ಸುರೇಂದ್ರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ | ನಾನೇ ಹತ್ಯೆ ಮಾಡಿದ್ದೇನೆ ಎಂಬ ಆಡಿಯೋ ವೈರಲ್ | ಸುರೇಂದ್ರನ ಹತ್ಯೆ ಹಿಂದೇನಿದೆ ಗೊತ್ತಾ? - Mahanayaka

ಸುರೇಂದ್ರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ | ನಾನೇ ಹತ್ಯೆ ಮಾಡಿದ್ದೇನೆ ಎಂಬ ಆಡಿಯೋ ವೈರಲ್ | ಸುರೇಂದ್ರನ ಹತ್ಯೆ ಹಿಂದೇನಿದೆ ಗೊತ್ತಾ?

22/10/2020

ಮಂಗಳೂರು: ರೌಡಿಶೀಟರ್, ತುಳುಚಿತ್ರನಟ ಸುರೇಂದ್ರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಸುರೇಂದ್ರನ ಆಪ್ತ ಸತೀಶ್ ಕುಲಾಲ್, ಈ ಕೊಲೆಯನ್ನು ತಾನೇ ಮಾಡಿರುವುದಾಗಿ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ ಎಂದು ವರದಿಯಾಗಿದೆ.

ನಿನ್ನೆ ರಾತ್ರಿ ಅಪಾರ್ಟ್ ಮೆಂಟ್  ನಲ್ಲಿ ಸುರೇಂದ್ರನನ್ನು ನಾನು ಕೊಲೆ ಮಾಡಿದ್ದೇನೆ. ಇದು ಕಿಶನ್ ಹೆಗ್ಡೆಯ ಸಾವಿನ ಪ್ರತಿಕಾರ, ಸುರೇಂದ್ರ ಬಡ್ಡಿ ವ್ಯವಹಾರ ಮಾಡಿ ಅದನ್ನು ಇಂತಹ ಪಾಪದ ಜನರ ಸಾವಿಗೆ ಉಪಯೋಗಿಸುತ್ತಿದ್ದ. ನಾನು 22 ವರ್ಷದಿಂದ ಸುರೇಂದ್ರನ ಜತೆಯಲ್ಲೇ ಇದ್ದವನು ಎಂದು ಹೇಳಿಕೊಂಡಿದ್ದಾನೆ.

ಕಿಶನ್ ಹೆಗ್ಡೆ ಕೊಲೆಯಲ್ಲಿ ಇವನು ಹಣದ ಸಹಾಯ ಮಾಡಿದ್ದ. ವಿಷಯ ನನಗೆ ತಿಳಿದಿತ್ತು. ನಾನು ಅವನ ಹತ್ತಿರ ಹೇಳಿದ್ದೆ. ನೀನು ತಪ್ಪು ಮಾಡ್ತಾ ಇದ್ದೀಯಾ ಸುರೇಂದ್ರ. ನಿನಗೆ ಬೇಡದ ವಿಷಯ. ಆಗ ಈ ವಿಷಯ ಹೊರಗಡೆ ಹೇಳಿದ್ರೆ ನಿನ್ನನ್ನು ಸಾಯಿಸುತ್ತೇನೆ ಅಂತಾ ಬೆದರಿಕೆ ಹಾಕಿದ್ದ ಎಂದು ಸತೀಶ್ ಹೇಳಿದ್ದಾನೆ.

ಮೊನ್ನೆ ಅನಾಮಿಕನಿಗೆ ಕರೆ ಮಾಡಿ ಜೈಲಿನಲ್ಲಿರೋ ಮನೋಜ್ ಎಂಬಾತನಿಗೆ ಹಣ, ಬಟ್ಟೆ ಕೊಡಲಿಕ್ಕಿದೆ. ಇದಕ್ಕೆ ನಿಮ್ಮ ಸಹಾಯ ಬೇಕು ಅಂತಾ ಹೇಳುತ್ತಿದ್ದ. ಮತ್ತೊಂದು ದಿನ ಅವರಿಗೆ ಕರೆ ಮಾಡಿ ಬಟ್ಟೆ, ಹಣ ತಲುಪಿಸಿದ್ದೇನೆ. ಸಹಾಯ ಮಾಡಿದ್ದಕ್ಕಾಗಿ ಥ್ಯಾಂಕ್ಸ್ ಅಂತಾ ಹೇಳಿದ್ದನ್ನು ನಾನು ಕೇಳಿದ್ದೇನೆ ಎಂದು ಸತೀಶ್ ಹೇಳಿದ್ದಾನೆ.

ನಾನು ಕಿಶನ್​ನ ಗೆಳೆಯನಿಗೆ ಕರೆ ಮಾಡಿ ತಿಳಿಸಿದೆ. ಅವನಿಗೆ ಈ ವಿಚಾರದಲ್ಲಿ ಕೋಪ ಮತ್ತು ಬೇಸರ ಕೂಡ ಇತ್ತು. ಸುರೇಂದ್ರ ಮತ್ತು ಕೋಡಿಕೆರೆ ಮನೋಜನಿಂದ ಹಲವು ಯುವಕರ ಕೊಲೆಯಾಗುತ್ತಿದ್ದರು. ಅದಕ್ಕಾಗಿ ನಾವೇ ಸುರೇಂದ್ರನನ್ನು ಕೊಂದೆವು. ನಾವೀಗ ಕಾರವಾರದಲ್ಲಿದ್ದೇವೆ. ನಮಗೆ ಏನು ಮಾಡಬೇಕೆಂದು ತೋಚದೆ ಇಲ್ಲಿಗೆ ಬಂದಿದ್ದೇವೆ. ನಾವೇ ಪೊಲೀಸರಿಗೆ ಶರಣಾಗುತ್ತೇವೆ ಎಂದು ಸತೀಶ್ ಈ ಆಡಿಯೋದಲ್ಲಿ ಹೇಳಿದ್ದಾನೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ