ಮಾರಾಟವಾದ ಒಬ್ಬ ಪತ್ರಕರ್ತ ಸಾವಿರ ಭಯೋತ್ಪಾದಕನಿಗೆ ಸಮ!: ಅಂಬೇಡ್ಕರ್ ಮಾತು...! | ಸಮಾಜಘಾತುಕ ಮಾಧ್ಯಮಗಳು..! | ಸುಪ್ರೀಂಕೋರ್ಟ್ ಮಂಗಳಾರತಿ..! - Mahanayaka
12:37 PM Saturday 18 - October 2025

ಮಾರಾಟವಾದ ಒಬ್ಬ ಪತ್ರಕರ್ತ ಸಾವಿರ ಭಯೋತ್ಪಾದಕನಿಗೆ ಸಮ!: ಅಂಬೇಡ್ಕರ್ ಮಾತು…! | ಸಮಾಜಘಾತುಕ ಮಾಧ್ಯಮಗಳು..! | ಸುಪ್ರೀಂಕೋರ್ಟ್ ಮಂಗಳಾರತಿ..!

suprim court
14/01/2023

ಮಾರಾಟವಾದ ಒಬ್ಬ ಪತ್ರಕರ್ತ ಸಾವಿರ ಭಯೋತ್ಪಾದಕನಿಗೆ ಸಮ.! ಭಾರತದ ಸಂವಿಧಾನ ಶಿಲ್ಪಿ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿರೋ ಈ ಮಾತು ಸರ್ವಕಾಲಿಕ ಸತ್ಯ. ಅದನ್ನೂ ಚಾಚುತಪ್ಪದೇ ತಾ ಮುಂದು ನಾ ಮುಂದು ಅನ್ನೋ ರೀತಿಯಲ್ಲಿ ಜಿದ್ದಿಗೆ ಬಿದ್ದು ಸಾಬೀತು ಮಾಡಲು ಹೋಗುತ್ತಿದೆ. ಈಗಿನ ಒಂದಷ್ಟು ಮಾಧ್ಯಮಗಳು. ಇಂತಹ ಮಾನಗೇಡಿ ಮಾಧ್ಯಮಗಳ ಹಣದಾಸೆಗೆ ಬಲಿಯಾಗಿರೋ ಅಮಾಯಕ ವ್ಯಕ್ತಿಗಳ, ಕುಟುಂಬಗಳ, ನಿಷ್ಠಾವಂತ ಅಧಿಕಾರಿಗಳ ಪಟ್ಟಿಯೇ ದೊಡ್ಡದಿದೆ.


Provided by

ಸದ್ಯ ಹಾಳಾಗುತ್ತಿರುವ ಸಾಮಾಜಿಕ ಸ್ವಾಸ್ಥ್ಯ, ಭಂಗವಾಗುತ್ತಿರುವ ಶಾಂತಿ, ಕುಂಠಿತವಾಗುತ್ತಿರುವ ಆರ್ಥಿಕ ಪ್ರಗತಿ ಇದೆಲ್ಲದ್ದಕ್ಕೂ ಮುಖ್ಯ ಕಾರಣ ಇದೇ ಒಂದಷ್ಟು ಲಜ್ಜೆಗೇಡಿ ಮಾಧ್ಯಮಗಳು. ತಾವು ಹಾಕುವ ಯಡವಟ್ಟು ಸುದ್ದಿಗಳಿಂದ ಯಾರ್ ಮನೆ ಹಾಳಾದ್ರೂ, ಇನ್ಯಾರದ್ದೋ ವ್ಯಕ್ತಿತ್ವಕ್ಕೆ ಕಳಂಕ ಬಂದ್ರೂ, ಮತ್ಯಾರದ್ದೋ ಅಮಾಯಕರ ಅಮೂಲ್ಯ ಜೀವ ಹೋದ್ರೂ ಅದ್ಯಾವ್ದು ಅವರಿಗೆ ಲೆಕ್ಕಕ್ಕಿಲ್ಲ.

ಒಂದಷ್ಟು ಮಾಧ್ಯಮಗಳ ಮುಖ್ಯ ಅಜೆಂಡಾ, ತಾವು ಯಾವ ಮಾರ್ಗದಲ್ಲಾದ್ರೂ ಹಣ ಮಾಡ್ಬೇಕು ಅನ್ನೋದಷ್ಟೇ.! ಅದಕ್ಕೋಸ್ಕರ ಯಾರ ಮನೆಯ ಬೆಡ್ ರೂಂನಲ್ಲಿ ಕ್ಯಾಮೆರಾ ಇಡೋಕೂ ಹೇಸಲ್ಲ ಈ ನೀಚರು. ಮತ್ತೊಂದೆಡೆ ವ್ಯಕ್ತಿ–ವ್ಯಕ್ತಿಗಳ ನಡುವೆ, ಜಾತಿ-ಜಾತಿಗಳ ನಡುವೆ, ಧರ್ಮ–ಧರ್ಮಗಳ ನಡುವೆ  ತಂದಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಸಮಾಜವನ್ನ ಸದ್ದಿಲ್ಲದೇ ಒಡೆಯುವ ಕೆಲಸವನ್ನ ನಾಜೂಕಾಗಿ ಈಗಿನ ಒಂದಷ್ಟು ಮಾಧ್ಯಮಗಳು ಮಾಡಿಕೊಂಡು ಬರುತ್ತಿವೆ. ಕೇಸರಿ-ಬಿಳಿ-ಹಸಿರು ನಡುವೆ ಒಂದು ಅಶೋಕ ಚಕ್ರ.! ಇದನ್ನ ನೋಡಿದ್ರೆ ನಾನು ಭಾರತೀಯ ಅನ್ನೋ ಹೆಮ್ಮೆ ಮೂಡುತ್ತೆ. ಜೊತೆಗೆ ನಮ್ಮ ಮೈಯಲ್ಲಿ ನಮಗರಿವಿಲ್ಲದಂತೆ ಒಂದು ಪವರ್ ಪಾಸ್ ಆಗುತ್ತೆ, ರೋಮಾಂಚನವಾಗುತ್ತೆ. ಈ ಬಾವುಟವನ್ನ ಪ್ರಪಂಚದ ಯಾವ ಮೂಲೆಯಲ್ಲಿದ್ದುಕೊಂಡು ಯಾರೇ ನೋಡಿದ್ರೂ ಇದು ನಮ್ಮ ಹೆಮ್ಮೆಯ ಭಾರತ ಅನ್ನೋ ಗುರುತನ್ನ ಅವರು ಹಿಡಿಯುತ್ತಾರೆ. ಆದ್ರೆ ಇದೇ ಪವಿತ್ರ ಮಾಧ್ಯಮದಲ್ಲಿ ತುರುಕಿಕೊಂಡಿರೋ ಕೆಲ ದುರುಳರು, ನಮ್ಮ ದೇಶವನ್ನ ಒಡೆಯುವ ಕೆಲಸವನ್ನ ರಾಜಾರೋಷವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ನಮ್ಮದು ಜಾತ್ಯಾತೀತ ರಾಷ್ಟ್ರ, ಇಲ್ಲಿ ಎಲ್ಲರೂ ಸಮಾನರು ಅನ್ನೋ ಭಾವವನ್ನ ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವಾರು ಧೀಮಂತ ವ್ಯಕ್ತಿಗಳಿಂದ ಹಿಡಿದು ಸದ್ಯ ಇಂದು ದೇಶವನ್ನ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿರವರು ಸೇರಿದಂತೆ ಪ್ರತಿಯೊಬ್ಬರೂ ಇಟ್ಟುಕೊಂಡಿದ್ದಾರೆ. ಪ್ರಚಂಚದ ಮುಂದೆ ಭಾರತವನ್ನ ಶಕ್ತಿಶಾಲಿ ರಾಷ್ಟ್ರ ಮಾಡಬೇಕೆಂದು ಒಂದಷ್ಟು ಮಂದಿ ಹಗಲಿರುಳು ಶ್ರಮವಹಿಸಿ ದುಡಿಯುತ್ತಿದ್ರೆ, ಇನ್ನೊಂದೆಡೆ ಕೇಸರಿಯನ್ನ ಪ್ರತಿನಿಧಿಸುವ ಹಿಂದೂಗಳ ಮೇಲೆ ಹಸಿರನ್ನ ಪ್ರೀತಿಸುವ ಮುಸ್ಲಿಂರನ್ನ ಎತ್ತುಕಟ್ಟೋದು..! ಶುಭ್ರ ಬಿಳಿ ಬಣ್ಣವನ್ನ ಸಂಕೇತವನ್ನಿಟ್ಟುಕೊಂಡು ತಮ್ಮ ಧಾರ್ಮಿಕತೆಯನ್ನ ಇಷ್ಟಪಡುವ ಕ್ರೈಸ್ತರ ಮೇಲೆ ಮತ್ತೊಂದು ರೀತಿಯಲ್ಲಿ ಸಮರ ಸಾರೋದನ್ನ ಈ ಕೆಲ ಸಮಾಜಘಾತುಕ ದೃಶ್ಯಮಾಧ್ಯಮಗಳು ತಮ್ಮ ದಿನನಿತ್ಯದ ಅವಿಭಾಜ್ಯ ಭಾಗ ಅನ್ನೋ ರೀತಿಯಲ್ಲಿ ಮಾಡಿಕೊಂಡು ಬರುತ್ತಿವೆ.! ನಮ್ಮ ನಮ್ಮಲ್ಲೇ ಪರಸ್ಪರ ದ್ವೇಷ ಭಾವವನ್ನ ಮೂಡಿಸಿ ತಮ್ಮ ಹಿಡನ್ ಅಜೆಂಡಾವನ್ನ ಸಾಧಿಸುತ್ತಿವೆ.!

ಯೋಚನೆ ಮಾಡಿ, ಒಂದು ಕುಟುಂಬದಲ್ಲಿ ಬಿರುಕಿದ್ರೆ ಹೇಗೆ ಆ ಕುಟುಂಬ ನೆಮ್ಮದಿಯಿಂದ ಇರೋಕೆ ಸಾಧ್ಯ ಇಲ್ವೋ..? ಹಾಗೆಯೇ ಭಾರತಾಂಬೆಯ ಮಕ್ಕಳಾಗಿರೋ ನಾವು ಪರಸ್ಪರ ದ್ವೇಷ, ಅಸೂಯೆಯಿಂದ ಕಚ್ಚಾಡ್ತಿದ್ರೆ ನಿಜಕ್ಕೂ ವ್ಯಕ್ತಿಗತ ಅಭಿವೃದ್ಧಿ ಆಗುತ್ತಾ..? ನಮ್ಮ ಸಮಾಜದ ಅಭಿವೃದ್ಧಿ ಆಗುತ್ತಾ..? ದೇಶ ಅಭಿವೃದ್ಧಿ ಕಡೆ ಮುಖ ಮಾಡುತ್ತಾ..? ಛಾನ್ಸೇ ಇಲ್ಲ..! ಯಾಕಂದ್ರೆ ನಾವೆಲ್ಲರೂ ಆ ದಿಕ್ಕಿನಲ್ಲಿ ಸಾಗ್ತಿದ್ರೂ ನಮ್ಮನ್ನ, ನಮಗರಿವಿಲ್ಲದಂತೆ ಕಂಟ್ರೋಲ್ ಮಾಡ್ತಿದ್ದಾರೆ ಈ ನೀಚರು.! ಅವರ ತೀಟೆ ತೀರಿಸಿಕೊಳ್ಳಲು ಸಮಾಜ ಒಡೆಯುವಂತಹ ಕೆಲಸವನ್ನ ರಾಜಾರೋಷವಾಗಿ ಮಾಡ್ತಿದ್ರೂ ಅಂತವರಿಗೆ ಲಗಾಮು ಹಾಕುವ ಕೆಲಸವನ್ನ ನಮ್ಮ ವ್ಯವಸ್ಥೆ ಮಾಡದೇ ಇರೋದು ನಿಜಕ್ಕೂ ದುರಂತ.! ಹಾಗಾಗಿಯೇ ಒಬ್ಬ ಮಾರಾಟವಾದ ಪರ್ತಕರ್ತ ಸಾವಿರ ಭಯೋತ್ಪಾದಕನಿಗೆ ಸಮ ಅನ್ನೋ ಮಾತನ್ನ ಬಹಳ ದಶಕಗಳ ಹಿಂದೆಯೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹೇಳಿದ್ದು. ಒಬ್ಬ ಭಯೋತ್ಪಾದಕನೇ, ಸಮಾಜಕ್ಕೆ ಯಾವ ರೀತಿ ಮಾರಕವಾಗಬಲ್ಲ ಅನ್ನೋ ಕಲ್ಪನೆ ನಮಗೆಲ್ಲಾ ಇದೆ, ಹಾಗಿದ್ದಾಗ ಒಬ್ಬ ಮಾರಾಟವಾದ ಪರ್ತಕರ್ತನಲ್ಲಿ ಸಾವಿರ ಭಯೋತ್ಪಾದಕನ ಶಕ್ತಿ ಇರುತ್ತೆ  ಅಂದ್ರೆ ಆತ ಸಮಾಜಕ್ಕೆ ಎಷ್ಟು ಹಾನಿ ಮಾಡಬಲ್ಲ ನೀವೇ ಯೋಚಿಸಿ..!

ಆದ್ರೂ ನಾವು ನಿರಾಶರಾಗುವ ಅವಶ್ಯಕತೆ ಖಂಡಿತಾ ಇಲ್ಲ, ಯಾಕಂದ್ರೆ ಎಲ್ಲದಕ್ಕೂ ಒಂದು ಅಂತ್ಯ ಅನ್ನೋದು ಇದ್ದೇ ಇರುತ್ತೆ. ಅದಕ್ಕೂ ಸಮಯ ಬಂದೇ ಬರುತ್ತೆ.! ಈ ನಿಟ್ಟಿನಲ್ಲಿ ನಿನ್ನೆ ಸುಪ್ರೀಂ ಕೋರ್ಟ್ ಬೀಸಿರೋ ಛಾಟಿ ಇಂದಿನ ಮಾನಗೆಟ್ಟ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಲು ಸರಿಯಾದ ಸಮಯ. ಇನ್ನೂ ತಮ್ಮನ್ನ ತಾವು ತಿದ್ದಿಕೊಳ್ಳಲ್ಲ ಅಂತಾದ್ರೆ ಜನರೇ ಬುದ್ದಿ ಕಲಿಸೋ ಸಮಯವೂ ದೂರವಿಲ್ಲ.!

–ಪ್ರಶಾಂತ್ ಮೂಡಿಗೆರೆ, ಪತ್ರಕರ್ತ, ಚಿಕ್ಕಮಗಳೂರು.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ