ಬಿಜೆಪಿಯನ್ನು ನಂಬಿ ಕಾಂಗ್ರೆಸ್-ಜೆಡಿಎಸ್ ಗೆ ಕೈಕೊಟ್ಟಿದ್ದ ನಾಗೇಶ್ ಗೆ ಆಘಾತ | ಸಚಿವ ಸ್ಥಾನ ಕೈತಪ್ಪುವ ಭೀತಿಯಲ್ಲಿ ಅಬಕಾರಿ ಸಚಿವರು - Mahanayaka
12:40 PM Wednesday 28 - January 2026

ಬಿಜೆಪಿಯನ್ನು ನಂಬಿ ಕಾಂಗ್ರೆಸ್-ಜೆಡಿಎಸ್ ಗೆ ಕೈಕೊಟ್ಟಿದ್ದ ನಾಗೇಶ್ ಗೆ ಆಘಾತ | ಸಚಿವ ಸ್ಥಾನ ಕೈತಪ್ಪುವ ಭೀತಿಯಲ್ಲಿ ಅಬಕಾರಿ ಸಚಿವರು

12/01/2021

ಬೆಂಗಳೂರು: ಅಬಕಾರಿ ಸಚಿವ ಎಚ್.ನಾಗೇಶ್ ಸಂಪುಟದಿಂದ ಕೋಕ್ ಪಡೆಯುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದ್ದು, ತಮ್ಮನ್ನು ಸಚಿವ ಸಂಪುಟದಿಂದ ಕೈಬಿಡದಂತೆ ಎಚ್.ನಾಗೇಶ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದಾರೆ.

ವರಿಷ್ಠರ ನಿರ್ದೇಶನದ ಮೇರೆಗೆ ಸದ್ಯ ಸಂಪುಟ ವಿಸ್ತರಣೆ ನಡೆಯುತ್ತಿದ್ದು, ಈ ಕಾರಣಕ್ಕಾಗಿ ತನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪನವರು  ಅಸಹಾಯಕತೆ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.  ಈ ಮೂಲಕ ನಾಗೇಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವುದು ಖಚಿತ ಎನ್ನುವುದನ್ನು ಯಡಿಯೂರಪ್ಪ ಅವರು ಪರೋಕ್ಷವಾಗಿ ಹೇಳಿದ್ದು, ಇದರಿಂದಾಗಿ ನಾಗೇಶ್ ತೀವ್ರ ಆಕ್ರೋಶಿತರಾಗಿದ್ದಾರೆ.

ಯಾವುದೇ ಸಮಯದಲ್ಲಿ ನಾಗೇಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅವರು ಮುಖ್ಯಮಂತ್ರಿಗಳ ಭೇಟಿಯ ಬಳಿಕ ತೀವ್ರವಾಗಿ ಆಕ್ರೋಶಿತರಾಗಿದ್ದು, ಮಾಧ್ಯಮಗಳಿಗೂ ಪ್ರತಿಕ್ರಿಯಿಸದೇ ಹೊರಟು ಹೋಗಿದ್ದಾರೆ.

ವಿಧಾನಸಭಾ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಗೇಶ್ ವಿಜೇತರಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅವರನ್ನು ಮಂತ್ರಿ ಮಾಡಲಾಗಿತ್ತು. ಬಿಜೆಪಿಯ ಮೇಲೆ ವಿಶ್ವಾಸ ಇಟ್ಟು ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಕೈಕೊಟ್ಟು ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಆದರೆ ಇದೀಗ ನಾಗೇಶ್ ಅವರಿಗೆ ಬಿಜೆಪಿ ದ್ರೋಹ ಬಗೆಯಲು ಮುಂದಾಗಿದೆ.

ಇತ್ತೀಚಿನ ಸುದ್ದಿ