ತಲ್ವಾರ್ ಹಿಡಿದು ಮೊಬೈಲ್ ಶಾಪ್‌ ಗೆ ನುಗ್ಗಿ ಬೆದರಿಕೆ: ಯುವಕನ ಬಂಧನ - Mahanayaka

ತಲ್ವಾರ್ ಹಿಡಿದು ಮೊಬೈಲ್ ಶಾಪ್‌ ಗೆ ನುಗ್ಗಿ ಬೆದರಿಕೆ: ಯುವಕನ ಬಂಧನ

mudabidre
19/07/2026

ಮೂಡುಬಿದ್ರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಸಾರ್ವಜನಿಕ ಬಸ್ ನಿಲ್ದಾಣದ ಸಂಕೀರ್ಣದಲ್ಲಿ ಶನಿವಾರ ಸಾಯಂಕಾಲ ಒಂದು ಆತಂಕಕಾರಿ ಘಟನೆ ನಡೆದಿದೆ. ಯುವಕನೊಬ್ಬ ಕೈಯಲ್ಲಿ ಮಾರಕಾಸ್ತ್ರ (ತಲ್ವಾರ್) ಹಿಡಿದು ಬಹಿರಂಗವಾಗಿ ಓಡಾಡಿದ್ದಲ್ಲದೆ, ಅಂಗಡಿಯೊಂದಕ್ಕೆ ನುಗ್ಗಿ ಬೆದರಿಕೆ ಹಾಕಿದ್ದು, ಪ್ರಸ್ತುತ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಸಂಜೆ ಬಸ್ ನಿಲ್ದಾಣದ ರಸ್ತೆಯಲ್ಲಿ ಯುವಕನೊಬ್ಬ ತನ್ನ ಜೀನ್ಸ್ ಪ್ಯಾಂಟ್‌ ನ ಒಳಗಡೆಯಿಂದ ತಲ್ವಾರ್ ಹೊರಗೆ ತೆಗೆದು, ಸಾರ್ವಜನಿಕವಾಗಿ ಪ್ರದರ್ಶಿಸುತ್ತಾ ನಡೆದುಕೊಂಡು ಹೋಗಿದ್ದಾನೆ. ಪ್ರಯಾಣಿಕರು ಹಾಗೂ ಸಾರ್ವಜನಿಕರು ಓಡಾಡುವ ಜಾಗದಲ್ಲಿ ಯುವಕನ ಈ ವರ್ತನೆಯಿಂದ ಅಲ್ಲಿದ್ದ ಜನಸಾಮಾನ್ಯರು ಕೆಲಕಾಲ ತೀವ್ರ ಭೀತಿಗೊಳಗಾಗಿದ್ದರು. ಈ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‌ ನಲ್ಲಿ ಸೆರೆಹಿಡಿದಿದ್ದಾರೆ.

ಅಷ್ಟಕ್ಕೇ ನಿಲ್ಲಿಸದ ಈ ಯುವಕ, ಬಸ್ ನಿಲ್ದಾಣದ ಆವರಣದಲ್ಲೇ ಇದ್ದ ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿದ್ದಾನೆ. ಆ ಸಮಯದಲ್ಲಿ ಅಂಗಡಿಯಲ್ಲಿ ಗ್ರಾಹಕರು ವ್ಯಾಪಾರದಲ್ಲಿ ನಿರತರಾಗಿದ್ದರು. ಕೌಂಟರ್ ಬಳಿ ತೆರಳಿದ ಯುವಕ, ಅಲ್ಲಿನ ಸಿಬ್ಬಂದಿಗೆ ತಲ್ವಾರ್ ತೋರಿಸಿ ಹೆದರಿಸುತ್ತಾ, ತಕ್ಷಣ ತನಗೆ ಮೊಬೈಲ್ ನೀಡುವಂತೆ ಅಬ್ಬರಿಸಿ ದರೋಡೆಗೆ ಯತ್ನಿಸಿದ್ದಾನೆ. ಇದನ್ನು ಕಂಡು ಗ್ರಾಹಕರು ಆತಂಕದಿಂದ ದೂರ ಸರಿದಿದ್ದಾರೆ.

ಆದರೆ, ಅಂಗಡಿಯ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರು ಧೈರ್ಯದಿಂದ ಒಟ್ಟಾಗಿ ಯುವಕನನ್ನು ಎದುರಿಸಿ, ಆತನ ಕೈಯಲ್ಲಿದ್ದ ತಲ್ವಾರ್ ಅನ್ನು ಬಲವಂತವಾಗಿ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಡೀ ಘಟನೆಯು ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಘಟನೆಯಿಂದ ತಕ್ಷಣ ಎಚ್ಚೆತ್ತ ಸ್ಥಳೀಯರು ಮೂಡಬಿದ್ರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ, ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ತಲ್ವಾರ್ ಬೀಸಿ ದಾಂಧಲೆಗೆ ಯತ್ನಿಸಿದ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಆತ ಈ ಕೃತ್ಯವನ್ನು ಯಾವ ಉದ್ದೇಶಕ್ಕಾಗಿ ಮಾಡಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ