್ರ ಅವರ ಉದ್ದಾರ ಸಾಧ್ಯವೇ ಹೊರತು, ಅವರಿಗೆ ಮೊಬೈಲ್ ಗೀಳು, ಗೇಮ್ಸ್ ಗೀಳು ಹಿಡಿಯಲು ಬಿಟ್ಟರಂತೂ, ಮಕ್ಕಳು ಹುಚ್ಚು ರೀಲ್ಸ್ಗಳನ್ನೇ ಅನುಕರಣೆ ಮಾಡಿ, ವ್ಯರ್ಥ ಷೋಕಿ ಮತ್ತು ಪುಡಿ ರೌಡಿಗಳ ಜೀವನವನ್ನೇ ಮಾದರಿಯಾಗಿ ತೆಗೆದುಕೊಂಡು ಅವುಗಳ ದಾಸರಾಗುತ್ತಾರೆ.
ಮನುಜನ ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಲ್ಲ, ಹೊರತಾಗಿ ಮತ್ತೊಬ್ಬರ ಜೀವನ ಶೈಲಿಯನ್ನು ಅಳವಡಿಸಿಕೊಂಡು ವೇಗವಾಗಿ ಶ್ರೀಮಂತಿಕೆ ಪಡೆಯುವುದಕ್ಕೆ ಜನ ತಮ್ಮನ್ನು ಹೆಚ್ಚು ಹೆಚ್ಚು ಮುನ್ನಡೆಸಿಕೊಳ್ಳುತ್ತಿದ್ದಾರೆ.
ದುಡಿಮೆ ಇಲ್ಲದೇ, ಬೆವರು ಸುರಿಸದೇ, ಕುಂತಲ್ಲೇ ಶ್ರೀಮಂತಿಕೆ ಪಡೆಯುವ ಹಂಬಲ ಇಂದಿನ ಯುವ ಪೀಳಿಗೆಯು ಮೈಗೂಡಿಸಿಕೊಳ್ಳದಿದ್ದರೆ ಸಾಕು. ಪೀಳಿಗೆಯಿಂದ ಪೀಳಿಗೆಗೆ ಟ್ರೆಂಡ್ ಬದಲಾಗುತ್ತಾ ಹೋಗುತ್ತಿದ್ದರೂ ಕೂಡ, ಯಾವುದು ತನಗೆ ಒಳ್ಳೆಯದು, ಯಾವುದು ತನಗೆ ಕೆಟ್ಟದು ಎಂಬುದನ್ನು ತಿಳಿಯುವಲ್ಲಿ ಇಂದಿನ ಪೀಳಿಗೆ ಸೋತಿದೆ. ಬದಲಾಗಿ ಮೇಲ್ನೋಟಕ್ಕೆ ಕಾಣುವ ಎಲ್ಲವನ್ನೂ ಸತ್ಯವೇ ಎಂದು ನಂಬಿ ಬೇಡದ ಷೋಕಿಗೆ ಬಿದ್ದು, ತನ್ನ ತಂದೆ-ತಾಯಿಗಳಿಗೆ ಮತ್ತು ಸಮಾಜಕ್ಕೆ ಹೊರೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆಲ್ಲಾ ಪ್ರಮುಖ ಕಾರಣ ಸೋಷಿಯಲ್ ಮೀಡಿಯಾ ಎಂದರೆ ತಪ್ಪಾಗಲಾರದು. ವ್ಯಕ್ತಿಗತ ಅಂಧ ಶ್ರದ್ಧೆಯು ಯಾವುದೊ ವ್ಯಕ್ತಿಯ ವೈಯಕ್ತಿಕ ಮೆರವಣಿಗೆಗಾಗಿ ಉಳಿದೆಲ್ಲಾ ಯುವ ಜನತೆ ಅವರ ಹಿಂದೆ ಬೀಳುವುದು ದಿನವಿಡೀ ಅವರ ಜೊತೆಯಲ್ಲಿ ವ್ಯರ್ಥ ಕಾಲಹರಣ ಮಾಡುವುದು, ಫ್ಯಾನ್ ಫಾಲೋಯಿಂಗ್ ಹೆಸರಿನಲ್ಲಿ ವ್ಯಕ್ತಿಗಳ ವೈಭವೀಕರಣದಲ್ಲಿ ತೊಡಗುವ ಯುವಜನತೆ ತನ್ನ ಏಳಿಗೆಯನ್ನು ಮರೆತಿರುವುದು ನಿಜಕ್ಕೂ ಸೋಜಿಗವೇ ಸರಿ.
ತಮಿಳು ಚಿತ್ರನಟ ಅಜಿತ್ ರವರು ಒಂದು ಸಂದರ್ಶನದಲ್ಲಿ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ. “ಕೇವಲ ವ್ಯಕ್ತಿಗಳ ವೈಭವೀಕರಣದಲ್ಲಿ ತೊಡಗುವ ಬದಲು, ನೀವು ನಿಮ್ಮ ಜೀವನದ ಕಡೆಯೂ ಗಮನ ಹರಿಸಿ, ನಮ್ಮ ಅಭಿಮಾನಿಗಳು ಚೆಂದ ಜೀವನ ನಡೆಸಿದರೆ, ನಾವೂ ಸಹ ಸಂತೋಷಗೊಳ್ಳುತ್ತೇವೆ” ಎಂದು, ಇದು ಒಬ್ಬ ಚಿತ್ರನಟ ಮಾತ್ರವಲ್ಲದೇ, ಒಬ್ಬ ಸಮಾಜಮುಖಿ ಸಹೃದಯಿ ಹೇಳುವಂತಹ ಮಾತುಗಳಾಗಿರುತ್ತವೆ. ಇವರ ಮಾತಿನಲ್ಲಿ ಎಷ್ಟು ಸೂಕ್ಷ್ಮತೆ ಅಡಗಿದೆ ಎಂಬುದನ್ನು ಅರಿತವರು ಹೆಚ್ಚಿನ ಸಮಯವನ್ನು ತನ್ನ ಏಳಿಗೆಯಲ್ಲಿಯೇ ಕಳೆಯುತ್ತಾರೆ.
ಇಂದಿನ ಯುವ–ಜನತೆಯು ತನಗಿಂತ ಪರರ ಬಗ್ಗೆ ಹೆಚ್ಚಿನ ಆಲೋಚನೆಯಲ್ಲಿ ತೊಡಗಿರುವುದು ಎಲ್ಲರಿಗೂ ಕಾಣುವಂತಹ ಸತ್ಯ, ಅದಕ್ಕೂ ಮೀರಿ ಜನತೆಯು ತನ್ನ ಬಗ್ಗೆ ಯಾವಾಗ ಯೋಚನೆ ಮಾಡುತ್ತಾರೆ? ತನ್ನ ಪರಿವಾರದ ಬಗ್ಗೆ ಯಾವಾಗ ಯೋಚನೆ ಮಾಡುತ್ತಾರೆ? ತನ್ನದೇ ದುಡಿಮೆಯಲ್ಲಿ ತಾನೇ ಖರ್ಚು ಮಾಡಿ, ಇನ್ನೊಬ್ಬ ವ್ಯಕ್ತಿಯ ವೈಭವೀಕರಣದಲ್ಲಿ ತೊಡಗುವ ಮೊದಲು, ತನಗಾಗಿ ಮತ್ತು ತನ್ನ ಪರಿವಾರಕ್ಕಾಗಿ ಮೊದಲು ಖರ್ಚು ಮಾಡಿ, ತನ್ನ ಉದ್ದಾರದಲ್ಲಿ ತೊಡಗಿದರೆ, ನಾಳೆ ದಿನ ತಾನೂ ಸಹ ಎಲ್ಲರಿಗಿಂತಲೂ ಎತ್ತರಕ್ಕೆ ಬೆಳಯಬಹುದಾದ ಅವಕಾಶಗಳು ಇರುತ್ತವೆ. ಇದೀಗ ಕೆಲಸವಿಲ್ಲದೇ ಕಾಲಹರಣ ಮಾಡಿ, ಮತ್ತಾವುದೋ ಸಣ್ಣ ಪುಟ್ಟ ದುಡಿಮೆಯಿಂದ ಗಳಿಸಿದ ಹಣವನ್ನು ವ್ಯಕ್ತಿಗಳ ಹುಟ್ಟುಹಬ್ಬದ ಹೆಸರಿನಲ್ಲಿ ಅತಿಯಾಗಿ ಖರ್ಚು ಮಾಡಿ, ಜೇಬು ಖಾಲಿ ಮಾಡಿಕೊಂಡು ಕೂರುವ ವ್ಯಕ್ತಿಗೆ ಮುಂದೆ ಕಾಣುವ ದಾರಿಯೇ…… ಸುಪಾರಿಗಾಗಿ ಕೊಲೆ, ದರೋಡೆ, ರಸ್ತೆ ರಾಬರಿ, ಮತ್ತೊಬ್ಬರ ದುಡಿಮೆಯನ್ನು ಕಿತ್ತು ತಿನ್ನುವ ಮೀಟರ್ ಬಡ್ಡಿ ದಂಧೆ; ಅನಾಚಾರದ ಹಾದಿಯು ಖಾಲಿ ಜೇಬು ಮತ್ತು ಹೊಟ್ಟೆಯ ಹಸಿವಿನಿಂದಲೇ ಮೊದಲಾಗುತ್ತದೆ.
ಎಲ್ಲೋ ಮತ್ತೊಬ್ಬರಿಗೆ ಮೋಸ ಮಾಡಿ ಷೋಕಿ ಮಾಡಿಕೊಂಡು ಜೀವನ ಸಾಗಿಸುವವರ ನಿಜ ಜೀವನದ ಬಗ್ಗೆ ಅಮಾಯಕ ಯುವ-ಜನತೆಗೆ ಅರಿವಿದೆಯೇ..? ಇಂದು ತಾನು ವೈಭವೀಕರಿಸುತ್ತಿರುವ ವ್ಯಕ್ತಿಯೇ ಬಂದು ಮುಂದೊಂದು ದಿನ ನಮಸ್ಕರಿಸುವಷ್ಟರ ಮಟ್ಟಿಗೆ ಬೆಳೆಯಬೇಕೆ ವಿನಃ ಎಷ್ಟು ದಿನಗಳ ಕಾಲ ಮತ್ತೊಬ್ಬರ ಫ್ಯಾನ್ಸ್ ಮತ್ತು ಫಾಲೋಅರ್ಸ್ ಎಂದು ಹೇಳಿಕೊಂಡು ತಿರುಗಲು ಸಾಧ್ಯ..? ಷೋಕಿ ಮಾಡುವ ವ್ಯಕ್ತಿಗಳು ತನ್ನ ಕುಟುಂಬಕ್ಕೆ ಹೊರಿಯಾಗಿಯೂ, ತನ್ನ ಜೀವನದಲ್ಲಿ ಬದುಕುತ್ತಿರುವ ರೀತಿಯೂ, ಮತ್ತಾವುದೋ ಅನೈತಿಕತೆಯಲ್ಲಿ ತೊಡಗಿಯೋ, ಇನ್ನೊಬ್ಬರಿಗೆ ಮಾಡುವ ಮೋಸದಿಂದ ಹಣಗಳಿಸಿ ಮತ್ತೊಬ್ಬರ ದುಡಿಮೆಯನ್ನು ಕಿತ್ತು ಷೋಕಿ ಮಾಡುತ್ತಿರುವ ಜೀವನಗಳನ್ನು ಮಾದರಿಯಾಗಿ ಯುವ-ಜನತೆ ಯಾಕೆ ಅನುಕರಣೆ ಮಾಡುತ್ತಿದೆ..? ಸೋಷಿಯಲ್ ಮೀಡಿಯಾದ ರೀಲ್ಸ್ಗಳಲ್ಲಿ ಕೆಲವೊಂದಷ್ಟು ಜೀವನಕ್ಕೆ ಬೇಕಾದ ಅದ್ಬುತ ವಿಡಿಯೋಗಳನ್ನು ಕಾಣಬಹುದಾದರೂ ಅಂತಹ ಉಪಯುಕ್ತ ವಿಡಿಯೋಗಳನ್ನು ನೋಡುವವರ ಸಂಖ್ಯೆ ಕಡಿಮೆ, ಮತ್ತು ಅವುಗಳ ವೀಕ್ಷಕರೂ ಸಹ ಪ್ರಬುದ್ಧರಾಗಿರುತ್ತಾರೆ. ಇದನ್ನೊರತುಪಡಿಸಿ ವ್ಯಕ್ತಿಗಳ ಷೋಕಿ, ವ್ಯಕ್ತಿಗಳ ವೈಭವೀಕರಣದ ವಿಡಿಯೋಗಳ ವೀಕ್ಷಣೆ ಸಂಖ್ಯೆ ಅತಿ ಹೆಚ್ಚು, ಮತ್ತು ಅವುಗಳ ವೀಕ್ಷಕರೂ ಸಹ ಹೆಚ್ಚಾಗಿ ಯುವಜನತೆಯೇ ಆಗಿರುತ್ತಾರೆ.
ನ್ಯಾಯವಾಗಿ ಬದುಕುವವನ ಮನಸ್ಸು ಆರೋಗ್ಯಯುತವಾಗಿರುತ್ತದೆ. ಯಾವುದೇ ಕಲ್ಮಶವಿಲ್ಲದ ಶುದ್ದ ಹೃದಯದಿಂದ ಕೂಡಿರುತ್ತದೆ. ಇದನ್ನೇ ರೂಡಿಯಲ್ಲಿ ಇರಿಸಿಕೊಳ್ಳುವ ಬದಲು ಮತ್ತೊಬ್ಬರ ಅಶುದ್ಧ, ದ್ರೋಹ ಮತ್ತು ಕಲ್ಮಶಯುಕ್ತ ಜೀವನವನ್ನು ಯುವ-ಜನತೆ ಅನುಕರಣೆ ಮಾಡಲು ಹೊರಟಿರುವುದು ಅವರಿಗೆ ಶೋಭೆಯೇ..? ಯಾವ ಸಾಧನೆಗಾಗಿ ತಮ್ಮ ಹೆಜ್ಜೆ..? ಯಾವ ಕನಸಿಗಾಗಿ ತಮ್ಮ ತವಕ..? ಎಂಬುದನ್ನು ಯುವ ಪೀಳಿಗೆ ತಮಗೆ ತಾವೇ ಪ್ರಶ್ನಿಸಿಕೊಳ್ಳಬೇಕಿದೆ ಹಾಗೂ ತಮ್ಮ ಉಜ್ವಲ ಭವಿಷ್ಯಕ್ಕಾಗಿ ಇನ್ನಾದರೂ ಒಳ್ಳೆಯ ಕೆಲಸ ಮಾಡಲು ಯೋಚಿಸಬೇಕಿದೆ. ಜೊತೆಗೆ ಮಹನೀಯರ ಆದರ್ಶಗಳನ್ನು ಪಾಲಿಸಬೇಕಿದೆ.
ಮಾನವ ಅಭಿವೃದ್ಧಿಯಲ್ಲಿ ಭಾರತ ದೇಶ ಇನ್ನೂ ಹೆಚ್ಚು ಸಾದಿಸಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾದ ಸಾದನೆ ಮಾಡಬೇಕಿದೆ. ಬಡತನ ನಿರುದ್ಯೋಗ ಆರೋಗ್ಯ ವಿಚಾರಗಳಲ್ಲಿಯೂ ಸಾಕಷ್ಠು ಸಾದಿಸಬೇಕಿದೆ. ಇದೆಲ್ಲವೂ ಸಾದ್ಯವಾಗಬೇಕಾದರೆ ಯುವಕರು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಆ ಕಡೆಗೆ ಯುವಕರನ್ನು ಆಕರ್ಷಿಸುವಲ್ಲಿ ಸರ್ಕಾರಗಳು ಉತ್ತಮ ಯೋಜನೆಗಳನ್ನು ರೂಪಿಸಬೇಕಿದೆ ಎಂಬ ಆಶಯಗಳೊಂದಿಗೆ ಒಳ್ಳೆಯ ದಿನಗಳನ್ನು ಕಾದುನೋಡೋಣ.
- ಶ್ರೀಮತಿ ಪ್ರಿಯಾಂಕ ನಾಗೇಶ್
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: