ಉಡುಪಿ: ವಿದೇಶದಲ್ಲಿ ಉದ್ಯೋಗದ ಆಮಿಷ ಒಡ್ಡಿ ಲಕ್ಷಾಂತರ ರೂ. ವಂಚನೆ; ಪ್ರಕರಣ ದಾಖಲು
ಉಡುಪಿ: ಯುಕೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿರುವ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಡುಪಿ ಪುತ್ತೂರಿನ ಸುಬ್ರಹ್ಮಣ್ಯ ನಗರ ನಿವಾಸಿ ಪುಷ್ಪರಾಜ್ ಶೆಟ್ಟಿ ವಂಚನೆಗೆ ಒಳಗಾದವರು. ಆಲ್ಫಿ ಕನೇಲಿಯೋ, ಸವಿತಾ, ಪ್ರಕೃತಿ ಮತ್ತು ಪ್ರಶಾಂತ್ ಎಂಬವರು ಈ ಕೃತ್ಯವೆಸಗಿದ ಆರೋಪಿಗಳಾಗಿದ್ದಾರೆ.
2025ರ ಫೆಬ್ರವರಿ 12ರಂದು ಆಲ್ಫಿ ಕನೇಲಿಯೋ ಎಂಬಾತ ಪುಷ್ಪರಾಜ್ ಶೆಟ್ಟಿ ಅವರನ್ನು ಸಂಪರ್ಕಿಸಿ, ಯುಕೆಯಲ್ಲಿ ಹೌಸ್ ಕೀಪಿಂಗ್ ಸೂಪರ್ವೈಸರ್ ಉದ್ಯೋಗವಿದ್ದು, ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಸಿದ್ದನು. ಆರೋಪಿಯ ಮಾತನ್ನು ನಂಬಿದ ಪುಷ್ಪರಾಜ್ ಶೆಟ್ಟಿ ಅವರು, ಆರಂಭದಲ್ಲಿ ಯುಕೆ ವೀಸಾ ಪ್ರಕ್ರಿಯೆಗಾಗಿ ಸವಿತಾ ಎಂಬಾಕೆಯ ಖಾತೆಗೆ 2,00,000 ರೂಪಾಯಿ ಪ್ರೊಸೆಸಿಂಗ್ ಶುಲ್ಕ ಜಮೆ ಮಾಡಿದ್ದರು. ಬಳಿಕ ಆಲ್ಫಿ, ಸವಿತಾ ಜತೆಗೆ ಪ್ರಕೃತಿ ಮತ್ತು ಪ್ರಶಾಂತ್ ಎಂಬವರು ಸೇರಿಕೊಂಡು ವೈದ್ಯಕೀಯ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಹಾಗೂ ಎಂಬೆಸ್ಸಿ ಪ್ರೊಸೆಸಿಂಗ್ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 5,73,000 ರೂಪಾಯಿ ಹಣವನ್ನು ಪಡೆದುಕೊಂಡಿದ್ದರು.
ಹಣ ಪಡೆದ ಬಳಿಕವೂ ಉದ್ಯೋಗ ವೀಸಾ ಬಾರದಿದ್ದಾಗ ವಿಚಾರಿಸಿದಾಗ, ಆರೋಪಿಗಳು ವೀಸಾ ತಿರಸ್ಕೃತವಾಗಿದೆ ಎಂದು ಸಬೂಬು ಹೇಳಿದ್ದರು. ಅಲ್ಲದೆ, ಪಡೆದ ಹಣ ಹಾಗೂ ಪಾಸ್ಪೋರ್ಟ್ ಅನ್ನು ವಾಪಸ್ ನೀಡುವುದಾಗಿ ನಂಬಿಸಿದ್ದರು. ಆದರೆ, ನಂತರ ಯಾವುದೇ ಹಣ ಅಥವಾ ಪಾಸ್ಪೋರ್ಟ್ ನೀಡದೆ ತಮ್ಮ ಮೊಬೈಲ್ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕ ಕಡಿತಗೊಳಿಸಿ ವಂಚಿಸಿದ್ದಾರೆ.
ಈ ಕುರಿತು ಸಂತ್ರತ ಪುಷ್ಪರಾಜ್ ಶೆಟ್ಟಿ ಅವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























