ಕದಿಯಲು ಬಂದು ಗಾಢ ನಿದ್ದೆಗೆ ಜಾರಿದ ಕಳ್ಳ: ಕಣ್ಣು ಬಿಟ್ಟಾಗ ಎದುರಿದ್ದರು ಪೊಲೀಸರು!
ಲಕ್ನೋ: ವೈದ್ಯರೊಬ್ಬರ ಮನೆಗೆ ನುಗ್ಗಿದ ಕಳ್ಳ ಕಳ್ಳತನಕ್ಕೂ ಮೊದಲು ಸ್ವಲ್ಪ ಹೊತ್ತು ಮಲಗಿದ್ದು, ಆದ್ರೆ ಬೆಳಿಗ್ಗೆಯಾದರೂ ಎಚ್ಚರವಾಗದ ಕಾರಣ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಗಾಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಇಂದಿರಾ ನಗರದ ಸೆಕ್ಟರ್– 20ರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಡಾ.ಸುನೀಲ್ ಪಾಂಡೆ ಎಂಬವರ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ಕಳ್ಳ ಮನೆ ಬಾಗಿಲು ಮುರಿದು ಒಳಗೆ ನುಗ್ಗಿದ್ದಾನೆ.
ಡಾ. ಸುನೀಲ್ ಪಾಂಡೆ ಅವರು ಪ್ರಸ್ತುತ ವಾರಾಣಸಿಯಲ್ಲಿನ ಬಲರಾಮಪುರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಹೀಗಾಗಿ ಈ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ಕಳ್ಳ ಸ್ವಲ್ಪ ಹೊತ್ತು ವಿಶ್ರಮಿಸಿ ಹೋಗಲು ತೀರ್ಮಾನಿಸಿದ್ದನು. ಆದರೆ, ಮದ್ಯದ ಮತ್ತಿನಲ್ಲಿದ್ದ ಕಳ್ಳ ಚೆನ್ನಾಗಿ ನಿದ್ದೆ ಮಾಡಿದ್ದಾನೆ. ಬೆಳಗ್ಗೆಯಾದರೂ ಆತನಿಗೆ ಎಚ್ಚರವಾಗಿರಲಿಲ್ಲ.
ಇತ್ತ ಅಕ್ಕಪಕ್ಕದ ಮನೆಯವರು ಬೆಳಗ್ಗೆ ಎದ್ದು ನೋಡಿದಾಗ ಪಾಂಡೆ ಅವರ ಮನೆಯ ಬಾಗಿಲು ಸ್ವಲ್ಪ ತೆರೆದಿರುವುದು ಕಂಡು ಬಂದಿತ್ತು. ಹೀಗಾಗಿ ಅನುಮಾನಗೊಂಡ ಅವರು ಮನೆಯೊಳಗೆ ಪ್ರವೇಶಿಸಿ ನೋಡಿದ್ದು ಈ ವೇಳೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹೀಗಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಗಾಜಿಪುರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆ ಮನೆಯೊಳಗೆ ಕಳ್ಳ ಗಾಢ ನಿದ್ರೆಯಲ್ಲಿದ್ದು, ಲಾಠಿಯಲ್ಲಿ ಒಂದು ಏಟು ಬಿದ್ದ ವೇಳೆ ಕಳ್ಳ ಎಚ್ಚೆತ್ತುಕೊಂಡಿದ್ದು, ಪೊಲೀಸರನ್ನು ಕಂಡು ಗಾಬರಿಗೊಂಡಿದ್ದಾನೆ.
ಸದ್ಯ ಕಳ್ಳತನದ ಆರೋಪದಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 379 ಎ ಅಡಿ ಕಳ್ಳನ ವಿರುದ್ಧ ದೂರು ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: