ಪ್ರಬಂಧ ಸ್ಪರ್ಧೆ ವಿಜೇತರಿಗೆ ಹೆಲಿಕಾಫ್ಟರ್ ಮೂಲಕ ಸುತ್ತಾಡುವ ಅವಕಾಶ | ಸತೀಶ್ ಜಾರಕಿಹೊಳಿ ಹೊಸ ಪ್ರಯತ್ನ - Mahanayaka
10:44 AM Wednesday 22 - April 2026

ಪ್ರಬಂಧ ಸ್ಪರ್ಧೆ ವಿಜೇತರಿಗೆ ಹೆಲಿಕಾಫ್ಟರ್ ಮೂಲಕ ಸುತ್ತಾಡುವ ಅವಕಾಶ | ಸತೀಶ್ ಜಾರಕಿಹೊಳಿ ಹೊಸ ಪ್ರಯತ್ನ

11/01/2021

ಬೆಳಗಾವಿ: ಹಲವು ವಿನೂತನ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ಈ ಬಾರಿ ಪ್ರಬಂಧ, ಭಾಷಣ ಸ್ಪರ್ಧೆ ವಿಜೇತರಿಗೆ ಹೆಲಿಕಾಫ್ಟರ್ ನಲ್ಲಿ ಸುತ್ತಾಡಲು ಅವಕಾಶ ನೀಡುವ ಮೂಲಕ ಗಮನ ಸೆಳೆಯಿತು.

ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿನ ವಿಜೇತರಿಗೆ  ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ವಾಲ್ಮೀಕಿ ಮೈದಾನದಲ್ಲಿ ಇಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಬಳಿಕ ಹೆಲಿಕಾಪ್ಟರ್ ನಲ್ಲಿ ಗೋಕಾಕ್ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಸುತ್ತ ರೌಂಡ್ ಹೊಡೆಯುವ ಮೂಲಕ ವಿಜೇತ ಯುವಕ-ಯುವತಿಯರನ್ನು ರಂಜಿಸಲಾಯಿತು.

ಪ್ರಬಂಧ ಸ್ಪರ್ಧೆಯಲ್ಲಿ ಬೆಳಗಾವಿಯ ವೈಷ್ಣವಿ ಕಡೋಲ್ಕರ್, ಶಿರಗುಪ್ಪಿಯ ಜ್ಯೋತಿ ಗುದ್ದೀನ, ರಾಯಚೂರಿನ ಸುಧಾ ಕರ್ಲಿ, ಯಾದವಾಡದ ಸಿಮ್ರಾನ್ ಬಾಗವಾನ್, ಚಾಮರಾಜನಗರದ ಮಾನಸ ವಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಭಾಷಣ ಸ್ಪರ್ಧೆಯಲ್ಲಿ ತೀರ್ಥಹಳ್ಳಿಯ ಪೂಜಾ ತೀರ್ಥಹಳ್ಳಿ, ಘಟಪ್ರಭಾದ ಮುಷ್ರಫ್ ಸಯ್ಯದ್, ಕಲಬುರ್ಗಿಯ ಪ್ರಿಯಂಕಾ ಭರಣಿ, ಮೆಳವಂಕಿಯ ಪವಿತ್ರಾ ಹತ್ತರವಾಟ, ಧಾರವಾಡದ ಶ್ವೇತಾ ಜುಗಳೆ, ಕಲಖಾಂಬದ ಶಾಮಲಾ ಭರಮಾ ಹಿರೋಜಿ ಭಾಷಣ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಾವಿತ್ರಿ ಬಾಯಿ ಫುಲೆ, ಶಾಹು ಮಹಾರಾಜ್ , ಶಿವಾಜಿ ಮಹಾರಾಜ್ , ಡಾ. ಬಾಬಾಸಾಹೇಬ ಅಂಬೇಡ್ಕರ್, ಮಹಾತ್ಮಾ ಗಾಂಧಿಜೀ, ಟಿಪ್ಪು ಸುಲ್ತಾನ್ ಸೇರಿ ಅನೇಕ‌ ಮಹನಿಯರು ನಮಗಾಗಿ ಹೋರಾಡಿದ್ದಾರೆ. ಅವರೇನು ಬಡವರಲ್ಲ ಮಹಾರಾಜರು ಆದರೆ ನಮಗಾಗಿ ಆಸ್ತಿ, ಅಂತಸ್ತು ಎಲ್ಲವನ್ನು ತ್ಯಾಗ ಮಾಡಿ, ಮಾದರಿಯಾಗಿದ್ದಾರೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ