ನಡು ರಸ್ತೆಯಲ್ಲಿ ಡ್ರಾಗರ್ ನಿಂದ ಯುವಕನಿಗೆ ಚುಚ್ಚಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು - Mahanayaka

ನಡು ರಸ್ತೆಯಲ್ಲಿ ಡ್ರಾಗರ್ ನಿಂದ ಯುವಕನಿಗೆ ಚುಚ್ಚಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

madhu
01/04/2021


Provided by

ಮಂಡ್ಯ: ಸ್ನೇಹಿತರ ಜೊತೆಗೆ ಮಾತನಾಡುತ್ತಿದ್ದ ಯುವಕನಿಗೆ ಡ್ರಾಗರ್ ನಿಂದ ಚುಚ್ಚಿ, ಚಿನ್ನಾಭರಣ ದೋಚಿರುವ ಘಟನೆ ನಡೆದಿದ್ದು, ಘಟನೆಯ ಪರಿಣಾಮ ಗಂಭೀರ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾರೆ.

ದಳವಾಯಿಕೋಡಿಹಳ್ಳಿ ಗ್ರಾಮದ 30 ವರ್ಷದ ಯುವಕ ಮಧು ನಿನ್ನೆ ರಸ್ತೆ ಬದಿಯಲ್ಲಿ ನಿಂತುಕೊಂಡು ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಬೈಕ್ ನಲ್ಲಿ ಮೂವರು ದುಷ್ಕರ್ಮಿಗಳು ಬಂದಿದ್ದು, ಏಕಾಏಕಿ ಮಧುವಿನಿ ಹೊಟ್ಟೆಗೆ ಡ್ರಾಗರ್ ನಿಂದ ತಿವಿದಿದ್ದಾರೆ. ಈ ವೇಳೆ ನೆಲಕ್ಕೆ ಕುಸಿದ ಮಧುವಿನ ಮೈಮೇಲೆ ಇದ್ದ ಚಿನ್ನಾಭರಣವನ್ನು ಕಸಿದು ಪರಾರಿಯಾಗಿದ್ದಾರೆ.

ಏಕಾಏಕಿ ನಡೆದ ಘಟನೆಯಿಂದ ಭಯಭೀತರಾಗಿದ್ದ ಮಧುವಿನ ಸ್ನೇಹಿತರು ಸ್ಥಳದಿಂದ ದೂರ ಹೋಗಿದ್ದಾರೆ. ಆರೋಪಿಗಳು ಪರಾರಿಯಾಗುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಅವರು ಮಧುನನ್ನು ಮಳವಳ್ಳಿ ತಾಲೂಕಿನ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ಮೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ  ಮಧು ಕೊನೆಯುಸಿರೆಳೆದಿದ್ದಾರೆ.

ಈ ಘಟನೆ ಮೇಲ್ನೋಟಕ್ಕೆ ಚಿನ್ನಾಭರಣ ದೋಚುವ ಉದ್ದೇಶದಿಂದ ನಡೆದಿರುವುದು ಎಂದು ಕಂಡು ಬಂದಿದೆ. ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಕೋನಗಳಿಂದ ಪ್ರಕರಣವನ್ನು ತನಿಖೆ ನಡೆಸಲು ಸಿದ್ಧತೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ