ಶಾಲಾ ಕಾಲೇಜು ಆರಂಭ ಮತ್ತೆ ವಿಳಂಬವಾಗಲಿದೆಯೇ? | ಮತ್ತೆ ಅದೇ ಗೊಂದಲಗಳು! - Mahanayaka

ಶಾಲಾ ಕಾಲೇಜು ಆರಂಭ ಮತ್ತೆ ವಿಳಂಬವಾಗಲಿದೆಯೇ? | ಮತ್ತೆ ಅದೇ ಗೊಂದಲಗಳು!

30/12/2020

ಬೆಂಗಳೂರು: ಶಾಲಾ ಕಾಲೇಜು ಜನವರಿ 1ರಿಂದ ಆರಂಭವಾಗಲಿದೆ ಎಂಬ ಸುದ್ದಿ ಬಂದು ಕೆಲವೇ ದಿನಗಳಲ್ಲಿ ಬ್ರಿಟನ್ ವೈರಸ್ ಎಂಬ ಹೊಸ ವಿಚಾರ ಇದೀಗ ಶಾಲಾ ಕಾಲೇಜು ಆರಂಭ ಮತ್ತಷ್ಟು ವಿಳಂಬವಾಗುತ್ತದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ಶಾಲಾ ಕಾಲೇಜು ಆರಂಭದ ವಿಚಾರದಲ್ಲಿ ಪದೇ ಪದೇ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಈ ನಡುವೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಡ್ಡಕತ್ತರಿಗೆ ಸಿಲುಕಿಕೊಂಡಿದ್ದಾರೆ.  ಶಾಲಾ ಕಾಲೇಜು ಆರಂಭಕ್ಕೆ ಸಂಬಂಧಪಟ್ಟಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಇದೀಗ ಶಾಲೆ ಕಾಲೇಜು ಆರಂಭಿಸಬೇಕೇ, ಬೇಡವೇ ಎಂಬ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿದೆ.

ಬ್ರಿಟನ್ ಕೊರೊನಾ ಹಿನ್ನೆಲೆಯಲ್ಲಿಮಾಧ್ಯಮಗಳಲ್ಲಿ ಮತ್ತೆ ಸುದ್ದಿಯ ವೈಭವೀಕರಣವನ್ನು ಗಮನಿಸಿದರೆ, ಈ ಹಿಂದೆ ಹಲವು ಬಾರಿ ಸರ್ಕಾರದ ದಾರಿ ತಪ್ಪಿಸಿರುವ ಸುದ್ದಿವಾಹಿನಿಗಳು ಈ ಬಾರಿಗೂ ರಾಜ್ಯದಲ್ಲಿ ಮತ್ತೆ ಶಾಲಾ ಕಾಲೇಜು ಆರಂಭಕ್ಕೆ  ಸರ್ಕಾರ ಹಿಂದೇಟು ಹಾಕುವ ಸಾಧ್ಯತೆಗಳು ಕಂಡು ಬಂದಿದೆ.

ಇನ್ನೂ ಕೊವಿಡ್ ಮಾರ್ಗ ಸೂಚಿಗಳ ಬಗ್ಗೆ ಯಾವುದೇ ಬದಲಾವಣೆಗಳಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಹೇಳಿಕೆ ನೀಡಿದ್ದಾರೆ. ಆದರೆ ಮಾಧ್ಯಮದಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾರ್ಗಸೂಚಿ ಬದಲಾವಣೆಯಾಗುತ್ತದೆ ಎಂಬ ಗೊಂದಲ ಹರಡಲಾಗಿದೆ. ಇದರಿಂದಾಗಿ ಜನರು ಗೊಂದಲಕ್ಕೀಡಾಗಿದ್ದಾರೆ. ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ನೀಡಿದರೆ, ಮಾತ್ರವೇ ರಾಜ್ಯದಲ್ಲಿ ಮಾರ್ಗ ಸೂಚಿ ಬದಲಾವಣೆಯಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಹೊಸ ವರ್ಷಾಚರಣೆಗೆ ತೊಂದರೆಯುಂಟು ಮಾಡುವ ಮನಸ್ಥಿತಿಯ ಕೆಲವು ಮಾಧ್ಯಮಗಳು ನೈಟ್ ಕರ್ಫ್ಯೂ ಬಗ್ಗೆ ಗೊಂದಲ ಸೃಷ್ಟಿಸಲು ಮುಂದಾಗಿದೆ. ಸಚಿವರಾದ ಆರ್.ಅಶೋಕ್ ಹಾಗೂ ಡಾ.ಸುಧಾಕರ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಜನರಿಗೆ ಯಾವುದೇ ಪ್ರಯೋಜನವಿಲ್ಲದ ನೈಟ್ ಕರ್ಫ್ಯೂ ಜಾರಿಗೆ ಸರ್ಕಾರವನ್ನು ಪ್ರೇರೇಪಿಸುತ್ತಿರುವುದು ಕಂಡು ಬಂದಿದೆ.

ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು “ನೈಟ್ ಕರ್ಫ್ಯೂ ಮುಗಿದ ಅಧ್ಯಾಯ” ಎಂದು ಹೇಳಿದ್ದಾರೆ. ಆದರೆ ಆರ್.ಅಶೋಕ್ ಅವರು “ನೈಟ್ ಕರ್ಫ್ಯೂ ಅಗತ್ಯ” ಎಂದು ಹೇಳಿದ್ದಾರೆ. ಇದು ಸಂವಹನ ಸಮಸ್ಯೆಯಿಂದ ಆಗಿರಬಹುದಾದ ಪ್ರಮಾದ ಎನ್ನುವುದು ಸ್ಪಷ್ಟವಾಗಿ ತಿಳಿದರೂ ಮಾಧ್ಯಮಗಳು ಗೊಂದಲ ಸೃಷ್ಟಿಗೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇತ್ತೀಚಿನ ಸುದ್ದಿ