ಕಾರು ಚಾಲಕನಿಗೆ ಚಿತ್ರ ಹಿಂಸೆ ನೀಡಿ ಆಸ್ತಿ ನುಂಗಿದ್ರಾ, ಭವಾನಿ, ಪ್ರಜ್ವಲ್ ರೇವಣ್ಣ?

ಬೆಂಗಳೂರು: ಮಾಜಿ ಸಚಿವ ಎಚ್.ಡಿ. ರೇವಣ್ಣ ಪತ್ನಿ ಭವಾನಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ಕಾರು ಚಾಲಕನನ್ನು ಕಿಡ್ನಾಪ್ ಮಾಡಿ ಚಿತ್ರ ಹಿಂಸೆ ನೀಡಿರುವ ಆರೋಪ ಕೇಳಿ ಬಂದಿದೆ.
14 ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಅವರ ಜತೆಗೆ ಕಾರು ಚಾಲಕರಾಗಿದ್ದ ಕಾರ್ತಿಕ್ ಎಂಬುವರಿಗೆ ಸೇರಿದ 13 ಎಕರೆ ಜಾಗವನ್ನು ರೇವಣ್ಣ ಕುಟುಂಬ ನುಂಗಿ ಹಾಕಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಆಸ್ತಿ ಮಾರಾಟ ಮಾಡುವಂತೆ ಒತ್ತಾಯಿಸಿ ಮಾಜಿ ಕಾರು ಚಾಲಕನನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಇವರ ತಾಯಿ ಭವಾನಿ ರೇವಣ್ಣ ವಿರುದ್ಧ ಕೇಳಿಬಂದಿದೆ. ತನಗೆ ನ್ಯಾಯ ನೀಡುವಂತೆ ಚಾಲಕ ಕಾರ್ತಿಕ್ ದಕ್ಷಿಣ ವಲಯ ಐಜಿಪಿಗೆ ದೂರು ನೀಡಿದ್ದಾರೆ.
ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಪ್ರಭಾವಿಗಳು ಎನ್ನುವ ಕಾರಣಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಕಾರ್ತಿಕ್ ಹೊಳೆನರಸೀಪುರ ತಾಲೂಕಿನಲ್ಲಿರುವ 13 ಎಕರೆ ಭೂಮಿಯನ್ನು ಮಾರಾಟ ಮಾಡುವಂತೆ ಒತ್ತಾಯಿಸಿ ತನ್ನನ್ನು ಹಾಗೂ ತನ್ನ ಪತ್ನಿಯನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ವಿರುದ್ಧ ಆರೋಪಿಸಿದ್ದಾರೆ.
ಮಾರ್ಚ್ 12, 2023 ರಂದು ಕಾರ್ತಿಕ್ ನನ್ನು ಕಿಡ್ನಾಪ್ ಮಾಡಿದ್ದು, ಏಪ್ರಿಲ್ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಸಹಿತ ಇನ್ನಿತರ ದಾಖಲೆಗಳನ್ನು ಕಾರ್ತಿಕ್ ಪೊಲೀಸರಿಗೆ ನೀಡಿದ್ದರು. ಬಲವಂತವಾಗಿ ಕರೆದೊಯ್ದು ನನ್ನ 13 ಎಕರೆ ಭೂಮಿಯನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.