ಹಕ್ಕಿ ಜ್ವರದ ಬಗ್ಗೆ ಸಾರ್ವಜನಿಕರು ಅಗತ್ಯವಾಗಿ ತಿಳಿಯಲೇ ಬೇಕಿರುವ ಮಾಹಿತಿ ಇಲ್ಲಿದೆ - Mahanayaka

ಹಕ್ಕಿ ಜ್ವರದ ಬಗ್ಗೆ ಸಾರ್ವಜನಿಕರು ಅಗತ್ಯವಾಗಿ ತಿಳಿಯಲೇ ಬೇಕಿರುವ ಮಾಹಿತಿ ಇಲ್ಲಿದೆ

08/01/2021

ಶಿವಮೊಗ್ಗ: ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವ ರೀತಿಯ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದು, ಜಿಲ್ಲೆಯಲ್ಲಿ ಇದುವರೆಗೆ ಹಕ್ಕಿಜ್ವರದ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೂ ಹಕ್ಕಿಜ್ವರದ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ಎಲ್ಲಾ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


Provided by

ನೆರೆಯ ರಾಜ್ಯದಲ್ಲಿ ಹಕ್ಕಿಜ್ವರದ ಪ್ರಕರಣ ಕಂಡು ಬಂದಿದ್ದರೂ, ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ. ಹಕ್ಕಿಜ್ವರ ಲಕ್ಷಣದ ಬಗ್ಗೆ ನಿಗಾವಹಿಸಲು ಎಲ್ಲಾ ತಾಲೂಕುಗಳಲ್ಲಿ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಹಕ್ಕಿಜ್ವರದ ಬಗ್ಗೆ ಸಂದೇಹಾಸ್ಪದ ಪ್ರಕರಣಗಳು ಪತ್ತೆಯಾದರೆ ಸಾರ್ವಜನಿಕರು ಕರೆ ಮಾಡಿ ಮಾಹಿತಿಯನ್ನು ನೀಡಬಹುದಾಗಿದೆ. ಹಕ್ಕಿಗಳು ಸತ್ತಿರುವ ಬಗ್ಗೆ ವರದಿಯಾದರೆ ಈ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಗತ್ಯವಿದ್ದರೆ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ಅವರು ಹೇಳಿದರು.

ಹಕ್ಕಿಜ್ವರದ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ. ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಪೌಲ್ಟ್ರಿಯಲ್ಲಿ ಅಥವಾ ಹಕ್ಕಿಯೊಂದಿಗೆ ನೇರ ಸಂಪರ್ಕವಿರುವವರು ಹಕ್ಕಿಜ್ವರದಿಂದ ಬಾಧಿತರಾಗುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಗಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವ ಅಗತ್ಯ ಬರಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ತಿಳಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿ ಹಕ್ಕಿಜ್ವರದ ಬಗ್ಗೆ ನಿಗಾ ವಹಿಸಬೇಕು. ಕೋಳಿ ಫಾರ್ಮ್‍ಗಳಲ್ಲೂ ನಿಗಾ ವಹಿಸಬೇಕಾಗಿದ್ದು, ಫಾರ್ಮ್ ಮಾಲಿಕರೊಂದಿಗೆ ಸಭೆ ನಡೆಸಿ ಮಾಹಿತಿಯನ್ನು ನೀಡಬೇಕು. ಪಕ್ಷಿಗಳ ಹಿಕ್ಕೆ ಮತ್ತು ಕೆರೆಕುಂಟೆಗಳ ನೀರಿನ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಒದಗಿಸಬೇಕು. ವಲಸೆ ಹಕ್ಕಿಗಳ ಮೇಲೆ ನಿಗಾ ಇರಿಸಬೇಕು ಎಂದು ಹೇಳಿದರು.

ಸಂಪರ್ಕ ಸಂಖ್ಯೆ: ಹಕ್ಕಿಜ್ವರದ ಬಗ್ಗೆ ಯಾವುದೇ ಸಂಶಯಗಳು ಕಂಡು ಬಂದರೆ ಜಿಲ್ಲಾಮಟ್ಟದ ದೂರವಾಣಿ ಸಂಖ್ಯೆ 08182-255921, 226603 ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಪಶು ವೈದ್ಯಕೀಯ ಸೇವೆ ಉಪನಿರ್ದೇಶಕ ಸದಾಶಿವ ಅವರು ತಿಳಿಸಿದದರು.

ಇತ್ತೀಚಿನ ಸುದ್ದಿ