ಬೈಕ್ ಸವಾರನ ಸಾವಿಗೆ ಕಾರಣವಾದ ಟ್ರಾಫಿಕ್ ಪೊಲೀಸರು | ಸಾರ್ವಜನಿಕರಿಂದ ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿತ - Mahanayaka
7:59 AM Saturday 18 - October 2025

ಬೈಕ್ ಸವಾರನ ಸಾವಿಗೆ ಕಾರಣವಾದ ಟ್ರಾಫಿಕ್ ಪೊಲೀಸರು | ಸಾರ್ವಜನಿಕರಿಂದ ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿತ

police
22/03/2021

ಮೈಸೂರು:  ಬೈಕ್ ತಪಾಸಣೆಗಾಗಿ  ಪೊಲೀಸರು ಬೈಕ್ ನ್ನು ಅಡ್ಡಗಟ್ಟಿದ ವೇಳೆ ಬೈಕ್ ಸವಾರ ಬಿದ್ದು ಮೃತಪಟ್ಟಿದ್ದು, ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಟ್ರಾಫಿಕ್ ಪೊಲೀಸ್ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.


Provided by

ಮೈಸೂರಿನ ವಿವಿಪುರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ರಿಂಗ್ ರೋಡ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಚ್.ಡಿ.ಕೋಟೆ ತಾಲೂಕಿನ ಕನ್ನೇನಹಳ್ಳಿ ನಿವಾಸಿ ಸಿವಿಲ್ ಇಂಜಿನಿಯರ್ 46 ವರ್ಷ ವಯಸ್ಸಿನ ದೇವರಾಜು ಎಂಬವರು ಇದೇ ದಾರಿಯಲ್ಲಿ ಬಂದಿದ್ದು, ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ. ಆದರೆ, ಅವರು ಬೈಕ್ ಮುಂದಕ್ಕೆ ಚಲಿಸಿದ್ದು, ಈ ವೇಳೆ ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ವ್ಯಾನ್ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಟ್ರಾಫಿಕ್ ಪೊಲೀಸರು ಏಕಾಏಕಿ ವಾಹನಗಳನ್ನು ತಡೆಯುತ್ತಿರುವ ಘಟನೆಗಳಿಗೆ ಸಂಬಂಧಿಸಿದಂತೆ ಹಲವಾರು ದೂರುಗಳು ಬರುತ್ತಿದ್ದರೂ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ಸಾರ್ವಜನಿಕರನ್ನೂ ಆಕ್ರೋಶಕ್ಕೀಡು ಮಾಡಿದೆ.  ಇದೇ ಸಂದರ್ಭದಲ್ಲಿ ನೋಡನೋಡುತ್ತಿದ್ದಂತೆಯೇ ಕಣ್ಣೆದುರೇ ವ್ಯಕ್ತಿಯೋರ್ವ ಸಾವಿಗೀಡಾಗಿದ್ದು, ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಸ್ಥಳದಲ್ಲಿದ್ದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ನೂರಕ್ಕೂ ಅಧಿಕ ಸಾರ್ವಜನಿಕರು ಸೇರಿದ್ದು, ಪೊಲೀಸರಿಗೆ ಹೆಲ್ಮೆಟ್ ಹಾಗೂ ಕೈಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದು, ಗರೂಡ ವಾಹವನ್ನು ಮಗುಚಿ ಹಾಕಿ ಕನ್ನಡಿಗಳನ್ನು ಒಡೆದು ಹಾಕಿದ್ದಾರೆ. ಹೆಲ್ಮೆಟ್ ಹಾಕಿದ್ದರೂ ಪೊಲೀಸ್ ನವರು ಬೈಕ್ ಅಡ್ಡಗಟ್ಟುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ