ಕೊರೊನಾ ಭೀತಿಯಿಂದ ಪತ್ರಕರ್ತ ಆತ್ಮಹತ್ಯೆ! - Mahanayaka
2:37 PM Wednesday 20 - August 2025

ಕೊರೊನಾ ಭೀತಿಯಿಂದ ಪತ್ರಕರ್ತ ಆತ್ಮಹತ್ಯೆ!

paramesh
05/05/2021


Provided by

ದಾವಣಗೆರೆ: ಕೊರೊನಾ ವಿರುದ್ಧದ ಹೋರಾಟದಲ್ಲಿ ಪತ್ರಕರ್ತರೇ ಪ್ರಂಟ್ ಲೈನ್ ಕಾರ್ಯಕರ್ತರು ಎಂದು ನಿನ್ನೆಯಷ್ಟೇ ರಾಜ್ಯ ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಪತ್ರಕರ್ತರೋರ್ವರು ಕೊರೊನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

46 ವರ್ಷ ವಯಸ್ಸಿನ ಪರಮೇಶ್ ಆತ್ಮಹತ್ಯೆಗೆ ಶರಣಾಗಿರುವ ಪತ್ರಕರ್ತರಾಗಿದ್ದಾರೆ. ಇಲ್ಲಿನ ಅಮರಾವತಿ ಬಳಿ ಚಲಿಸುವ ರೈಲಿಗೆ ತಲೆ ಇಟ್ಟು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರು ಧೈರ್ಯ ಕಳೆದುಕೊಂಡಿದ್ದರು ಎಂದು ಹೇಳಲಾಗಿದೆ.

ಕೆಲವು ದಿನಗಳಿಂದ ಪರಮೇಶ್ ಅವರಿಗೆ ಶೀತ, ಜ್ವರ, ಕೆಮ್ಮು ಇತ್ತು ಎಂದು ಹೇಳಲಾಗಿದೆ.  ಕೊರೊನಾ ಟೆಸ್ಟ್  ಮಾಡಿಸಿ ಪಾಸಿಟಿವ್ ಬಂದರೆ ಏನು ಮಾಡುವುದು ಎಂಬ ಚಿಂತೆಗೆ ಅವರು ಶರಣಾಗಿದ್ದಾರೆ. ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಸರಿಯಾಗಿ ಸಿಗುತ್ತಿಲ್ಲ ಎನ್ನುವ ವಾಸ್ತವ ಸ್ಥಿತಿಯ ಅರಿವಿದ್ದ ಪರಮೇಶ್ ಆಸ್ಪತ್ರೆಗೆ ತೆರಳುವುದಕ್ಕಿಂತ ಸಾವೇ ಮೇಲು ಎಂಬಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಕನ್ನಡದ ಪತ್ರಿಕೆಯೊಂದರಲ್ಲಿ ಅರೆಕಾಲಿಕ ವರದಿಗಾರರಾಗಿದ್ದ ಪರಮೇಶ್ ಮೃಧು ಸ್ವಭಾವದವರಾಗಿದ್ದರು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಂದೂರು ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ.

ಇತ್ತೀಚಿನ ಸುದ್ದಿ