ಪಶ್ಚಿಮ ಬಂಗಾಳದ ರಾಜ್ಯಪಾಲರ ವಿರುದ್ಧ ಲೈಂಗಿಕ ಹಗರಣದ ಆರೋಪ: ಪೊಲೀಸ್ ತನಿಖೆಗೆ ಸಹಕರಿಸಬಾರದು ಎಂದ ಆರೋಪಿತ ರಾಜ್ಯಪಾಲರಿಂದಲೇ ಆದೇಶ..!
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ವಿಶೇಷ ಬೆಳವಣಿಗೆ ನಡೆದಿದೆ. ರಾಜಭವನದ ಮಹಿಳಾ ಉದ್ಯೋಗಿಗೆ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಇದೀಗ ರಾಜಭವನದ ಯಾವ ಉದ್ಯೋಗಿಗಳೂ ಈ ಕುರಿತಂತೆ ಪೊಲೀಸ್ ತನಿಖೆಗೆ ಸಹಕರಿಸಬಾರದು ಎಂದು ರಾಜ್ಯಪಾಲರು ಆದೇಶ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಗೀಡಾಗಿದ್ದಾರೆ.
ಮಹಿಳೆ ನೀಡಿರುವ ದೂರಿನ ಬಗ್ಗೆ ತನಿಖೆಗೆ ಪೊಲೀಸರು ಆಗಮಿಸಿದಲ್ಲಿ ಅವರಿಗೆ ಯಾವುದೇ ಹೇಳಿಕೆಯನ್ನು ನೀಡಬಾರದು ಎಂದು ಗವರ್ನರ್ ತಾಕೀತು ಮಾಡಿದ್ದಾರೆ. ಈ ನಡುವೆ ರಾಜ್ಯಪಾಲರ ವಿರುದ್ಧದ ತನಿಖೆಗೆ ವಿಶೇಷ ತಂಡವನ್ನು ಪಶ್ಚಿಮ ಬಂಗಾಳ ಪೊಲೀಸರು ರಚಿಸಿದ್ದಾರೆ. ರಾಜ ಭವನದ ಸಿಸಿಟಿವಿ ದೃಶ್ಯಾವಳಿಯನ್ನು ಕೇಳಿದ್ದಾರೆ.
ಆದರೆ ರಾಜ ಭವನದಿಂದ ಯಾವುದೇ ಸಹಕಾರ ನೀಡಬಾರದೆಂದು ರಾಜ್ಯಪಾಲರು ಸೂಚಿಸಿರುವುದರಿಂದ ಈವರೆಗೆ ಯಾವುದೇ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿಲ್ಲ. ದೂರು ದಾಖಲಾದ ತಕ್ಷಣ ರಾಜಭವನಕ್ಕೆ ಪೊಲೀಸರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬೋಸು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ಮಹಿಳೆ 2019 ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಅವರ ಪದೋನ್ನತಿಯ ಬಗ್ಗೆ ನಡೆಸಲಾದ ಚರ್ಚೆಯ ವೇಳೆ ಈ ಲೈಂಗಿಕ ಕಿರುಕುಳ ನಡೆದಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth