ಬೀಡಿ ತರಲು ಹೋದ ಮಗ ತಡವಾಗಿ ಬಂದ | ಕೋಪಗೊಂಡ  ತಂದೆ ಮಗನನ್ನು ಭೀಕರವಾಗಿ ಕೊಂದೇ ಬಿಟ್ಟ! - Mahanayaka
5:56 AM Saturday 31 - January 2026

ಬೀಡಿ ತರಲು ಹೋದ ಮಗ ತಡವಾಗಿ ಬಂದ | ಕೋಪಗೊಂಡ  ತಂದೆ ಮಗನನ್ನು ಭೀಕರವಾಗಿ ಕೊಂದೇ ಬಿಟ್ಟ!

21/01/2021

ಹೈದರಾಬಾದ್:  ಬೀಡಿ ತರಲು ಹೋದ ಮಗ ತಡವಾಗಿ ಮನೆಗೆ ಬಂದ ಎಂದು ತಂದೆಯೇ ಮಗನನ್ನು ಜೀವಂತವಾಗಿ ಸುಟ್ಟು ಕೊಂದ ಭಯಾನಕ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಈ ಘಟನೆ ಜನವರಿ 17ರಂದು ನಡೆದಿದೆ. ತಂದೆ ಬಾಲು ಎಂಬಾತ ಈ ಕೃತ್ಯ ಎಸಗಿದ್ದು, 6ನೇ ತರಗತಿಯ ಬಾಲಕ ಚರಣ್ ಹತ್ಯೆಗೀಡಾದ ಬಾಲಕನಾಗಿದ್ದಾನೆ.  ಅಂಗಡಿಗೆ ಹೋಗಿದ್ದ ಬಾಲಕ ತಡವಾಗಿ ಬಂದಿದ್ದಾನೆ. ಇದಕ್ಕೆ ತಂದೆ ಬಾಲು ಜೋರಾಗಿ ಜಗಳವಾಡಿದ್ದಾನೆ. ಮಗನಿಗೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಾಯಿ ಮಧ್ಯಪ್ರವೇಶಿಸಿದರೂ ಆತ ಸುಮ್ಮನಾಗಲಿಲ್ಲ.

ಮಗ ಶಾಲೆಯಲ್ಲಿ ಸರಿಯಾಗಿ ಓದುತ್ತಿಲ್ಲ ಎಂದು ಕೂಡ ಮಗನ ಮೇಲೆ ವಿಪರೀತವಾಗಿ ಕೋಪಗೊಂಡಿದ್ದ ತಂದೆ. ಪುತ್ರ ಚರಣ್ ನನ್ನು ನೂಕಿ ಟರ್ಪೆಂಟೇನ್ ಎಣ್ಣೆ ಸುರಿದು, ತಾನು ಬೀಡಿ ಹತ್ತಿಸಿ, ಕಡ್ಡಿಯನ್ನು ಪುತ್ರನ ಮೇಲೆ ಎಸೆದಿದ್ದು, ಇದರಿಂದಾಗಿ ಪುತ್ರನ ಮೇಲೆ ಬೆಂಕಿ ವ್ಯಾಪಿಸಿದೆ.

ಬಾಲಕನ ಚೀರಾಟ ಕೇಳಿ ಸ್ಥಳೀಯರು ಓಡಿ ಬಂದು ಬೆಂಕಿ ನಂದಿಸಿದ್ದಾರೆ. ಈ ವೇಳೆಗೆ ಬಾಲಕ ಶೇ.90ರಷ್ಟು ಸುಟ್ಟು ಹೋಗಿದ್ದಾನೆ. ಕೂಡಲೇ ಆತನನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ. ಆರೋಪಿ ಬಾಲುವನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ