ಸಿ.ಎಂ.ಇಬ್ರಾಹಿಂ ಜೆಡಿಎಸ್ ಗೆ ಸೇರ್ಪಡೆ? | ರಾಜ್ಯದಲ್ಲಿ ಸದ್ದಿಲ್ಲದೇ ಪಕ್ಷವನ್ನು ಬಲಪಡಿಸುತ್ತಿರುವ ಜೆಡಿಎಸ್ - Mahanayaka

ಸಿ.ಎಂ.ಇಬ್ರಾಹಿಂ ಜೆಡಿಎಸ್ ಗೆ ಸೇರ್ಪಡೆ? | ರಾಜ್ಯದಲ್ಲಿ ಸದ್ದಿಲ್ಲದೇ ಪಕ್ಷವನ್ನು ಬಲಪಡಿಸುತ್ತಿರುವ ಜೆಡಿಎಸ್

07/01/2021

ಬೆಂಗಳೂರು: ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೆ ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ. ಇಂದು ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ನಿವಾಸಕ್ಕೆ ಭೇಟಿ ನೀಡಿ ಅವರು ಸಮಾಲೋಚನೆ ನಡೆಸಿದ್ದಾರೆ.


Provided by

ಈ ಹಿಂದೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾ,ಮಿ ಅವರು ಸಿ.ಎಂ.ಇಬ್ರಾಹಿಂ ಅವರನ್ನು ಭೇಟಿ ಮಾಡಿ, ಪಕ್ಷಕ್ಕೆ ಆಹ್ವಾನಿಸಿದ್ದರು. ಇದೀಗ ಎರಡನೇ ಬಾರಿಗೆ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ನಾಯಕರನ್ನು ಭೇಟಿಯಾಗಿದ್ದಾರೆ.

ಜೆಡಿಎಸ್ ಗೆ ಸಿಎಂ ಇಬ್ರಾಹಿಂ ಅವರು ಬಂದರೆ, ಅವರು ಪಕ್ಷದ ರಾಜ್ಯಾಧ್ಯಕ್ಷರಾಗಲಿದ್ದಾರೆ. ಈ ಹಿಂದೆ ಜನತಾಪರಿವಾರದಲ್ಲಿದ್ದ ಸಿಎಂ ಇಬ್ರಾಹಿಂ ಕಾಂಗ್ರೆಸ್ ಜೊತೆಗಿದ್ದರು. ಇದೀಗ ಜನತಾಪರಿವಾರ ಒಂದುಗೂಡಿಸುವ ಪ್ರಯತ್ನದಲ್ಲಿ ಅವರಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಜೆಡಿಎಸ್ ಸದ್ದಿಲ್ಲದೇ ಬಲಗೊಳ್ಳುತ್ತಿದೆ. ಯುವ ಜೆಡಿಎಸ್, ವಿದ್ಯಾರ್ಥಿ ವಿಂಗ್ ಮೊದಲಾದ ಹೊಸತನಗಳೊಂದಿಗೆ ರಾಜ್ಯದಲ್ಲಿ ಒಂದು ಹಂತದಲ್ಲಿ ಸತ್ತು ಮಲಗಿದೆ ಎಂದು ಹೇಳಲಾಗಿರುವ ಜೆಡಿಎಸ್ ಇದೀಗ ಚೇತರಿಕೆ ಕಂಡು ಬರುತ್ತಿದೆ. ಒಂದು ಹಂತದಲ್ಲಿ ಕಾಂಗ್ರೆಸ್ ಪಕ್ಷದಿಂದ ರೋಸಿಹೋಗಿರುವ ಮುಸ್ಲಿಮರು ಜೆಡಿಎಸ್ ಪಕ್ಷದತ್ತ ಒಲವು ತೋರಿಸುವ ಸಾಧ್ಯತೆ ಇದೆ ಎಂಬ ಲೆಕ್ಕಚಾರದಲ್ಲಿ ಜೆಡಿಎಸ್ ಇದೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸುವ ಹಠದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಇದ್ದಾರೆ ಎಂದು ಹೇಳಲಾಗಿದೆ. ಇದರ ಪೀಠಿಕೆಯಾಗಿ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ ಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ