ಮುಳ್ಳಯ್ಯನಗಿರಿ ಪ್ರವಾಸಿಗರೇ ಎಚ್ಚರ! ಉರುಳಿಗೆ ಸಿಲುಕಿ ಗಾಯಗೊಂಡ ಹುಲಿ ಸಂಚಾರ; ಗ್ರಾಮಸ್ಥರಲ್ಲಿ ಆತಂಕ - Mahanayaka

ಮುಳ್ಳಯ್ಯನಗಿರಿ ಪ್ರವಾಸಿಗರೇ ಎಚ್ಚರ! ಉರುಳಿಗೆ ಸಿಲುಕಿ ಗಾಯಗೊಂಡ ಹುಲಿ ಸಂಚಾರ; ಗ್ರಾಮಸ್ಥರಲ್ಲಿ ಆತಂಕ

chikkamagaluru
13/06/2026

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಭಾಗಕ್ಕೆ ತೆರಳುವ ಪ್ರವಾಸಿಗರು ಹಾಗೂ ಸ್ಥಳೀಯ ಜನರೇ ಎಚ್ಚರ… ಎಚ್ಚರ…! ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ ಹುಲಿಯೊಂದು ನೋವಿನಿಂದ ನರಳುತ್ತಾ ಓಡಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಸಚಿವ ಕೆ.ಜೆ. ಜಾರ್ಜ್ ಒಡೆತನದ ‘ಏಳುನೂರ್ ಖಾನ್’ ಕಾಫಿ ತೋಟದ ಬಳಿ ಈ ಘಟನೆ ಬೆಳಕಿಗೆ ಬಂದಿದೆ. ಹುಲಿಯ ಸೊಂಟಕ್ಕೆ ಶಿಕಾರಿಗಾಗಿ ಇಟ್ಟಿದ್ದ ಉರುಳು ಬಿಗಿದುಕೊಂಡಿದ್ದು, ಕಳೆದ ನಾಲ್ಕೈದು ದಿನಗಳಿಂದ ಆ ಹುಲಿಯು ಸೊಂಟದಲ್ಲಿ ನೇತಾಡುತ್ತಿರುವ ಉರುಳಿನ ನೋವಿನೊಂದಿಗೇ ಇಡೀ ಭಾಗದಲ್ಲಿ ಸಂಚರಿಸುತ್ತಿದೆ.

ನೋವಿನಲ್ಲೂ ಬೇಟೆಯಾಡುತ್ತಿರುವ ವ್ಯಾಘ್ರ:

ತೀವ್ರ ಹಸಿವು ಮತ್ತು ನೋವಿನಿಂದ ನರಳುತ್ತಿರುವ ಈ ವ್ಯಾಘ್ರನು ಇತ್ತೀಚೆಗಷ್ಟೇ ಜಿಂಕೆ ಹಾಗೂ ಕಡವೆಯನ್ನು ಬೇಟೆಯಾಡಿ ತಿಂದಿದೆ. ಅರಣ್ಯ ಪ್ರದೇಶದಲ್ಲಿ ಈ ಪ್ರಾಣಿಗಳ ಕಳೆಬರಹಗಳು (ಅಸ್ಥಿಪಂಜರ/ಉಳಿಕೆಗಳು) ಪತ್ತೆಯಾಗಿರುವುದು ಹುಲಿಯ ತೀವ್ರ ಹಸಿವು ಮತ್ತು ಆಕ್ರೋಶಕ್ಕೆ ಸಾಕ್ಷಿಯಾಗಿದೆ.

ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಸೂಚನೆ:

ಹುಲಿ ಸಂಚಾರದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ತೋಟದ ಕಾರ್ಮಿಕರು ಕೆಲಸಕ್ಕೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದಾಗಿ ಪಂಡರವಳ್ಳಿ, ಕೊಳಗಾಮೆ ಹಾಗೂ ಏಳುನೂರ್ ಖಾನ್ ಗ್ರಾಮಗಳ ಜನತೆ ತೋಟಗಳಿಗೆ ಕೆಲಸಕ್ಕೆ ಹೋಗಲು ಮತ್ತು ರಸ್ತೆಯಲ್ಲಿ ಓಡಾಡಲು ಭೀತಿಯಿಂದ ತಲ್ಲಣಗೊಂಡಿದ್ದಾರೆ.

ಸೆರೆಗೆ ಅರಣ್ಯ ಇಲಾಖೆ ಹರಸಾಹಸ:

“ಕಳೆದ ಮೂರ್ನಾಲ್ಕು ದಿನಗಳಿಂದ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಹುಲಿಯ ಚಲನವಲನಗಳನ್ನು ಪತ್ತೆಹಚ್ಚಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಫಿಕ್ಸ್ ಮಾಡಲಾಗಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.”

ಮುಳ್ಳಯ್ಯನಗಿರಿ ತಪ್ಪಲು ಪ್ರದೇಶದಲ್ಲಿ ಪ್ರವಾಸಿಗರ ಓಡಾಟ ಹೆಚ್ಚಿರುವುದರಿಂದ, ಪ್ರವಾಸಿಗರು ಸಹ ಜಾಗರೂಕರಾಗಿರಬೇಕು ಎಂದು ಎಚ್ಚರಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ