ಬಿಜೆಪಿ ಬಡವರ ಪರವಾಗಿಲ್ಲ, ಬಿಜೆಪಿಗೆ ಒಂದೇ ಒಂದು ಮತವೂ ಸಿಗದಂತೆ ನೋಡಿಕೊಳ್ಳಿ: ಸಿಎಂ ಸಿದ್ದರಾಮಯ್ಯ ಕರೆ - Mahanayaka
11:12 PM Wednesday 25 - March 2026

ಬಿಜೆಪಿ ಬಡವರ ಪರವಾಗಿಲ್ಲ, ಬಿಜೆಪಿಗೆ ಒಂದೇ ಒಂದು ಮತವೂ ಸಿಗದಂತೆ ನೋಡಿಕೊಳ್ಳಿ: ಸಿಎಂ ಸಿದ್ದರಾಮಯ್ಯ ಕರೆ

siddaramaiah
07/09/2023

ಬೆಂಗಳೂರು: ಕೇಂದ್ರವು ಬಡವರ ವಿರೋಧಿ ಹಾಗೂ ಬಂಡವಾಳಶಾಹಿಗಳ ಪರವಾಗಿದ್ದು, ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ಮತವೂ ಸಿಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಕರೆ ನೀಡಿದರು.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದ ಕ್ಷೀರಭಾಗ್ಯ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು,  ಕೇಂದ್ರ ಸರ್ಕಾರವು ಅನ್ನಭಾಗ್ಯಕ್ಕೆ ಅಕ್ಕಿ ಖರೀದಿಸಲು ಅವಕಾಶ ನೀಡದಿರುವ ವಿಚಾರವನ್ನ ಪ್ರಸ್ತಾಪ ಮಾಡಿ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಾನು ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗ ಏಳು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಅದನ್ನು ನಾಲ್ಕು ಕೆ.ಜಿ ಮತ್ತು ಐದು ಕೆ.ಜಿಗೆ ಇಳಿಸಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಐದು ಕೆ.ಜಿ ನೀಡುವುದಾಗಿ ಭರವಸೆ ನೀಡಿದ್ದೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆಯಲಾಗಿತ್ತು. ಎಫ್‌ ಸಿಐ ಅಕ್ಕಿ ನೀಡುವುದಾಗಿ ಮೊದಲಿಗೆ ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿತ್ತು ಎಂದರು.

ನಾವು ಅವರನ್ನು ನಂಬುತ್ತೇವೆ. ಆದರೆ, ಕೇಂದ್ರವು ನಮಗೆ ಅಕ್ಕಿ ನೀಡಲು ನಿರಾಕರಿಸಿದೆ. ಬಿಜೆಪಿ ಬಡವರ ಪರವೇ? ಇಲ್ಲ ಅವರು ಬಡವರ ಪರವಾಗಿಲ್ಲ. ನಾವು ಅಕ್ಕಿಯನ್ನು ಉಚಿತವಾಗಿ ಕೇಳಿಲ್ಲ. ನಾವು ಹಣ ಪಾವತಿಸಲು ಸಿದ್ಧರಿದ್ದೇವೆ. ಮೊದಲಿಗೆ ನಾವು ಅಕ್ಕಿ ಕೇಳಿದಾಗ ಅವರು ಒಪ್ಪಿದರು ಮತ್ತು ನಂತರ ಹಿಂದೆ ಸರಿದರು. ಅವರೆಷ್ಟು ನೀಚರು ಎಂದು ನೀವೇ ನಿರ್ಧರಿಸಿ. ಅವರು ಬಡವರ ವಿರೋಧಿಗಳು. ಅವರಿಗೆ ಮಾನವೀಯತೆ ಇಲ್ಲ ಎಂದು ಆರೋಪಿಸಿದರು.

ಇತ್ತೀಚಿನ ಸುದ್ದಿ