ಒಳಮೀಸಲಾತಿ ಜಾರಿ: ಶೋಷಿತ ಸಮುದಾಯಗಳಿಗೆ ಸಿದ್ದರಾಮಯ್ಯ ಸರ್ಕಾರದಿಂದ ಐತಿಹಾಸಿಕ ಕೊಡುಗೆ
ಬೆಂಗಳೂರು: ದಶಕಗಳ ಕಾಲದ ಹೋರಾಟ ಮತ್ತು ಬೇಡಿಕೆಗೆ ಮನ್ನಣೆ ನೀಡಿರುವ ರಾಜ್ಯ ಸಚಿವ ಸಂಪುಟವು, ಪರಿಶಿಷ್ಟ ಜಾತಿಯ (SC) ಒಳಮೀಸಲಾತಿ ಹಂಚಿಕೆ ಕುರಿತು ಇಂದು ಮಹತ್ವದ ಹಾಗೂ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿಯನ್ನು ಮರು ನಿಗದಿಪಡಿಸಲಾಗಿದೆ.
ಮೀಸಲಾತಿ ಹಂಚಿಕೆ:
- ಒಟ್ಟು ಶೇ. 15ರಷ್ಟು ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಎಡ, ಬಲ ಹಾಗೂ ಇತರ ಸಮುದಾಯಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲು ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ:
- ಪರಿಶಿಷ್ಟ ಜಾತಿ (ಎಡಗೈ): ಶೇ. 5.25
- ಪರಿಶಿಷ್ಟ ಜಾತಿ (ಬಲಗೈ): ಶೇ. 5.25
- ಇತರೆ (ಬೋವಿ, ಲಂಬಾಣಿ, ಕೊರಚ, ಕೊರಮ ಹಾಗೂ 59 ಅಲೆಮಾರಿ ಜಾತಿಗಳು): ಶೇ. 4.5
ಅಲೆಮಾರಿ ಸಮುದಾಯಗಳಿಗೆ ವಿಶೇಷ ಆದ್ಯತೆ:
ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದ, ‘ಸಿ’ ಕೆಟಗರಿಯಲ್ಲಿ ಲಭ್ಯವಾಗುವ ಹುದ್ದೆಗಳ ಪೈಕಿ ಶೇ. 20ರಷ್ಟನ್ನು 59 ಅಲೆಮಾರಿ ಜಾತಿಗಳಿಗೆ ಮೀಸಲಿಡಲು ಸರ್ಕಾರ ನಿರ್ಧರಿಸಿದೆ. ಇದು ಅಲೆಮಾರಿ ಸಮುದಾಯದ ಬದುಕಿನಲ್ಲಿ ಹೊಸ ತಿರುವು ನೀಡಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಮೀಸಲಾತಿ ಪ್ರಮಾಣವು ಶೇ. 50ನ್ನು ಮೀರಬಾರದು” ಎಂಬ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ಪ್ರಸ್ತುತ 15% ವ್ಯಾಪ್ತಿಯಲ್ಲಿ ಈ ಹಂಚಿಕೆ ಮಾಡಲಾಗಿದೆ. ಆದರೂ, ಪರಿಶಿಷ್ಟ ಜಾತಿಗೆ ಶೇ.17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 7 (ಒಟ್ಟು 24%) ಮೀಸಲಾತಿ ನೀಡುವ ತನ್ನ ಮೂಲ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. ಭವಿಷ್ಯದಲ್ಲಿ ನ್ಯಾಯಾಲಯದ ತೀರ್ಪು ಸರ್ಕಾರದ ಪರವಾಗಿ ಬಂದರೆ, ಈ ಹಿಂದೆ ಯೋಜಿಸಿದಂತೆ 6:6:5 ಅನುಪಾತದಲ್ಲಿ ಮೀಸಲಾತಿ ಜಾರಿಗೊಳಿಸಿ ಉಳಿದ ಶೇ. 6ನ್ನು ಬ್ಯಾಕ್ ಲಾಗ್ ಎಂದು ಪರಿಗಣಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಬಜೆಟ್ ನಲ್ಲಿ ಘೋಷಿಸಿದಂತೆ ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶೀಘ್ರದಲ್ಲೇ ಈ ಹೊಸ ಒಳಮೀಸಲಾತಿ ನಿಯಮದನ್ವಯ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ.
“ನಮ್ಮ ಸರ್ಕಾರವು ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ತತ್ವಕ್ಕೆ ಬದ್ಧವಾಗಿದೆ. ಈ ನಿರ್ಧಾರದಿಂದ ದಲಿತ ಸಮುದಾಯದ ಎಲ್ಲಾ ಉಪಜಾತಿಗಳಿಗೂ ಅರ್ಹ ಪ್ರಾತಿನಿಧ್ಯ ಮತ್ತು ನ್ಯಾಯ ಸಿಗಲಿದೆ.”
— ಸಿದ್ದರಾಮಯ್ಯ, ಮುಖ್ಯಮಂತ್ರಿಗಳು.
ಈ ಮಹತ್ವದ ನಿರ್ಧಾರವು ರಾಜ್ಯದ ದಲಿತ ಸಂಘಟನೆಗಳು ಮತ್ತು ಶೋಷಿತ ವರ್ಗಗಳಲ್ಲಿ ಹರ್ಷ ಮೂಡಿಸಿದೆ. ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ತಾಂತ್ರಿಕ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























