ಎಎಪಿಗೆ ಸೇರ್ಪಡೆ ಪರ್ವ ಆರಂಭ: ಜಿ.ಡಿ.ಮಹೇಶ್ ಕುಮಾರ್, ಎಸ್.ಟಿ.ಪ್ರಕಾಶ್ ನೇತೃತ್ವದಲ್ಲಿ ಆಮ್ ಆದ್ಮಿಗೆ ಸೇರ್ಪಡೆ
![aap](https://www.mahanayaka.in/wp-content/uploads/2022/09/aap-2.jpg)
ದೆಹಲಿ, ಪಂಜಾಬ್ ಮಾದರಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಪಣ
ಅರಕಲಗೂಡು: ತಾಲ್ಲೂಕಿನಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ ಪರ್ವ ಆರಂಭವಾಗಿದ್ದು, ದೆಹಲಿ ಮತ್ತು ಪಂಜಾಬ್ ನಲ್ಲಿ ಆಮ್ ಆದ್ಮಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿಯಿಂದ ಆಕರ್ಷಿತರಾಗಿ ಹಲವರು ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೊಣನೂರು ಹೋಬಳಿಯ ಕಾರ್ಯಪ್ಪ, ರಾಮಪ್ಪ, ಬಿಸಿಲಹಳ್ಳಿ ಗ್ರಾಮದ ಗಣೇಶ್, ನೈಗೆರೆ ಸಣ್ಣಯ್ಯ, ಅರಕಲಗೂಡು ವಾರ್ಡ್ ನಂಬರ್ 3 ನಿವಾಸಿ ರಮೇಶ್ ಇವರು ಆಮ್ ಆದ್ಮಿ ಪಾರ್ಟಿ ಮುಖಂಡರಾದ ಎಸ್.ಟಿ.ಪ್ರಕಾಶ್ ಮತ್ತು ಜಿ.ಡಿ.ಮಹೇಶ್ ಕುಮಾರ್ ನೇತೃತ್ವದಲ್ಲಿ ಎಎಪಿಗೆ ಸೇರ್ಪಡೆಗೊಂಡರು.
ಅರಕಲಗೂಡು ತಾಲ್ಲೂಕಿನಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದು, ಪ್ರಸ್ತುತ ಇರುವ ವಿವಿಧ ರಾಷ್ಟ್ರ ಹಾಗೂ ಸ್ಥಳೀಯ ಪಕ್ಷಗಳ ನಡೆಯಿಂದ ಬೇಸತ್ತು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿರುವುದಾಗಿ ನೂತನ ಸದಸ್ಯರು ತಿಳಿಸಿದರು.’
ಜಿ.ಡಿ.ಮಹೇಶ್ ಕುಮಾರ್, ಎಸ್.ಟಿ.ಪ್ರಕಾಶ್ ನೇತೃತ್ವದಲ್ಲಿ ಎಎಪಿಗೆ ಸೇರ್ಪಡೆ
ಇದೇ ವೇಳೆ ಮಾತನಾಡಿದ ಪಕ್ಷದ ಮುಖಂಡರಾದ ಜಿ.ಡಿ.ಮಹೇಶ್ ಕುಮಾರ್ ಹಾಗೂ ಎಸ್.ಟಿ.ಪ್ರಕಾಶ್ , ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ಹಾಗೂ ಪಂಜಾಬ್ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾದರಿಯಾಗಿ ತೆಗೆದುಕೊಂಡು ಕರ್ನಾಟಕದ ಅಭಿವೃದ್ಧಿಗಾಗಿ ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸಲು ಅರಕಲಗೂಡಿನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆಮ್ ಆದ್ಮಿ ಸರ್ಕಾರ ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನು ಜನರ ಮನೆ ಮನೆಗಳಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗುವುದಾಗಿ ತಿಳಿಸಿದರು.
ಈಗಾಗಲೇ ಜನರು ಧರ್ಮ, ದ್ವೇಷ, ಮೋಸದ ರಾಜಕಾರಣದಿಂದ ಬೇಸತ್ತು ಹೋಗಿದ್ದಾರೆ. ಎಎಪಿ ಅಭಿವೃದ್ಧಿಯ ರಾಜಕಾರಣದ ಮೂಲಕ ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರ, ರೈತರ, ಕೂಲಿ ಕಾರ್ಮಿಕರ, ದಲಿತರ, ನಿರ್ಗತಿಕರ ಶ್ರೇಯೋಭಿವೃದ್ಧಿಗಾಗಿ ದುಡಿಯಲಿದೆ. ಈಗಾಗಲೇ ದೇಶಾದ್ಯಂತ ಪಕ್ಷವು ಬೆಳವಣಿಗೆ ಹೊಂದುತ್ತಿದೆ. ಕರ್ನಾಟಕದಲ್ಲೂ ಪಕ್ಷ ಬಲಿಷ್ಠವಾಗಿ ಬೆಳವಣಿಗೆ ಹೊಂದುತ್ತಿದ್ದು, ಆಮ್ ಆದ್ಮಿಯನ್ನು ಬೆಂಬಲಿಸುವ ಮೂಲಕ ಜನರು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ ಎಂದು ಅವರು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka