ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದರೂ ಸದಾಶಿವ ಆಯೋಗದ ವರದಿ ಜಾರಿ ಮಾಡಲಿಲ್ಲ | ಎನ್.ಮಹೇಶ್ - Mahanayaka
10:35 AM Saturday 23 - August 2025

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದರೂ ಸದಾಶಿವ ಆಯೋಗದ ವರದಿ ಜಾರಿ ಮಾಡಲಿಲ್ಲ | ಎನ್.ಮಹೇಶ್

23/11/2020


Provided by

ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಐದು ವರ್ಷಗಳ ಕಾಲ ಪೂರ್ಣಾವಧಿ ಆಡಳಿತ ನಡೆಸಿದರೂ, ಸಹ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲಿಲ್ಲ ಎಂದು ಮಾಜಿ ಶಿಕ್ಷಣ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕದ ವತಿಯಿಂದ ನಗರದ ರೈತ ಸಭಾಂಗಣದಲ್ಲಿ ಏರ್ಪಡಿಸಿದ್ದ ʻಒಳಮೀಸಲಾತಿ ಅಸ್ತ್ರ-ದಲಿತರ ಮುಂದಿನ ಸವಾಲುಗಳುʼ ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಎನ್.ಮಹೇಶ್ ಮಾತನಾಡುತ್ತಿದ್ದರು.

2005 ರಲ್ಲಿ ಎ.ಜೆ.ಸದಾಶಿವ ಆಯೋಗವನ್ನು ರಚಿಸಲಾಗಿತ್ತು. ಅದು 2012 ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸರ್ಕಾರಗಳು ಅದನ್ನು ಜಾರಿ ಮಾಡುವ ಚಿಂತನೆ ನಡೆಸಿಲ್ಲ ಎಂದು ಎನ್.ಮಹೇಶ್ ತಿಳಿಸಿದರು.

ಒಬ್ಬರ ಅವಕಾಶವನ್ನು ಅದೇ ಸಮುದಾಯದ ಇನ್ನೊಬ್ಬರು ಕಸಿದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಒಳಮೀಸಲಾತಿಯ ನೀಡಬಹುದು ಎಂದು ಸದಾಶಿವ ಆಯೋಗ ವರದಿ ನೀಡಿದ್ದು, ಅದನ್ನು ಜಾರಿಗೆ ತರುವುದರಲ್ಲಿ ಯಾವುದೇ ಸರ್ಕಾರಗಳು ಆಸಕ್ತಿ ತೋರಿಸಿಲ್ಲ ಎಂದು ಎನ್.ಮಹೇಶ್ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಆಂಜನೇಯ ಅವರು, ಮೂರು ಬಾರಿ ವರದಿಯನ್ನು ವಿಧಾನಸಭೆಗೆ ತೆಗೆದುಕೊಂಡು ಹೋದರೂ ಅದನ್ನು ಮಂಡಿಸಲು ಅವಕಾಶ ನೀಡಲಿಲ್ಲ. ಕಾಡಿನಲ್ಲಿರುವವರ ಅವಕಾಶಗಳನ್ನು ಊರಿನಲ್ಲಿರುವವರು ಪಡೆಯುತ್ತಿದ್ದಾರೆ. ದಕ್ಕಾಗಿ ಸದಾಶಿವ ಆಯೋಗದ ವರದಿ ಜಾರಿಯಾಗಬೇಕು ಎಂದು ಎನ್.ಮಹೇಶ್ ಆಗ್ರಹಿಸಿದರು.

ಇತ್ತೀಚಿನ ಸುದ್ದಿ