ಬಿಜೆಪಿ ನೀಡಿದ ಎರಡು ಆಫರ್ ಗಳನ್ನು ಬಹಿರಂಗಗೊಳಿಸಿದ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಕರ್ನಾಟಕ ಬಿಜೆಪಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಟಿಕೆಟ್ ಗಲಾಟೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ತನ್ನ ಮಗನಿಗೆ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ದಂಡೆತ್ತಿ ಯುದ್ಧಕ್ಕೆ ಸಿದ್ಧರಾಗಿದ್ದಾರೆ.
ಶಿವಮೊಗ್ಗ, ತುಮಕೂರು, ದಾವಣಗೆರೆ, ಕೊಪ್ಪಳ ಮುಂತಾದ ಕಡೆ, ಟಿಕೆಟ್ ವಂಚಿತರು ಸಭೆ ನಡೆಸುತ್ತಿದ್ದು, ಟಿಕೆಟ್ ತಪ್ಪಲು ಯಡಿಯೂರಪ್ಪನವೇ ನೇರ ಕಾರಣ ಎಂಬ ಆಕ್ರೋಶ ಕೇಳಿ ಬಂದಿದೆ.
ಈ ನಡುವೆ ಕಾರ್ಯಕರ್ತರ ಸಭೆಯ ವೇಳೆ ಕೆ.ಎಸ್.ಈಶ್ವರಪ್ಪ ಅವರು, ತಮಗೆ ಬಿಜೆಪಿಯಿಂದ ಬಂದ 2 ಆಫರ್ ಗಳ ಬಗ್ಗೆ ಮಾತನಾಡಿದ್ದು, ಇದೀಗ ವ್ಯಾಪಕ ಚರ್ಚೆಗೀಡಾಗಿದೆ.
63 ಸದಸ್ಯರನ್ನು ನಾವು ಹೊಂದಿರುವುದರಿಂದ, ಮೂರು ಸ್ಥಾನ ವಿಧಾನ ಪರಿಷತ್ ಸ್ಥಾನ ನಮಗೆ ಸಿಗುತ್ತದೆ. ಅದರಲ್ಲಿ ಒಂದು ಸ್ಥಾನವನ್ನು ನನ್ನ ಮಗ ಕಾಂತೇಶನಿಗೆ ಕೊಡುತ್ತೇವೆ. ನೀವು ಇದನ್ನು ಒಪ್ಪಿಕೊಳ್ಳಬೇಕು ಎಂದು ಬಿಜೆಪಿ ಮುಖಂಡರು ಬಲವಂತ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಈಶ್ವರಪ್ಪನವರನ್ನು ರಾಜ್ಯಪಾಲರನ್ನಾಗಿ ಮಾಡುತ್ತೇವೆ ಎನ್ನುವ ಇನ್ನೊಂದು ಆಫರ್ ಕೂಡ ಬಂತು ಎಂದು ಈಶ್ವರಪ್ಪ ಹೇಳಿದ್ದಾರೆ.
ಈಶ್ವರಪ್ಪನವರ ಪುತ್ರನನ್ನು ಎಂಎಲ್ಸಿ ಮಾಡಿದರು, ಈಶ್ವರಪ್ಪನವರು ತಣ್ಣಗಾದರು ಎನ್ನುವ ಆರೋಪ ನನಗೆ ಬರೋದು ಬೇಡ, ಯಾವ ಸ್ಥಾನಮಾನ ಇಲ್ಲದಿದ್ದರೂ ನನ್ನ ಮಾನವನ್ನು, ನನ್ನ ಪಕ್ಷವನ್ನು ಕಳೆದುಕೊಳ್ಳಲು ನಾನು ಸಿದ್ದನಿಲ್ಲ ಎಂದು ಈಶ್ವರಪ್ಪ ಹೇಳಿದರು.
ಬಿಜೆಪಿಯಲ್ಲಿನ ಈ ವ್ಯವಸ್ಥೆಯ ವಿರುದ್ದ ನನ್ನ ಹೋರಾಟವೇ ಹೊರತು, ಟಿಕೆಟ್ ಸಿಗಲಿಲ್ಲ ಎನ್ನುವುದಲ್ಲ, ನನಗೆ ಸಂಪೂರ್ಣ ವಿಶ್ವಾಸವಿದೆ, ಲೋಕಸಭಾ ಚುನಾವಣೆ ಮುಗಿದ ನಂತರ ಮತ್ತು ಶಿವಮೊಗ್ಗದಲ್ಲಿ ರಾಘವೇಂದ್ರ ಸೋಲುತ್ತಿದ್ದಂತೆಯೇ, ಜೊತೆಗೆ ನಮ್ಮ ಕಾರ್ಯಕರ್ತರಿಗೆ ಜಯ ಸಿಗುತ್ತಿದ್ದಂತೆಯೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ರಾಜೀನಾಮೆ ನೀಡುತ್ತಾರೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth