ಪರಪ್ಪನ ಅಗ್ರಹಾರದಲ್ಲಿ ಡಿಜಿಪಿ ಅಲೋಕ್ ಕುಮಾರ್ ಖಡಕ್ ಪರಿಶೀಲನೆ: ದರ್ಶನ್ ಗೆ ‘ಮ್ಯಾನ್ಯುವಲ್’ ಪಾಠ, ಪ್ರಜ್ವಲ್ ರೇವಣ್ಣಗೆ ‘ವಿಶೇಷ ಕ್ಲಾಸ್’! - Mahanayaka

ಪರಪ್ಪನ ಅಗ್ರಹಾರದಲ್ಲಿ ಡಿಜಿಪಿ ಅಲೋಕ್ ಕುಮಾರ್ ಖಡಕ್ ಪರಿಶೀಲನೆ: ದರ್ಶನ್ ಗೆ ‘ಮ್ಯಾನ್ಯುವಲ್’ ಪಾಠ, ಪ್ರಜ್ವಲ್ ರೇವಣ್ಣಗೆ ‘ವಿಶೇಷ ಕ್ಲಾಸ್’!

dgp alok kumar.jpg
17/08/2026

ಬೆಂಗಳೂರು: ರಾಜಧಾನಿಯ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಇತ್ತೀಚೆಗೆ ದಿಢೀರ್ ಭೇಟಿ ನೀಡಿದ್ದ ರಾಜ್ಯ ಜೈಲುಗಳ ಮಹಾನಿರ್ದೇಶಕರಾದ (ಡಿಜಿಪಿ) ಅಲೋಕ್ ಕುಮಾರ್ ಅವರು, ಹೈಫ್ರೊಫೈಲ್ ಕೈದಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇಬ್ಬರಿಗೂ ಜೈಲು ನಿಯಮಾವಳಿಗಳ ಕುರಿತು ಅಧಿಕಾರಿಗಳು ಸ್ಪಷ್ಟ ಹಾಗೂ ಖಡಕ್ ಎಚ್ಚರಿಕೆ ನೀಡಿದ್ದಾರೆ.
“ಮ್ಯಾನ್ಯುವಲ್ನಲ್ಲಿದ್ದರೆ ಮಾತ್ರ ಸೌಲಭ್ಯ”: ದರ್ಶನ್ ಗೆ ಡಿಜಿಪಿ ತಿರುಗೇಟು
ಜೈಲಿನಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆಯಲ್ಲಿ ನಟ ದರ್ಶನ್, “ಜೈಲಿನಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಏನಾದರೂ ಪರಿಹಾರ ಮಾಡಿ” ಎಂದು ಡಿಜಿಪಿ ಅಲೋಕ್ ಕುಮಾರ್ ಬಳಿ ಮನವಿ ಮಾಡಿಕೊಂಡಿದ್ದರು.

ಆದರೆ, ದರ್ಶನ್ ಮನವಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಡಿಜಿಪಿ, ಜೈಲಿನ ನಿಯಮಾವಳಿಗಳನ್ನು ನೆನಪಿಸಿದ್ದಾರೆ. “ಸೊಳ್ಳೆಗಳ ವಿಷಯದಲ್ಲಿ ನಾನೇನು ಮಾಡಲು ಸಾಧ್ಯವಿಲ್ಲ. ಜೈಲಿನ ಮ್ಯಾನ್ಯುವಲ್ ಪ್ರಕಾರ ಬಂದಿಗಳಿಗೆ ಏನೆಲ್ಲಾ ಸೌಲಭ್ಯ ಒದಗಿಸಬೇಕೋ ಅದನ್ನು ಮಾತ್ರ ಕೊಡಲು ಸಾಧ್ಯ. ಮ್ಯಾನ್ಯುವಲ್ನಲ್ಲಿ ಇಲ್ಲದಿರುವುದನ್ನು ನೀಡಲು ಬರುವುದಿಲ್ಲ. ನಿಯಮಾವಳಿ ಪ್ರಕಾರ ಏನಾದರೂ ಸಮಸ್ಯೆಗಳಿದ್ದರೆ ಹೇಳಿ, ಸೌಲಭ್ಯ ಒದಗಿಸುತ್ತೇವೆ. ಅದನ್ನು ಹೊರತುಪಡಿಸಿ ಸೊಳ್ಳೆಗಳ ಬಗ್ಗೆ ನಾವೇನು ಮಾಡಲು ಆಗುವುದಿಲ್ಲ” ಎಂದು ನೇರವಾಗಿಯೇ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮೊಬೈಲ್ ಪತ್ತೆ: ಪ್ರಜ್ವಲ್ ರೇವಣ್ಣ ವಿರುದ್ಧ ಗರಂ ಆದ ಡಿಜಿಪಿ!

ಇನ್ನೊಂದೆಡೆ, ಸಿಸಿಬಿ (CCB) ಪೊಲೀಸರು ನಡೆಸಿದ ಹಠಾತ್ ದಾಳಿಯ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಇನ್ನೊಬ್ಬ ವಿಚಾರಣಾಧೀನ ಕೈದಿಯ ಬಳಿ ಮೊಬೈಲ್ ಫೋನ್ ಹಾಗೂ ಪೆನ್ ಡ್ರೈವ್ ಪತ್ತೆಯಾಗಿತ್ತು. ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ಡಿಜಿಪಿ ಅಲೋಕ್ ಕುಮಾರ್, ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್ಗೆ ಭೇಟಿ ನೀಡಿ ಸುಮಾರು 10ರಿಂದ 12 ನಿಮಿಷಗಳ ಕಾಲ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

“ನಿನ್ನಿಂದಲೇ ಇಡೀ ಇಲಾಖೆಯ ಮರ್ಯಾದೆ ಹಾಳಾಗಿದೆ. ನನ್ನ ಕೆರಿಯರ್ನಲ್ಲಿ ನನಗೆ ಎಂದೂ ಇಷ್ಟು ಬೇಜಾರಾಗಿರಲಿಲ್ಲ. ನಿಮ್ಮಿಂದಾಗಿ ತಲೆ ತಗ್ಗಿಸುವಂತಾಯಿತು. ಇನ್ಮುಂದೆ ಆದರೂ ನೆಟ್ಟಗಿದ್ದು ಜೈಲ್ ನಿಯಮಾವಳಿ ಪಾಲಿಸಬೇಕು” ಎಂದು ತೀವ್ರವಾಗಿ ವಾರ್ನ್ ಮಾಡಿದ್ದಾರೆ.

ಈ ವೇಳೆ ಪ್ರಜ್ವಲ್, “ಇಲ್ಲ ಸಾರ್, ನಾನೇನು ಮಾಡಿಲ್ಲ” ಎಂದು ವಾದಿಸಲು ಯತ್ನಿಸಿದಾಗ, “ನನಗೆಲ್ಲಾ ಗೊತ್ತಿದೆ, ನಿಲ್ಲಿಸಿ ನಿಮ್ಮ ಡ್ರಾಮಾ. ನಿಮಗೆ ಮೊಬೈಲ್ ಕೊಟ್ಟವರ್ಯಾರು? ನಿಜ ಹೇಳದಿದ್ದರೆ ಬೇರೆ ಕ್ರಮ ತಗೋಬೇಕಾಗುತ್ತೆ. ಮುಂದಿನ ದಿನಗಳಲ್ಲಿ ಮತ್ತೆ ಮೊಬೈಲ್ ಕಂಡುಬಂದರೆ ಸುಮ್ಮನಿರಲ್ಲ” ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಮಾಜಿ ಸಂಸದನ ವಿರುದ್ಧ ಪ್ರಕರಣವೂ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi