ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವೇಳೆ ಭೀಕರ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು

ಬಸ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟು, ಇಬ್ಬರು ಗಾಯಗೊಂಡ ದಾರುಣ ಘಟನೆ ರಾಜಸ್ಥಾನದ ಭರತ್ ಪುರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಧೋಲಾಪುರ ಜಿಲ್ಲೆಯ ಸಿಕರ್ ನಲ್ಲಿರುವ ಶ್ಯಾಮ್ ಜಿ ದೇಗುಲಕ್ಕೆ ಭೇಟಿ ನೀಡಿ ಮರಳುತ್ತಿದ್ದ ಕುಟುಂಬ ತಡರಾತ್ರಿ 1 ಗಂಟೆಯ ವೇಳೆ ಭೀಕರ ಅಪಘಾತಕ್ಕೆ ಸಿಲುಕಿದೆ.
ಹರೇಂದ್ರ ಸಿಂಗ್ (32), ಅವರ ಪತ್ನಿ ಮಮತಾ (30), ಅವರ ಮಗಳು ಜಾನ್ವಿ (6), ಮಮತಾ ಅವರ ಸಹೋದರಿ ಸುಧಾ (35), ಅವರ ಪತಿ ಸಂತೋಷ್ (37) ಮತ್ತು ಅವರ ಮಗ ಅನುಜ್ (5) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅಪಘಾತ ನಡೆಸ ಸ್ಥಳದಲ್ಲಿ 1 ಗೂಳಿಗಳ ಮೃತದೇಹ ಕೂಡ ಪತ್ತೆಯಾಗಿದೆ.
ರಸ್ತೆಯಲ್ಲಿ ಗೂಳಿಗಳ ಕಾಳಗದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬಸ್ ಡಿಕ್ಕಿಯಾದ ಪರಿಣಾಮ ಕಾರು ಪುಡಿಪುಡಿಯಾಗಿದೆ. ಇಲ್ಲಿನ ಪೊಲೀಸ್ ಠಾಣೆ ಬಳಿಯಲ್ಲೇ ಅಪಘಾತ ನಡೆದಿದ್ದು, ತಕ್ಷಣವೇ 6 ಮಂದಿಯನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಗಾಯಾಳುಗಳು ಕೊನೆಯುಸಿರೆಳೆದಿದ್ದರು. ಮಗುವೊಂದು ಈ ಅಪಘಾತದಲ್ಲಿ ಸಣ್ಣ ಗಾಯವೂ ಇಲ್ಲದೇ ಪರಾಗಿದೆ.