ಬಿಸಿಲಬೇಗೆ: ಕಾಡಿನಿಂದ ಹೊರ ಬಂದು ತೋಟದಲ್ಲಿ ತಂಪಾಗಿ ಮಲಗಿದ ಹುಲಿರಾಯ: ಬೆಚ್ಚಿಬಿದ್ದ ಗ್ರಾಮಸ್ಥರು
ಮೈಸೂರು: ಮೂರ್ನಾಲ್ಕು ದಿನಗಳ ಕಾಲ ಒಂದೇ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಹುಲಿಯನ್ನು ಸೆರೆ ಹಿಡಿದು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾವನದ ವನ್ಯಜೀವಿಗಳ ಪುನರ್ವಸತಿ ಕೇಂದ್ರದಲ್ಲಿ ಬಿಡಲಾಗಿತ್ತು. ಆದರೆ ಅದರ ಮರು ದಿನವೇ ಅದೇ ಪ್ರದೇಶದಲ್ಲಿ ಮತ್ತೊಂದು ಹುಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಅಂಚಿನಲ್ಲಿ ಬರುವ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
ಹಿಂದಿನ ದಿನ ಹುಲಿಯನ್ನು ಹಿಡಿದಿದ್ದಾರೆ ಎಂದು ನಿಟ್ಟುಸಿರುವ ಬಿಟ್ಟಿದ್ದ ಜನರಿಗೆ ಮರುದಿನ ತೋಟದ ಮನೆಯ ಆವರಣದಲ್ಲಿ ಹುಲಿರಾಯ ಗಡದ್ದಾಗಿ ನಿದ್ದೆ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಗ್ರಾಮಸ್ಥರಿಗೆ ಭಯ ಹುಟ್ಟಿಸಿದೆ.
ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಹುಲಿರಾಯ ಕಾಡಿನಿಂದ ಹೊರ ಬಂದಿದ್ದು, ತೋಟದಲ್ಲಿ ತಂಪಾದ ಜಾಗದಲ್ಲಿ ನೆಮ್ಮದಿಯಿಂದ ಮಲಗಿದ್ದಾನೆ. ಆದರೆ ಹುಲಿಯನ್ನು ಕಂಡು ಇಲ್ಲಿನ ನಿವಾಸಿಗಳು ಮತ್ತೆ ನೆಮ್ಮದಿ ಕಳೆದುಕೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ ಗ್ರಾಮದ ಸುಬ್ರಹ್ಮಣ್ಯಸ್ವಾಮಿ ಎಂಬುವವರ ತೋಟದಲ್ಲಿ ಏನೋ ಶಬ್ದ ಕೇಳಿ ಬಂದಿದೆ. ಹೀಗಾಗಿ ಏನು ಶಬ್ದ ಎಂದು ಮನೆಯವರು ಗಮನಿಸಿದಾಗ ದೂರದಲ್ಲಿ ಹುಲಿ ಮಲಗಿರುವುದು ಕಂಡು ಬಂದಿತ್ತು. ಹೀಗಾಗಿ ಮನೆಯವರು ತಕ್ಷಣವೇ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಮನೆಯವರ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಅಂತರಸಂತೆ ವಲಯ ಅರಣ್ಯಾಧಿಕಾರಿ ಭರತ್ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸದ್ಯ ಪರಿಸ್ಥಿತಿಯನ್ನು ಅವಲೋಕಿಸಿ, ಹುಲಿಯನ್ನು ಕಾಡಿಗಟ್ಟಬೇಕೋ ಅಥವಾ ಸೆರೆ ಹಿಡಿಯಬೇಕೋ ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: