ದ.ಕ. ಜಿಲ್ಲೆಗೆ ಪಿಕ್ನಿಕ್ ಮಂತ್ರಿ ಬೇಡ, ಸಮರ್ಥ ಉಸ್ತುವಾರಿ ಮಂತ್ರಿ ಬೇಕು: ಕೃಷ್ಣಾನಂದ ಡಿ. ಒತ್ತಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಪಿಕ್ನಿಕ್ ಮಂತ್ರಿ ಬೇಡ. ಜಿಲ್ಲೆಯ ಕೋಮು ಚಟುವಟಿಕೆ,ಕ್ರಿಮಿನಲ್ ಚಟುವಟಿಕೆಗಳನ್ನು ಸರಿಯಾಗಿ ನಿಗ್ರಹಿಸಿ ಜಿಲ್ಲೆಯ ಪರಿಸ್ಥಿತಿಯನ್ನು ಹತೋಟಿಗೆ ತರಲು ವಿಫಲರಾಗಿರುವ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು ಎಂದು ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಾನಂದ ಡಿ.(Krishnananda D.) ಒತ್ತಾಯಿಸಿದರು.
ಕರಾವಳಿಯಲ್ಲಿ ಕೋಮು ಹಿಂಸಾಚಾರ ಹಾಗೂ ಅಮಾಯಕರ ಹತ್ಯೆ ಹಿನ್ನೆಲೆ ಕೋಮುವಾದವನ್ನು ಮಟ್ಟಹಾಕಿ ಜಿಲ್ಲೆಯಲ್ಲಿ ಶಾಶ್ವತವಾಗಿ ಸಾಮರಸ್ಯ ಮೂಡಿಸಲು ಪರಿಹಾರ ಮಾರ್ಗೋಪಾಯ ಕಂಡುಕೊಳ್ಳುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಬಿ.ಕೆ.ಹರಿಪ್ರಸಾದ್(B.K.Hariprasad) ಅವರು ಮಂಗಳೂರಿನ ಕದ್ರಿ ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಕೋಮುವಾದಿಗಳು ಹಾಗೂ ಕ್ರಿಮಿನಲ್ ಚಟುವಟಿಕೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಠಾಣೆಗಳಿಗೂ ಮೇಜರ್ ಸರ್ಜರಿ ನಡೆಸಿ, ಸುಮಾರು ಕೆಲವಾರು ವರ್ಷಗಳಿಂದ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೊಲೀಸರನ್ನು ಸಾಮೂಹಿಕ ವರ್ಗಾವಣೆ ಮಾಡಬೇಕು ಎಂದು ಕೃಷ್ಣಾನಂದ ಡಿ. ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ದ.ಕ. ಜಿಲ್ಲಾ ಸಂಘಟನಾ ಸಂಚಾಲಕರಾದ ರಘು. ಕೆ. ಎಕ್ಕಾರು ಮಾತನಾಡಿ ” ಜಿಲ್ಲೆಯಲ್ಲಿ ಕೆಲವು ಸ್ಥಾಪಿತ ಹಿತಾಶಕ್ತಿಗಳು ತಮ್ಮ ಸ್ವಾರ್ಥ ಲಾಭಕ್ಕೋಸ್ಕರ ಯುವಸಮುದಾಯಗಳ ಮನಸ್ಸಿನಲ್ಲಿ ಕೋಮು ದ್ವೇಷದ ವಿಷ ಬೀಜವನ್ನು ಬಿತ್ತುವ ಕೆಲಸವನ್ನು ಅವ್ಯಾಹತವಾಗಿ ನಡೆಸುತ್ತಿವೆ. ದೇವರು, ಧರ್ಮದ ಹೆಸರಲ್ಲಿ ಭಜನಾ ಕಾರ್ಯಕ್ರಮ, ಯಕ್ಷಗಾನ, ನಾಟಕ ಮುಂತಾದ ಕಾರ್ಯಕ್ರಮಗಳಲ್ಲೂ ಧರ್ಮ ದ್ವೇಷವನ್ನು ಬಿತ್ತುತ್ತಿದ್ದು, ಸಣ್ಣ ಮಕ್ಕಳು, ಮಹಿಳೆಯರು, ಯುವಕರ ಮನಸ್ಸಿನಲ್ಲಿ ಕೋಮುವಾದವನ್ನು ತುಂಬಿಸುತ್ತಿದೆ. ಸರಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದರು.
ಶಿಕ್ಷಣ ಕ್ಷೇತ್ರಕ್ಕೂ ಕೋಮುವಾದ ಪ್ರವೇಶಿಸಿದ್ದು, ವಿದ್ಯಾರ್ಥಿಗಳಲ್ಲಿ ಪರಸ್ಪರ ಭಾವೈಕ್ಯತೆ, ಕೋಮುಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೆಲವೊಂದು ಕೋಮುವಾದಿ ಸಂಘಟನೆಗಳು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರು ಸಂತೆ ಇಡುವವರಿಗೆ ಅಡ್ಡಿಪಡಿಸುತ್ತಿದ್ದು, ಅಂತಹ ಸಮಾಜಘಾತುಕರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸರ್ವ ಧರ್ಮದ ವ್ಯಾಪಾರಿಗಳೂ ಭಯಮುಕ್ತರಾಗಿ ವ್ಯಾಪಾರ ಮಾಡಲು ಅವಕಾಶ ಸಿಗಬೇಕು ಎಂದರು.
ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ದಲಿತ ಕಲಾಂನದಲಿ ಮಾಜಿ ಸಂಚಾಲಕ ಸಂಕಪ್ಪ ಕಾಂಚನ್, ಮಂಗಳೂರು ತಾಲೂಕು ಸಂಚಾಲಕ ರವಿ ಪೇಜಾವರ, ಸಂಘಟನಾ ಸಂಚಾಲಕ ರುಕ್ಕಯ್ಯ ಕರಂಬಾರು, ಸಾಮಾಜಿಕ ಕಾರ್ಯಕರ್ತರಾದ ಸಜಿನಿ ಕುಳಾಯಿ ಮುಂತಾದ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: