ಮಹಿಳಾ ಪತ್ರಕರ್ತರನ್ನು ನಿರ್ಲಕ್ಷ್ಯಿಸದಿರಿ: ಪತ್ರಕರ್ತೆಯರ ಸಂಘ ಆಕ್ರೋಶ - Mahanayaka

ಮಹಿಳಾ ಪತ್ರಕರ್ತರನ್ನು ನಿರ್ಲಕ್ಷ್ಯಿಸದಿರಿ: ಪತ್ರಕರ್ತೆಯರ ಸಂಘ ಆಕ್ರೋಶ

banglore
01/03/2023

ಬೆಂಗಳೂರು: ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಚಾರದಲ್ಲಿ ಎದ್ದಿರುವ ಗೊಂದಲದ ನಡುವೆ ಇದೀಗ ಕರ್ನಾಟಕ ಪತ್ರಕರ್ತೆಯರ ಸಂಘವೂ ಮಾಧ್ಯಮ ಅಕಾಡೆಮಿ ವಿಚಾರದಲ್ಲಿ ಧ್ವನಿ ಎತ್ತಿದ್ದು, ತಾರತಮ್ಯ ಮಹಿಳಾ ಪತ್ರಕರ್ತರನ್ನು ನಿರ್ಲಕ್ಷ್ಯಿಸುತ್ತಿರುವುದಕ್ಕೆ ಕರ್ನಾಟಕ ಪತ್ರಕರ್ತೆಯರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಮಹಿಳಾ ಪತ್ರಕರ್ತೆಯರಿಗೂ ಮಾಧ್ಯಮ ಅಕಾಡೆಮಿಯಲ್ಲಿ ಪ್ರಾಶಸ್ತ್ಯ ಸದಸ್ಯತ್ವ ಹಾಗೂ ಪ್ರಶಸ್ತಿ ನೀಡುವಂತೆ ಸಂಘ ವಾರ್ತಾ ಇಲಾಖೆ ಮುಖೇನ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ವಾರ್ತಾ ಇಲಾಖೆಯ ಆಯುಕ್ತ ಹರ್ಷಾ ಹಾಗೂ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಸಂಘ, ಕರ್ನಾಟಕ ಪತ್ರಕರ್ತೆಯರ ಸಂಘದಲ್ಲಿ ರಾಜ್ಯದಾದ್ಯಂತ ಇರುವ ಪತ್ರಕರ್ತೆಯರು ಸದಸ್ಯತ್ವವನ್ನು ಹೊಂದಿದ್ದು, ಮಾಧ್ಯಮದಲ್ಲಿ ಗಮನಾರ್ಹ ಕೆಲಸವನ್ನು ಮಾಡುತ್ತಿದ್ದಾರೆ. ಪುರುಷ ಪತ್ರಕರ್ತರಿಗೆ ಸರಿಸಮಾನರಾಗಿ ಕೆಲಸ ನಿರ್ವಹಿಸುತ್ತಿದ್ದಾಗ್ಯೂ ಮಾಧ್ಯಮ ಅಕಾಡೆಮಿಯಲ್ಲಿ ಮಹಿಳಾ ಪತ್ರಕರ್ತೆಯರಿಗೆ ಪ್ರಾತಿನಿದ್ಯ ಇಲ್ಲವಾಗಿದೆ ಎಂದಿದೆ.

ಇತ್ತೀಚೆಗೆ ಮಾಧ್ಯಮ ಅಕಾಡೆಮಿಯಿಂದ ಪ್ರಕಟಗೊಂಡ 145 ಪತ್ರಕರ್ತರ ಪ್ರಶಸ್ತಿ ಪಟ್ಟಿಯಲ್ಲಿ ಕೇವಲ ಮೂವರಿಗೆ ಪತ್ರಕರ್ತೆಯರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮತ್ತು ಒಬ್ಬರಿಗೆ ಜೀವಮಾನ ಸಾಧನೆಗೆ ಪ್ರಶಸ್ತಿ ನೀಡಲಾಗಿದೆ. ಮಹಿಳಾ ಪತ್ರಕರ್ತರನ್ನು ನಿರ್ಲಕ್ಷಿಸಿರುವುದು ಮೇಲ್ನೋಟಕ್ಕೇ ಕಂಡುಬಂದಿದೆ. ಪ್ರಶಸ್ತಿ ಮಾತ್ರವಲ್ಲದೆ, ಅಕಾಡೆಮಿ ಸದಸ್ಯತ್ವದಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯದ ಕೊರತೆ ಕಂಡುಬಂದಿದೆ. ಈಗಾಗಲೇ ಮುಖ್ಯಮಂತ್ರಿಗಳು ಮಾಧ್ಯಮ ಅಕಾಡೆಮಿಯ ನೀತಿ ನಿಯಮಗಳ ತಿದ್ದುಪಡಿಗಾಗಿ ಸಮಿತಿ ರಚಿಸುವುದಾಗಿ ಹೇಳಿಕೆ ನೀಡಿದ್ದು ಸ್ವಾಗತಾರ್ಹ ಎಂದಿದೆ.

ಮನವಿ ಸಲ್ಲಿಸಿ ಆಯುಕ್ತರೊಂದಿಗೆ ಮಾತನಾಡಿದ ಕರ್ನಾಟಕ ಪತ್ರಕರ್ತೆಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಹಾಗೂ ಪ್ರಸಕ್ತ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಮಾತನಾಡಿ,ಈಗಾಗಲೇ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿರುವುದರಿಂದ ಪಟ್ಟಿಯಲ್ಲಿರುವವರನ್ನು ಕೈಬಿಡದೆ, ಈ ಪಟ್ಟಿಗೆ ಇನ್ನೂ ಕನಿಷ್ಟ ಹತ್ತು ಮಹಿಳಾ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಕೋರಿದರು. ಅಲ್ಲದೇ ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಪತ್ರಕರ್ತೆಯರ ಹೆಸರನ್ನು ಕರ್ನಾಟಕ ಪತ್ರಕರ್ತೆಯರ ಸಂಘ ಸೂಚಿಸಲು ಬಯಸುತ್ತದೆ.ಇನ್ನು ಸಂಘದ ಸದಸ್ಯರಿಗೆ ಅಕಾಡೆಮಿ ಸದಸ್ಯತ್ವ ನೀಡುವಲ್ಲಿ ಸಮಾನ ಪ್ರಾತಿನಿದ್ಯ ನೀಡಬೇಕು ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಪದನಿಮಿತ್ತ ಸದಸ್ಯರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಮಾಧ್ಯಮ ಅಕಾಡೆಮಿಯ ನೀತಿ ನಿಯಮಗಳ ತಿದ್ದುಪಡಿಗೆ ನೇಮಿಸಲಿರುವ ಸಲಹಾ ಸಮಿತಿಯಲ್ಲಿ ಸಂಘದ ಸದಸ್ಯರಿಗೆ ಪ್ರತಿನಿಧ್ಯ ನೀಡಬೇಕು ಎಂಬ ಬೇಡಿಕೆಯನ್ನು ಸಹ ಕರ್ನಾಟಕ ಪತ್ರಕರ್ತೆಯರ ಸಂಘ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಇಲಾಖೆಯ ಆಯುಕ್ತ ಹರ್ಷಾ, ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಮಾಲತಿ ಭಟ್, ಉಪಾಧ್ಯಕ್ಷೆ ವಾಣಿಶ್ರೀ ಸೇರಿದಂತೆ ಮತ್ತಿತ್ತರ ಪತ್ರೆಕರ್ತೆಯರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ