ಆಸೆ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ | ಮತದಾನ ಜಾಗೃತಿಗೆ ಬೀದಿ ನಾಟಕ - Mahanayaka

ಆಸೆ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ | ಮತದಾನ ಜಾಗೃತಿಗೆ ಬೀದಿ ನಾಟಕ

15/12/2020

ಹುಬ್ಬಳ್ಳಿ: ಡಿಸೆಂಬರ್ 22 ಹಾಗೂ 25 ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರತಿಯೊಬ್ಬ ನಾಗರಿಕರು ಮತಗಟ್ಟೆಗಳಿಗೆ ಬಂದು ತಮ್ಮ ಮತ ಚಲಾಯಿಸಬೇಕು ಎಂದು ಬೀದಿ ನಾಟಕ ಮತ್ತು ಜನಪದ ಸಂಗೀತ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಜಾಗೃತಿ ಮೂಡಿಸಲಾಯಿತು.

ಕೊರೊನಾ ಮತ್ತು ಮತದಾನದ ಜಾಗೃತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದ ಜನಪದ ಸಂಗೀತ ಮತ್ತು ಬೀದಿ ನಾಟಕಗಳು ಇಂದು ಜಿಲ್ಲೆಯ ಕಲಘಟಗಿ ತಾಲೂಕಿನ ಕಂದ್ಲಿ ಹಾಗೂ ದಿಂಬುವಳ್ಳಿ ಗ್ರಾಮಗಳಲ್ಲಿ ಜರುಗಿದವು.

ಕುಂದಗೋಳ ತಾಲೂಕು ಹರ್ಲಾಪುರದ ಸಿವೈಸಿಡಿ ಕಲಾ ತಂಡ ಮತ್ತು ಸುಲ್ತಾನಪುರದ ಜನಪದ ಫೌಂಡೇಶನ್ ಕಲಾವಿದರು ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

ಸಂವಿಧಾನದಲ್ಲಿ ಮತ ಚಲಾಯಿಸಲು ಎಲ್ಲರಿಗೂ ಹಕ್ಕಿದೆ. ಆಸೆ, ಆಮಿಷಗಳಿಗೆ ಒಳಗಾಗದೇ ನಿಮಗೆ ಇಷ್ಟವಾಗುವ ಸಮರ್ಥ ಅಭ್ಯರ್ಥಿಗಳನ್ನು ಆರಿಸಲು ಮತದಾನ ಮಾಡಬೇಕು. ಮತದಾನದ ಸಂದರ್ಭದಲ್ಲಿ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿಕೊಂಡು, ದೈಹಿಕ ಅಂತರವನ್ನು ಕಾಪಾಡಿಕೊಂಡು ಮತ ಚಲಾಯಿಸಬೇಕು. ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ವಾರ್ತಾ ಇಲಾಖೆಯು ಮತದಾನ ಮತ್ತು ಕೊರೊನಾದ ಬಗ್ಗೆ ನಾಟಕ ಮೂಲಕ ಜಾಗೃತಿಯನ್ನು ಮೂಡಿಸುತ್ತಿರುವುದು ಸ್ವಾಗತಾರ್ಹವಾಗಿದೆ. ನಾವೆಲ್ಲರೂ ತಪ್ಪದೆ ಮತ ಹಾಕುತ್ತೇವೆ ಕಲಾವಿದರ ಅಭಿನಯ ಆಕರ್ಷಕವಾಗಿದೆ ಎಂದು ಕಂದ್ಲಿ ಗ್ರಾಮದ ಹಿರಿಯರಾದ ಲಕ್ಷ್ಮಣ ಚಂದ್ರಕಾಂತ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ