ಕೊರೊನಾ ಚಿಕಿತ್ಸೆಗೆ ಸರ್ಕಾರದ ಬಳಿ ಔಷಧಿ ಕೊರತೆ ಇಲ್ಲ: ಎ.ಎಸ್.ಪಾಟೀಲ - Mahanayaka
11:59 AM Saturday 17 - January 2026

ಕೊರೊನಾ ಚಿಕಿತ್ಸೆಗೆ ಸರ್ಕಾರದ ಬಳಿ ಔಷಧಿ ಕೊರತೆ ಇಲ್ಲ: ಎ.ಎಸ್.ಪಾಟೀಲ

as pateel
29/05/2021

ಮುದ್ದೇಬಿಹಾಳ: ಕೊರೊನಾ ಚಿಕಿತ್ಸೆಗೆ ಸರ್ಕಾರದ ಬಳಿ ಔಷಧಿ ಕೊರತೆ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಔಷಧ ಸಂಗ್ರಹವಿದೆ. ಕೊರೊನಾ ಅಪಾಯಕಾರಿಯಾದದ್ದು. ಸೋಂಕಿನ ಲಕ್ಷಣ ಕಂಡುಬಂದಲ್ಲಿ ತಕ್ಷಣ ತಜ್ಞರನ್ನು ಭೇಟಿಮಾಡಿ ಸೂಕ್ತ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಬೇಕು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಜೈನ ಸಮಾಜ, ಮಹಾವೀರ ಯುವಕ ಮಂಡಲ ಏರ್ಪಡಿಸಿದ್ದ ಆಕ್ಸೀಜನ್ ಬ್ಯಾಂಕ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಕ್ಸೀಜನ್ ಕಾನ್ಸಂಟ್ರೇಟರ್ ಹಸ್ತಾಂತರಿಸಿ ಅವರು ಮಾತನಾಡಿದರು.

ಕಾನ್ಸಂಟ್ರೇಟರ್‍ಗಳು ಆಪತ್ಕಾಲದಲ್ಲಿ ಜನರ ಪ್ರಾಣ ಉಳಿಸುತ್ತವೆ. ಶಾಸಕರ ಅನುದಾನದಲ್ಲಿ ಕಾನ್ಸಂಟ್ರೇಟರ್ ತರಿಸಿದ್ದೇನೆ. ಸಧ್ಯ ಸರ್ಕಾರಿ ಆಸ್ಪತ್ರೆಯಲ್ಲಿ 15 ಕಾನ್ಸಂಟ್ರೇಟರ್ ಇವೆ. ಜೈನ ಸಮುದಾಯದವರು 7 ಲೀಟರ್ ಸಾಮಥ್ರ್ಯದ 5 ಕಾನ್ಸಂಟ್ರೇಟರ್ ತರಿಸಿ ಆಕ್ಸೀಜನ್ ಬ್ಯಾಂಕ್ ಮಾಡಿದ್ದು ಶ್ಲಾಘನೀಯ. ಜೈನ ಸಮುದಾಯ ದಾನ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಈ ಸಮಾಜವನ್ನು ಶಾಸಕನಾಗಿ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.

ಔಷಧ ವ್ಯಾಪಾರಿ ಸಂಜೀವ ವಸಂತಲಾಲ ಓಸ್ವಾಲ್ ಮಾತನಾಡಿ ಕೊರೊನಾ ಸೋಂಕಿತರಿಗೆ, ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆ ಕಂಡುಬಂದಲ್ಲಿ ಅಂಥವರಿಗೆ ನಮ್ಮ ಮೆಡಿಕಲ್ ಶಾಪ್‍ನಿಂದ ಉಚಿತ ಔಷಧಿ ಕೊಡಲಾಗುತ್ತದೆ. ಇದಕ್ಕಾಗಿ ರೋಗಿಗಳು ಸರ್ಕಾರಿ ಆಸ್ಪತ್ರೆಯ ಪ್ರಿಸ್ಕ್ರಿಪ್ಶನ್ ಚೀಟಿ ತರಬೇಕು ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ, ಜೈನ ಸಮಾಜದ ಹಿರಿಯರಾದ ಶ್ರೀಪಾಲ ಪೋರವಾಲ ಮಾತನಾಡಿದರು. ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಪುರಸಭೆ ಪ್ರಭಾರ ಮುಖ್ಯಾಧಿಕಾರಿಣಿ ಎಂ.ಬಿ.ಮಾಡಗಿ, ಕರ್ನಾಟಕ ಅರಣ್ಯ ಇಲಾಖೆ ವಸತಿ ಧಾಮಗಳ ಸಂಸ್ಥೆಯ ನಾಮ ನಿರ್ದೇಶಿತ ಸದಸ್ಯ ವಿಕ್ರಮ್ ಓಸ್ವಾಲ್, ಮಹಾವೀರ ಯುವಕ ಮಂಡಳ ಅಧ್ಯಕ್ಷ ಜೀತೇಂದ್ರ ಓಸ್ವಾಲ್, ಮಹೇಂದ್ರ ಓಸ್ವಾಲ್, ಪಾರಸ್ ಪೋರವಾಲ, ಶ್ರೇಣಿಕ್ ಪೋರವಾಲ, ಸಂಜೀವ, ಸಂಜಯ್, ಜಯೇಶ, ನಿಖೇಶ್, ಮುಖೇಶ್, ಸಿದ್ದಾರ್ಥ ಇನ್ನಿತರರು ಇದ್ದರು.

ಇತ್ತೀಚಿನ ಸುದ್ದಿ