ರಾಜಕೀಯ ಪಕ್ಷಗಳಿಗೆ ತಲೆನೋವು: ರಾಜ್ಯಗಳಿಗೂ ಹರಡಲಿದೆ ಕಾಕ್ರೋಚ್ ಹಾವಳಿ: CJP ಮುಂದಿನ ಗುರಿ ಏನು? - Mahanayaka

ರಾಜಕೀಯ ಪಕ್ಷಗಳಿಗೆ ತಲೆನೋವು: ರಾಜ್ಯಗಳಿಗೂ ಹರಡಲಿದೆ ಕಾಕ್ರೋಚ್ ಹಾವಳಿ: CJP ಮುಂದಿನ ಗುರಿ ಏನು?

cjp.jpg
29/07/2026

ಹೊಸದೆಹಲಿ: NEET–UG ‘ಪ್ರಶ್ನೆಪತ್ರಿಕೆ ಸೋರಿಕೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್‌ನಲ್ಲಿ 36 ದಿನಗಳ ಕಾಲ ನಡೆಸಿದ ಸುದೀರ್ಘ ಪ್ರತಿಭಟನೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ದೇಶಾದ್ಯಂತ ತನ್ನ ಆಂದೋಲನವನ್ನು ವಿಸ್ತರಿಸಲು ಸಜ್ಜಾಗಿದೆ.

ರಾಜ್ಯಮಟ್ಟದ ಪ್ರವಾಸ ಮತ್ತು ಪ್ರತಿಭಟನೆ: ವಿದ್ಯಾರ್ಥಿಗಳು ದೀರ್ಘಕಾಲದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರಾಜ್ಯಗಳಿಗೆ ಸಿಜೆಪಿ ನಾಯಕರು ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ. ಅಗತ್ಯ ಬಿದ್ದರೆ ಆಯಾ ರಾಜ್ಯಗಳಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಿಜೆಪಿ ವಕ್ತಾರ ಅಶುತೋಷ್ ರಂಕಾ ತಿಳಿಸಿದ್ದಾರೆ.

ಸದ್ಯಕ್ಕೆ ಸಿಜೆಪಿಯನ್ನು ಯಾವುದೇ ರಾಜಕೀಯ ಪಕ್ಷವಾಗಿ ಪರಿವರ್ತಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪ್ರತಿಭಟನೆಯ ಸಮಯದಲ್ಲಿ ವಶಕ್ಕೆ ಪಡೆಯಲಾದ ಅಥವಾ ಪ್ರಕರಣಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳ ಕಾನೂನು ಹೋರಾಟಕ್ಕಾಗಿ ₹1 ಕೋಟಿ ವೆಚ್ಚದ ‘ಕಾನೂನು ನೆರವು ನಿಧಿ’ ರೂಪಿಸಲಾಗಿದೆ.

ಜುಲೈ 20 ರ ‘ಸಂಸದ್ ಚಲೋ’ ಮೆರವಣಿಗೆಯ ಸಮಯದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ‘SAAKSHI’ ಎಂಬ ಆನ್‌ ಲೈನ್ ವೇದಿಕೆಯನ್ನು ಪ್ರಾರಂಭಿಸಲಾಗಿದೆ. ಹಿರಿಯ ವಕೀಲ ಕಪಿಲ್ ಸಿಬಲ್ ಈ ಯುವ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ವಿಚಾರಣೆಯೊಂದರ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರುದ್ಯೋಗಿ ಯುವಜನತೆಯನ್ನು ಉಲ್ಲೇಖಿಸಿ ನೀಡಿದ್ದರೆನ್ನಲಾದ ಹೇಳಿಕೆಯ ನಂತರ, ಮಾಜಿ ಎಎಪಿ ತಂತ್ರಜ್ಞ ಅಭಿಜಿತ್ ದಿಪ್ಕೆ ಅವರು ಮೇ 16 ರಂದು ಇನ್‌ ಸ್ಟಾಗ್ರಾಮ್‌ ನಲ್ಲಿ ಹಾಸ್ಯಸ್ಪಷ್ಟ (Satirical) ಆಂದೋಲನವಾಗಿ CJP ಯನ್ನು ಪ್ರಾರಂಭಿಸಿದ್ದರು.

ಇನ್‌ ಸ್ಟಾಗ್ರಾಮ್‌ ನಲ್ಲಿ ಕೆಲವೇ ದಿನಗಳಲ್ಲಿ 2 ಕೋಟಿಗೂ ಹೆಚ್ಚು ಫಾಲೋವರ್ಸ್ ಗಳಿಸುವ ಮೂಲಕ ಈ ಚಳವಳಿ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. NEET ಪತ್ರಿಕೆ ಸೋರಿಕೆ ವಿರುದ್ಧ ಜಂತರ್ ಮಂತರ್‌ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. 36 ದಿನಗಳ ಸುದೀರ್ಘ ಹೋರಾಟದ ಫಲವಾಗಿ ಜುಲೈ 25 ರಂದು ಕೇಂದ್ರ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಸ್ತುತ ಸಂಸ್ಥಾಪಕ ಅಭಿಜಿತ್ ದಿಪ್ಕೆ, ವಕ್ತಾರರಾದ ಸೌರವ್ ದಾಸ್, ರತ್ನಾ ಸಿಂಗ್ ಹಾಗೂ ಅಶುತೋಷ್ ರಂಕಾ ಅವರನ್ನೊಳಗೊಂಡ 12 ಸದಸ್ಯರ ಕೋರ್ ಟೀಮ್ ಮುಂದಿನ ದಿನಗಳಲ್ಲಿ ಸಭೆ ನಡೆಸಿ ದೇಶಾದ್ಯಂತ ನಡೆಸಬೇಕಾದ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ