ಇಬ್ಬರು ದಲಿತ ಬಾಲಕಿಯರ ಅತ್ಯಾಚಾರ-ಕೊಲೆ ಪ್ರಕರಣ ಸಿಐಡಿ ತನಿಖೆ ನಡೆಸಲು ಒತ್ತಾಯ - Mahanayaka

ಇಬ್ಬರು ದಲಿತ ಬಾಲಕಿಯರ ಅತ್ಯಾಚಾರ-ಕೊಲೆ ಪ್ರಕರಣ ಸಿಐಡಿ ತನಿಖೆ ನಡೆಸಲು ಒತ್ತಾಯ

vijayapura
29/05/2021


Provided by

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಇತ್ತೀಚೆಗೆ ಇಬ್ಬರು ಬಾಲಕಿಯರನ್ನು ಅತ್ಯಾಚಾರಗೈದು ಕೊಲೆ ಮಾಡಿ ಬಾವಿಗೆ ಎಸೆದಿರುವ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ಆಗ್ರಹಿಸಿದೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಜಯಶ್ರೀ ಮತ್ತು ಅಶೋಕ ಜಿ.ಯರಗಟ್ಟಿ ಅವರು ಶನಿವಾರ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸದಸ್ಯರು ಈ ಸಂಬಂಧ ಮನವಿ ಸಲ್ಲಿಸಿದರು.

ಬಾಲಕಿಯರನ್ನು ಅತ್ಯಾಚಾರ, ಕೊಲೆ ಮಾಡಿರುವ ಮೂವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ. ಆದರೆ, ಈ ನಡುವೆ ಬಾಲಕಿಯರ ಮರಣೋತ್ತರ ಪರೀಕ್ಷಾ ವರದಿಯಲ್ಲಿ, ಇದು ಅತ್ಯಾಚಾರ, ಕೊಲೆಯಲ್ಲ, ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದರು.

ಬಾಲಕಿಯರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಒದಗಿಸಬೇಕು ಹಾಗೂ ಮರು ತನಿಖೆ ನಡೆಸಬೇಕು. ಇಲ್ಲವಾದರೆ ಬಾಗೇವಾಡಿಯಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ)ದ ಜಿಲ್ಲಾ ಮುಖಂಡರಾದ ಗುರುರಾಜ ಗುಡಿಮನಿ, ಉಮೇಶ ನಡುವಿನಮನಿ, ಕಾಮೇಶ ಭಜಂತ್ರಿ, ಶಂಕ್ರಪ್ಪ ಮಾದರ, ಮಡಿವಾಳಪ್ಪ ಕಳ್ಳಿಮನಿ, ಬಸವರಾಜ, ಮಾನಪ್ಪ ಕಳ್ಳಿಮನಿ, ಮಾದೇವಪ್ಪ ನಾಗರಾಳ, ಸುನೀಲ ನಡುವಿನಮನಿ, ಸಾಬು ತಳಗೇರಿ ಇದ್ದರು.

ಇತ್ತೀಚಿನ ಸುದ್ದಿ