ಕೋಮುಗಲಭೆಗಳಿಗೂ, ಚುನಾವಣೆಗಳಿಗೂ ಸಂಬಂಧವಿದೆಯೇ ?

- ದಮ್ಮಪ್ರಿಯ, ಬೆಂಗಳೂರು
ಪುಲ್ವಾಮ ಮತ್ತು ಕಾಶ್ಮೀರ ದುರ್ಘಟನೆಗಳು ಬಹಳ ಖಂಡನೀಯ. ಅಮಾನವೀಯ ಮಾನವ ವಿರೋಧಿ, ಜೀವ ವಿರೋಧಿ ಕೃತ್ಯಗಳು. ಕಾಶ್ಮೀರದ ಈ ದುರ್ಘಟನೆಯಲ್ಲಿ ಅಸುನೀಗಿದ ಅದೆಷ್ಟೋ ಜೀವಗಳ ಕುಟುಂಬಕ್ಕೆ ಶಾಂತಿ ಬಯಸುವುದು ಬುದ್ಧನ ನೆಲದ ಸಂಸ್ಕೃತಿ. ಸತ್ತವರು ಯಾವುದೇ ನಾಡಿಗೆ, ಯಾವುದೇ ಜಾತಿಗೆ, ಯಾವುದೇ ಧರ್ಮಕ್ಕೆ ಸೇರಿದವರಾದರು ಜೀವವನ್ನು ಗೌರವಿಸಬೇಕಾದದ್ದು ಬುದ್ಧ ಹುಟ್ಟಿದ ಈ ನೆಲದ ಸಂಸ್ಕೃತಿ. ಎಲ್ಲಿ ಕೋಮುವಾದಿ ಪಕ್ಷ ಅಧಿಕಾರದಲ್ಲಿರುತ್ತೋ ಅಲ್ಲಿ ಕೋಮುಗಲಭೆ ಸತತವಾಗಿ ನಡೆಯುತ್ತಲೇ ಇರುತ್ತವೆ. ಎಲ್ಲಿ ಕೋಮುವಾದಿ ಪಕ್ಷ ಅಧಿಕಾರದಲ್ಲಿ ಇರುವುದಿಲ್ಲವೋ ಅಲ್ಲಿ ಕೋಮುವಾದಿಗಳು ಕೋಮುವಾದವನ್ನು ಸೃಷ್ಟಿಸುತ್ತಿರುತ್ತಾರೆ. ದೇಶದ ಅಭಿವೃದ್ಧಿಗಿಂತ ಧಾರ್ಮಿಕ ಭಾವನೆಗಳು ಮತ್ತು ಆಚರಣೆಗಳಿಗೆ ಹೆಚ್ಚು ಒತ್ತು ಕೊಡುವುದು ರಾಜಕೀಯ ನಾಯಕರ ದೊಡ್ಡ ಬಂಡವಾಳವಾಗಿ ಬಿಟ್ಟಿದೆ ಎನ್ನಬಹುದು. ಹಾಗೆಯೇ ಕಾಶ್ಮೀರದ ದುರ್ಘಟನೆಯ ಹಿಂದೆ ರಾಜಕೀಯ ಷಡ್ಯಂತರ ನಡೆಯುತ್ತಿರಬಹುದು ಎನ್ನುವ ಅನುಮಾನಗಳು ಈ ದುರ್ಘಟನೆಯ ಸುತ್ತ ಸುತ್ತುತ್ತಿವೆ.
2024 ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಮಣಿಪುರದಲ್ಲಿ ಕೋಮುಗಲಭೆಯನ್ನು ಹಚ್ಚಲಾಯಿತು. 2019ರ ಚುನಾವಣೆಗೂ ಮೊದಲು ಪುಲ್ವಾಮ ದಾಳಿಯನ್ನು ಮುಂದಿಟ್ಟುಕೊಂಡು ದೇಶದ ಜನತೆಯನ್ನು ಧಾರ್ಮಿಕ ಭಾವನೆಗಳ ಅಡಿಯಲ್ಲಿ ವೋಟ್ ಬ್ಯಾಂಕ್ ಅನ್ನು ದೋಚುವ ಹುನ್ನಾರವನ್ನು ನಡೆಸಲಾಯಿತು. ಇದರ ಪರಿಣಾಮದಿಂದ ಸುಮಾರು ಯೋಧರ ಜೀವವನ್ನೇ ಬಲಿ ತೆಗೆದುಕೊಳ್ಳಲಾಯಿತು. ದೇಶದ ಪ್ರಧಾನಿಯನ್ನು ವಿಶ್ವಗುರುವೆಂದು ಬಿಂಬಿಸಿದರೂ, 2014ರ ನಂತರ ಹಲವಾರು ಕೋಮು ಗಲಭೆಗಳು, ಧಾರ್ಮಿಕ ಗಲಭೆಗಳು ನಡೆದ ಸಂದರ್ಭದಲ್ಲಿ ಎಲ್ಲಿಯೂ ಮಾಧ್ಯಮಗಳ ಮುಂದೆ ಬಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿಲ್ಲ ಎನ್ನುವುದು ಅಚ್ಚರಿ ಮಾತ್ರವಲ್ಲ, ಇಂತಹ ಗಂಭೀರ ಘಟನೆಯ ನಡುವೆಯೂ ಬಿಹಾರದ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ನಿಂತಿರುವುದು. ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಳೆದ 12 ವರ್ಷಗಳಲ್ಲಿ ಪ್ರಧಾನಿ ಮೋದಿಯ ಸಾಧನೆ ಶೂನ್ಯ ಎನ್ನುವ ಆರೋಪ ವಿಪಕ್ಷಗಳಿಂದ ಕೇಳಿ ಬರುತ್ತಲೇ ಇದೆ. ದೇಶದಲ್ಲಿ 2014ರಲ್ಲಿ ಇದ್ದ 450 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಇಂದು ಮೂರು ಪಟ್ಟು ಹೆಚ್ಚಾಗಿದೆ. ಕೇವಲ 68 ರೂಪಾಯಿ ಇದ್ದ ಪೆಟ್ರೋಲ್ ಬೆಲೆ ಇಂದು 102 ರೂಪಾಯಿಗೆ ಏರಿಕೆಯಾಗಿದೆ. ಕೇವಲ 58 ರೂಪಾಯಿ ಇದ್ದ ಒಂದು ಡಾಲರ್ ಬೆಲೆ, ಈಗ 86 ರೂಪಾಯಿಗೆ ಏರಿಕೆಯಾಗಿದೆ. ಕಚ್ಚಾ ತೈಲಗಳ ಬೆಲೆ ಕಡಿಮೆಯಾದರೂ ದೇಶದಲ್ಲಿ ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆಯಾಗುವುದು ನಿಂತಿಲ್ಲ.! ಒಂದೇ ಒಂದು ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸದ ವಿಶ್ವಗುರು ಕಳೆದ 11 ವರ್ಷಗಳಲ್ಲಿ ಸುಮಾರು 33 ರಾಷ್ಟ್ರೀಕೃತ ಸಂಸ್ಥೆಗಳನ್ನು ಖಾಸಗಿಕರಣಗೊಳಿಸಿರುವುದು ಈ ದೇಶದ ಬಹುಸಖ್ಯಾತ ಯುವ ಜನತೆಯ ದುಡಿಯುವ ಕೈಗಳಿಂದ ಉದ್ಯೋಗವನ್ನು ಕಸಿದು ಹಾಕಿದಂತಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇಷ್ಟೆಲ್ಲಾ ದುರಂತಗಳು ನಡೆದರೂ ಇವತ್ತಿಗೂ ಅಭಿವೃದ್ಧಿಯ ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡದೇ ಧಾರ್ಮಿಕ ಭಾವನೆಗಳ ಹೆಸರಿನಲ್ಲಿ ಚುನಾವಣಾ ಪ್ರಚಾರಕ್ಕೆ ಇಳಿದಿರುವುದು ಸಾರ್ವಜನಿಕರಲ್ಲಿ ಬೇಸರವನ್ನು ಮೂಡಿಸಿದೆ.
ಕಾಶ್ಮೀರದ ದುರ್ಘಟನೆಯಲ್ಲಿ ತಂದೆಯನ್ನು ಕಳೆದುಕೊಂಡ ಮುಗ್ಧ ಕಂದಮ್ಮಗಳು ಅನಾಥ ಮನಸ್ಥಿತಿಯಿಂದ ಬದುಕುವ ರೀತಿ ನಿರ್ಮಾಣ ಮಾಡಿದ ಇಂತಹ ರಾಜಕೀಯ ವ್ಯವಸ್ಥೆಯನ್ನು ಮೊದಲು ಮಟ್ಟ ಹಾಕಬೇಕಾದದ್ದು ಮತದಾರರ ಆದ್ಯ ಕರ್ತವ್ಯವಾಗಿದೆ. ಕಳೆದ 11 ವರ್ಷಗಳ ರಾಜಕೀಯ ವ್ಯವಸ್ಥೆಯಲ್ಲಿ ಇವತ್ತಿಗೂ ಒಂದೇ ಒಂದು ಸುದ್ದಿಗೋಷ್ಠಿಯನ್ನು ಮಾಡದ ಪ್ರಧಾನಿಗಳು ಯಾವ ರೀತಿಯಲ್ಲಿ ದೇಶದ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗಳಿವೆ. ಕಾಶ್ಮೀರ ಮತ್ತು ಪುಲ್ವಾಮ ದುರ್ಘಟನೆಯಲ್ಲಿ ನಿಜವಾಗಿಯೂ ತನ್ನ ಜೀವವನ್ನ ಮತ್ತು ಜೀವನವನ್ನ ಕಳೆದುಕೊಂಡ ಯೋಧರು ಮತ್ತು ಕುಟುಂಬದೊಳಗಿನ ಮುಖ್ಯಸ್ಥರು ಒಂದು ಕುಟುಂಬ ವ್ಯವಸ್ಥೆಯಿಂದ ದೂರವಾಗಿ ಹಿಡಿ ಕುಟುಂಬವೇ ದುಃಖದ ಮಡುವಿನಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಒಂದು ಘಟನೆಗಳು ಧರ್ಮ ಧರ್ಮಗಳ ನಡುವಿನ ಯುದ್ಧವಾಗದೆ, ಇಲ್ಲಿನ ರಾಜಕೀಯ ವ್ಯವಸ್ಥೆಗಳು ತಮ್ಮ ಅಧಿಕಾರದ ಲಾಲಸೆಯಿಂದ ಭಾರತೀಯ ಮನಃಶಾಂತಿಯ ಜೀವಗಳನ್ನು ಬಲಿಕೊಡುತ್ತಿರುವುದಕ್ಕೆ ಜ್ವಲಂತ ಸಾಕ್ಷಿಯಾಗುತ್ತಿವೆ ಎನಿಸುತ್ತಿದೆ.
ಒಂದು ಧರ್ಮದ ಮೇಲೆ ಅಥವಾ ಒಂದು ಧರ್ಮದ ಜನಾಂಗದ ಮೇಲೆ, ಮತ್ತೊಂದು ಧರ್ಮ ಆಕ್ರಮಣ ಮಾಡುವುದು, ಬಹಳ ಖಂಡನೀಯ. ಧರ್ಮಗಳು ಜನರಿಗೆ ಭದ್ರತೆ ಮತ್ತು ಬದುಕನ್ನು ಕಟ್ಟಿಕೊಡಬೇಕೇ ಹೊರತು, ಧಾರ್ಮಿಕ ವ್ಯವಸ್ಥೆಯ ಆಚರಣೆಗಳು ಮತ್ತು ಧಾರ್ಮಿಕ ಭಾವನೆಗಳು ಎಂದಿಗೂ ಒಂದು ದೇಶಕ್ಕೆ ಒಂದು ಜನಾಂಗಕ್ಕೆ ಕಂಟಕವಾಗಬಾರದು. ಇದು ಪ್ರತೀ ಧರ್ಮದ ಮೂಲ ಮಂತ್ರವಾಗಬೇಕು. ಆದರೆ ಇಂದು ಧರ್ಮ ಧರ್ಮದ ನಡುವಿನ ಕೋಮು ಗಲಭೆಗಳು ಅಮಾಯಕ ಜೀವಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ.
ದೇಶದ ಅಭಿವೃದ್ಧಿ ವಿಚಾರಗಳು ಬಂದಾಗ, ಯಾವ ರಾಜಕೀಯ ಪಕ್ಷಗಳ ಹಸ್ತಕ್ಷೇಪಗಳು ಇರಬಾರದು. ಸ್ವಪ್ರತಿಷ್ಠೆಗಳು ಮೇಲುಗೈ ಸಾಧಿಸಬೇಕೆನ್ನುವ ಹಠವಿರಬಾರದು. ಅಭಿವೃದ್ಧಿ ವಿಚಾರದಲ್ಲಿ ಧರ್ಮ, ಜಾತಿ ರಾಜಕೀಯ ಪಕ್ಷಗಳ ತಿಕ್ಕಾಟಗಳಿರಬಾರದು. ಆಗಲೇ ದೇಶದ ಅಭಿವೃದ್ಧಿ ಸಾಧ್ಯ. ಈಗಾಗಲೇ ಈ ದೇಶದಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ದಿವಾಳಿಯಾಗಿದ್ದು, ಜನರು ನಿರುದ್ಯೋಗದ ಪರಿಸ್ಥಿತಿಯಲ್ಲಿ ದೇಶವನ್ನು ಮತ್ತು ಅರ್ಥವ್ಯವಸ್ಥೆಯನ್ನು ದಿವಾಳಿ ಎಬ್ಬಿಸಿವೆ ಎನ್ನುವ ಮಾತುಗಳಿವೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಸ್ಥಿತಿಯನ್ನು ದಿವಾಳಿಯಾಗಿದಲ್ಲದೆ, ಭಾರತದ ಆರ್ಥಿಕ ವ್ಯವಸ್ಥೆಗೆ ಬಹುದೊಡ್ಡ ಪೆಟ್ಟು ಬಿದ್ದಿದ್ದರೂ, ದೇಶ ಅಭಿವೃದ್ಧಿಯತ್ತ ಮುಂದುವರಿಯುತ್ತಿದೆ ಎಂದು ಎಂದು ಹಸಿ ಸುಳ್ಳುಗಳನ್ನು ಹೇಳುತ್ತಾ ಮತ್ತೆ ಚುನಾವಣಾ ಪ್ರಚಾರಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಪ್ರತಿ ರಾಜ್ಯದಲ್ಲೂ ಚುನಾವಣೆ ಪ್ರಾರಂಭವಾಗುತ್ತಿದ್ದಂತೆ, ಭಾರತದ ಗಡಿಯಲ್ಲಿ ಧಾರ್ಮಿಕ ಗಲಭೆಗಳು ಸೃಷ್ಟಿಯಾಗುತ್ತಿರುವುದನ್ನು ನೋಡಿದರೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ “ಭಾರತೀಯ ಮತದಾರರ ಭಾವನೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಬಿತ್ತಿ ಚುನಾವಣೆಗಳನ್ನು ಗೆಲ್ಲುವುದೇ ಮುಖ್ಯ” ಎನ್ನುವಂತೆ ಇರಬೇಕು ಎನ್ನುವ ವಿಚಾರಗಳು ಚರ್ಚೆಗೀಡಾಗುತ್ತಿದೆ. ರಾಜಕೀಯ ಅಧಿಕಾರದ ಲಾಲಸೆಗೆ ಮುಗ್ಧ ಮನಸುಗಳು ಬಲಿಯಾಗಬೇಕು?, ಮುಗ್ಧ ಜನರ ಬದುಕಲ್ಲಿ ಚೆಲ್ಲಾಟವಾಡುವುದು ಈ ದೇಶದ ರಾಜಕೀಯ ವ್ಯವಸ್ಥೆಯ ದುರಂತದ ಸ್ಥಿತಿ ಎಂದರೂ ತಪ್ಪಾಗಲಾರದು. ದೇಶದ ಅಭಿವೃದ್ಧಿ ವಿಚಾರ ಬಂದಂತ ಸಂದರ್ಭದಲ್ಲಿ ಧರ್ಮದ, ಜಾತಿಯ, ಲಿಂಗದ, ವರ್ಣವ್ಯವಸ್ಥೆಯ ವಿಚಾರಗಳನ್ನ ಬದಿಗೊತ್ತಿ ಪಕ್ಷ ಪಕ್ಷಗಳು ಕುಳಿತು ಚರ್ಚಿಸಿ ಅಭಿವೃದ್ಧಿಗೆ ಮುಂದಾಗಬೇಕೆ ಹೊರತು ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು ಎನ್ನುವ ಅಭಿಪ್ರಾಯಗಳು ಎಲ್ಲೆಡೆ ಕೇಳಿ ಬರುತ್ತಿವೆ.
ಕಾಶ್ಮೀರ ದುರ್ಘಟನೆಯಲ್ಲಿ ಮರಣ ಹೊಂದಿದ ಎಲ್ಲ ನನ್ನ ಭಾರತದ ಜೀವನಾಡಿಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ, ಅವರ ಕುಟುಂಬದವರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಬುದ್ಧನಲ್ಲಿ ಪ್ರಾರ್ಥಿಸುತ್ತೇನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: