ಬೇರೆ ಬೇರೆ ಧರ್ಮದ ಯುವಕ-ಯುವತಿ ಪ್ರಯಾಣಿಸುತ್ತಿದ್ದ ಬಸ್ ತಡೆದ ಬಜರಂಗದಳ | ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ - Mahanayaka
11:45 PM Wednesday 22 - April 2026

ಬೇರೆ ಬೇರೆ ಧರ್ಮದ ಯುವಕ-ಯುವತಿ ಪ್ರಯಾಣಿಸುತ್ತಿದ್ದ ಬಸ್ ತಡೆದ ಬಜರಂಗದಳ | ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

bajarangadala
22/03/2021

ಬಂಟ್ವಾಳ: ಬೇರೆ ಬೇರೆ ಧರ್ಮದ ಯುವಕ ಮತ್ತು ಯುವತಿ ಬಸ್ ನಲ್ಲಿ ಪ್ರಯಾಣಿಸಿದರು ಎಂದು ಬಜರಂಗದಳ ಕಾರ್ಯಕರ್ತರು ಬಸ್ ತಡೆದು ಹಲ್ಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬುಧವಾರ ರಾತ್ರಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಬ್ಬರು ಯುವಕರು ಹಾಗೂ ಓರ್ವಳು ಯುವತಿ ಬಸ್ ಹತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರ ಬಂಟ್ವಾಳ ಬಸ್ ನಿಲ್ದಾಣದ ಬಳಿಯಲ್ಲಿ ಬಸ್ ತಡೆದು ಗಲಾಟೆ ನಡೆಸಿದ್ದು, ಯುವಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಈ ವಿಚಾರ ಪೊಲೀಸರಿಗೆ ತಿಳಿದಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೂವರನ್ನೂ ರಕ್ಷಣೆ ಮಾಡಿ ಬೆಂಗಳೂರಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

ಈ ಮೂವರ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಹಾಗಾಗಿ ನಾವು ಬಜರಂಗದಳದ ಕಾರ್ಯಕರ್ತರ ಮೇಲೆ ಸುಮೋಟೋ ಪ್ರಕರಣ ದಾಖಲಿಸಿಲ್ಲ ಎಂದು ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.

ಇನ್ನೂ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಂಡವರ ವಿಚಾರಕ್ಕೆ ಸಂಘಟನೆಗಳು ಕೈಹಾಕುತ್ತಿರುವುದು ಸರಿಯಲ್ಲ. ಜನರು ಬಸ್ ನಲ್ಲಿ ಕೂಡ ಪ್ರಯಾಣಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಿಸಲಾಗುತ್ತಿದೆ. ಬಜರಂಗದಳ ಸಂಘಟನೆ ಯ ವರ್ತನೆ  ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕರವಾಗಿದೆ ಎಂಬ ಆಕ್ರೋಶಗಳು ಸಾರ್ವಜನಿಕರಿಂದಲೂ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ