ನನಗೆ ಅಮೆರಿಕ ಶೈಲಿಯ ಊಟ ಕೊಡಿ: ದೆಹಲಿ ಕೋರ್ಟ್ ಮೆಟ್ಟಿಲೇರಿದ ಭಾರತದ ಜೈಲಿನಲ್ಲಿರುವ ಯುಎಸ್ ಪ್ರಜೆ
ನವದೆಹಲಿ: ದೆಹಲಿಯ ಜೈಲಿನಲ್ಲಿರುವ ಅಮೆರಿಕದ ಪ್ರಜೆಯೊಬ್ಬರು ತಮಗೆ ಜೈಲಿನ ಊಟ ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ, ಅಮೆರಿಕ ಶೈಲಿಯ ಆಹಾರವನ್ನು ಒದಗಿಸುವಂತೆ ಅಥವಾ ತಾವೇ ಸ್ವತಃ ಅಡುಗೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮ್ಯಾಥ್ಯೂ ಆರನ್ ವ್ಯಾಂಡೈಕ್ (Matthew Aaron VanDyke) ಎಂಬ ಹೆಸರಿನ ಈ ಅಮೆರಿಕನ್ ಪ್ರಜೆ, ಜೈಲಿನಲ್ಲಿ ನೀಡಲಾಗುವ “ಖಾರ, ಎಣ್ಣೆ ಹಾಗೂ ಅತಿಯಾಗಿ ಹುರಿದ (Deep-fried) ಆಹಾರ”ವನ್ನು ತಿನ್ನಲು ಸಾಧ್ಯವಾಗದ ಕಾರಣ ಕಳೆದ ಮೇ 6 ರಿಂದ ‘ಉಪವಾಸ ಸತ್ಯಾಗ್ರಹ’ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
14 ಕೆಜಿ ತೂಕ ಇಳಿಕೆ, ಕ್ಷೀಣಿಸಿದ ಆರೋಗ್ಯ:
ಮ್ಯಾಥ್ಯೂ ಅವರ ವಕೀಲರಾದ ರೋಹಿತ್ ಗೌರ್ ಮತ್ತು ರೋಹಿತ್ ದಂಡ್ರಿಯಾಲ್ ಅವರು ಮಾನವೀಯತೆಯ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕಳೆದ 50 ದಿನಗಳಿಂದ ಮ್ಯಾಥ್ಯೂ ಅವರು ಕೇವಲ ಸೋಯಾ ಹಾಲಿನಂತಹ ದ್ರವಾಹಾರವನ್ನು ಸೇವಿಸಿ ಬದುಕುತ್ತಿದ್ದು, ಅವರ ಆಹಾರ ಪದ್ಧತಿಗೆ ಜೈಲಿನ ಊಟ ಹೊಂದಿಕೆಯಾಗದ ಕಾರಣ ಬರೋಬ್ಬರಿ 14 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಜುಲೈ 3 ರಂದು ನ್ಯಾಯಾಲಯಕ್ಕೆ ಹಾಜರಾದಾಗ ಅವರು ಸರಿಯಾಗಿ ನಿಲ್ಲಲೂ ಸಾಧ್ಯವಾಗದೆ ಅತ್ಯಂತ ನಿಶ್ಯಕ್ತರಾಗಿ ಕಾಣಿಸುತ್ತಿದ್ದರು. ಅಲ್ಲದೆ, ಪೌಷ್ಟಿಕಾಂಶದ ಕೊರತೆಯಿಂದಾಗಿ ಅವರ ಕಣ್ಣಿನ ದೃಷ್ಟಿಯೂ ಕ್ಷೀಣಿಸುತ್ತಿದೆ ಎಂದು ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ.
ಅರ್ಜಿಯಲ್ಲಿನ ಬೇಡಿಕೆಗಳೇನು?
ಜೈಲಿನಲ್ಲಿ ಇಂಡಕ್ಷನ್ ಸ್ಟೌವ್ ಮತ್ತು ಅಗತ್ಯ ಪಾತ್ರೆಗಳನ್ನು ಬಳಸಿ ತಾವೇ ಸ್ವತಃ ಅಡುಗೆ ಮಾಡಿಕೊಳ್ಳಲು ಅನುಮತಿ ನೀಡಬೇಕು.
ಬೇಳೆಕಾಳುಗಳು, ಚಿಕನ್, ರೆಡ್ ಮೀಟ್, ಪಾಸ್ತಾ, ಆಲಿವ್ ಆಯಿಲ್, ಟೋನ್ಡ್ ಮಿಲ್ಕ್, ಸೋಯಾ ಮಿಲ್ಕ್ ಮತ್ತು ಬಾಟಲಿ ನೀರನ್ನು ಜೈಲಿನಲ್ಲಿ ಇಟ್ಟುಕೊಳ್ಳಲು ಅವಕಾಶ ನೀಡಬೇಕು.
ಈ ಎಲ್ಲ ಆಹಾರ ವ್ಯವಸ್ಥೆಯ ಸಂಪೂರ್ಣ ವೆಚ್ಚವನ್ನು ಭರಿಸಲು ಮ್ಯಾಥ್ಯೂ ಅವರ ಕುಟುಂಬ ಸಿದ್ಧವಿದೆ ಎಂದು ತಿಳಿಸಲಾಗಿದೆ.
ಇದರೊಂದಿಗೆ ಜೈಲಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸೊಳ್ಳೆ ಪರದೆ ಅಥವಾ ಸೊಳ್ಳೆ ನಿವಾರಕಗಳನ್ನು ಒದಗಿಸುವಂತೆಯೂ ಕೋರಲಾಗಿದೆ.
ಪ್ರಕರಣದ ಹಿನ್ನೆಲೆ:
ಭಾರತ ಮತ್ತು ಮ್ಯಾನ್ಮಾರ್ ನ ಉಗ್ರಗಾಮಿ ಗುಂಪುಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ ಮತ್ತು ತರಬೇತಿ ನೀಡಿದ ಅಂತರ್–ಗಡಿ ಭಯೋತ್ಪಾದನಾ ಸಂಚಿನ ಆರೋಪದ ಮೇಲೆ ಎನ್ ಐಎ (NIA) ಸಂಸ್ಥೆಯು ಮ್ಯಾಥ್ಯೂ ಹಾಗೂ ಆರು ಉಕ್ರೇನ್ ಪ್ರಜೆಗಳನ್ನು ಮಾರ್ಚ್ 13 ರಂದು ಮಿಜೋರಾಂ ಗಡಿಯಲ್ಲಿ ಬಂಧಿಸಿತ್ತು.
ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ತಮಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಎನ್ಐಎ ತಿಳಿಸಿದ ಹಿನ್ನೆಲೆಯಲ್ಲಿ, ಎನ್ ಐಎ ವಿಶೇಷ ನ್ಯಾಯಾಧೀಶರಾದ ಪ್ರಶಾಂತ್ ಶರ್ಮಾ ಅವರು ಜೈಲು ಅಧೀಕ್ಷಕರಿಗೆ (Jail Superintendent) ವರದಿ ಸಲ್ಲಿಸಲು ಒಂದು ವಾರದ ಕಾಲಾವಕಾಶ ನೀಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 21 ರಂದು ನಡೆಯಲಿದ್ದು, ಮ್ಯಾಥ್ಯೂ ಅವರ ನ್ಯಾಯಾಂಗ ಬಂಧನವನ್ನು ಆಗಸ್ಟ್ 1 ರವರೆಗೆ ವಿಸ್ತರಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























