ರಾಜ್ಯ ಬಿಜೆಪಿಗೆ ಬಂಡಾಯದ ಬಿಸಿ:  ಸದ್ದಿಲ್ಲದೇ ನಡೆಯುತ್ತಿದೆಯಾ ಬಣಗಳ ಹೊಡೆದಾಟ! - Mahanayaka
9:50 AM Saturday 17 - January 2026

ರಾಜ್ಯ ಬಿಜೆಪಿಗೆ ಬಂಡಾಯದ ಬಿಸಿ:  ಸದ್ದಿಲ್ಲದೇ ನಡೆಯುತ್ತಿದೆಯಾ ಬಣಗಳ ಹೊಡೆದಾಟ!

29/11/2020

ಬೆಂಗಳೂರು:  ಸಚಿವ ಸಂಪುಟ ವಿಸ್ತರಣೆಗೆ ಒಂದೆಡೆ ಹೈಕಮಾಂಡ್  ನಿರಾಸಕ್ತಿ ವ್ಯಕ್ತಪಡಿಸಿದ್ದರೆ, ಇತ್ತ ರಾಜ್ಯ ಬಿಜೆಪಿಯಲ್ಲಿ ಬಂಡಾಯ ಚಟುವಟಿಕೆ ಕಂಡು ಬಂದಿದ್ದು, ಪಕ್ಷದೊಳಗೆ ನಾಯಕತ್ವ ಗೊಂದಲ ತೀವ್ರವಾಗಿದೆ.

ಸದ್ಯದ ಮಾಹಿತಿಗಳ ಪ್ರಕಾರ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.  ಯಡಿಯೂರಪ್ಪ ನಾಯಕತ್ವವನ್ನು ಬದಲಿಸಲು ಬಿಜೆಪಿ ಹೈಕಮಾಂಡ್ ಕೂಡ ಯೋಚನೆ ಮಾಡುತ್ತಿದೆ ಎಂದು ಹೇಳಲಾಗಿದ್ದು, ಯಡಿಯೂರಪ್ಪ ವಿರುದ್ಧ ಬಿಜೆಪಿ ಶಾಸಕರು ರಾಜಾರೋಷವಾಗಿ ಹೇಳಿಕೆಗಳನ್ನು ನೀಡಿದ್ದರೂ, ಅವರ ವಿರುದ್ಧ ಪಕ್ಷವು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಹೈಕಮಾಂಡ್ ಯಡಿಯೂರಪ್ಪನವರನ್ನು ಬದಲಿಸಲು ಪ್ಲಾನ್ ಮಾಡಿದೆ ಎನ್ನುವ ಅನುಮಾನಗಳು ಬಲಗೊಳ್ಳುವಂತೆ ಮಾಡಿದೆ.

ಯಡಿಯೂರಪ್ಪ ವಿರೋಧಿ ಬಣವು ಪದೇ ಪದೇ ತಮ್ಮ ಬೆಂಬಲಿಗ ಶಾಸಕರೊಂದಿಗೆ  ಗುಪ್ತ ಸಭೆಯನ್ನು ನಡೆಸುತ್ತಿದೆ. ಇದಕ್ಕೆ ಪ್ರತಿಯುತ್ತರ ಕೊಡಲು ಯಡಿಯೂರಪ್ಪ ಬಣವು ಸಿದ್ಧವಾಗುತ್ತಿದೆ ಎಂದು ಹೇಳಲಾಗಿದೆ.  ರಾಜ್ಯ ರಾಜಕೀಯದ ಪರಿಸ್ಥಿತಿ ಬದಲಾಗುತ್ತಿರುವುದು ಇದೀಗ ಹೈಕಮಾಂಡ್ ಗಮನಕ್ಕೂ ಬಂದಿದ್ದು, ಯಡಿಯೂರಪ್ಪ ಅವರನ್ನು ಡಿಸೆಂಬರ್ 5ರಂದು ದೆಹಲಿಗೆ ಆಹ್ವಾನಿಸಿದೆ .

ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ಬಿಜೆಪಿ ಮಿತ್ರ ಶಾಸಕರು ಪ್ರತ್ಯೇಕ ಸಭೆಯನ್ನು ನಡೆಸಿದ್ದು, ರಮೇಶ್ ಜಾರಕಿಹೊಳಿ ಈ ಸಭೆಯ ನೇತೃತ್ವ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.  ಈ ನಡುವೆ ಯಡಿಯೂರಪ್ಪ ಅ ವರ ವಿರುದ್ಧ ಕೆಲವು ಶಾಸಕ, ಸಚಿವರು ಮುನಿಸಿಕೊಂಡು ಹೈಕಮಾಂಡ್ ಭೇಟಿ ಮಾಡಿದ್ದಾರೆ. ಈ  ಎಲ್ಲ ವಿದ್ಯಮಾನಗಳು ಬಿಜೆಪಿಯನ್ನು ಎಲ್ಲಿಕೊಂಡು ಹೋಗಿ ನಿಲ್ಲಿಸುತ್ತದೆ ಎನ್ನುವುದು  ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿ