ಅಧರ್ಮವೇ ತುಂಬಿರುವಾಗ ಧರ್ಮದ ಬಗ್ಗೆ ಮಾತನಾಡೋದು ಹೇಗೆ? | ಶಿಷ್ಯನ ಪ್ರಶ್ನೆಗೆ ಬುದ್ಧರು ನೀಡಿದ ಉತ್ತರ ಇಂದಿಗೂ ಪ್ರಸ್ತುತ
ಗುರುವೇ ಲೋಕದಲ್ಲಿ ಅಧರ್ಮವೇ ಇರುವಾಗ ನಾವು ಧರ್ಮವನ್ನು ಹೇಗೆ ತಾನೆ ಪ್ರಸ್ತುತ ಪಡಿಸಲು ಸಾಧ್ಯ ಎಂದು ಉಪಾಲಿಯು ಗೌತಮ ಬುದ್ಧರನ್ನು ಪ್ರಶ್ನಿಸಿದನು. ಗೌತಮ ಬುದ್ಧರು ಆಗ ಬೇರೇನೂ ವಿವರಣೆಗಳನ್ನು ನೀಡಲು ಹೋಗುವುದಿಲ್ಲ. ಮೌನವಾಗಿ ಉಪಾಲಿಯನ್ನು ಕರೆದು ಬಾ ಎಂದು ಸನಿಹದಲ್ಲಿದ್ದ ಕಾಡಿಗೆ ಕರೆದುಕೊಂಡು ಹೋಗುತ್ತಾರೆ.
ಕಾಡು ಬಹಳ ದಟ್ಟವಾಗಿತ್ತು. ಮುಂದೆ ನಡೆಯುತ್ತಾ ಹೋಗುತ್ತಿದ್ದಂತೆಯೇ ಕಾಡಿನಲ್ಲಿ ದಾರಿ ತಪ್ಪಿ ಹೋಗುತ್ತದೆ. ಯಾವ ಕಡೆಗೆ ಹೋಗಬೇಕು ಎನ್ನುವುದು ತಿಳಿಯದೇ ಇರುವ ಸಂದರ್ಭದಲ್ಲಿ, ಕಾಡಿನಲ್ಲಿ ಒಬ್ಬ ಬುಡಕಟ್ಟು ಸಮುದಾಯದ ವ್ಯಕ್ತಿ ಅವರಿಗೆ ಎದುರಾಗುತ್ತಾನೆ. ಆತ ಬುದ್ಧರನ್ನು ಹಾಗೂ ಉಪಾಲಿಯನ್ನು ಬಹಳ ಗೌರವಗಳೊಂದಿಗೆ ಕಾಡಿನ ಅಂಚಿನ ವರೆಗೆ ಸೂಕ್ತ ದಾರಿಯಲ್ಲಿ ಕರೆದುಕೊಂಡು ಬಂದು ತಲುಪಿಸುತ್ತಾನೆ.
ಅಲ್ಲಿಯವರೆಗೆ ಮೌನವಾಗಿದ್ದ ಬುದ್ಧರು ಹೇಳುತ್ತಾರೆ, “ನೋಡಿದೆಯಾ ಉಪಾಲಿ, ಒಂದು ವೇಳೆ ಧರ್ಮವಿಲ್ಲದೇ ಇರುತ್ತಿದ್ದರೆ, ನಾವು ಕಾಡಿನಿಂದ ಹೊರಗೆ ಬರಲು ಸಾಧ್ಯವಾಗುತ್ತಿತ್ತೇ? ನೋಡು ಕಾಡಿನೊಳಗು ಎಂತಹ ಧರ್ಮವಿದೆ ಅಲ್ಲವೇ?” ಎಂದು ಪ್ರಶ್ನಿಸುತ್ತಾರೆ.
ಹೌದು..! ಬುಡಕಟ್ಟು ಜನಾಂಗದ ಆ ವ್ಯಕ್ತಿಯಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಧರ್ಮವಿತ್ತು. ಕಾಡಿನಲ್ಲಿ ಸಿಲುಕಿಕೊಂಡವರಿಗೆ ಆತ ಸಹಾಯ ಮಾಡಬೇಕು ಎಂದೇನು ಕಡ್ಡಾಯ ನಿಯಮಗಳಿರಲಿಲ್ಲ. ಆದರೂ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎಂದು ತಿಳಿದ ಆ ವ್ಯಕ್ತಿಯೊಳಗಿರುವ ಧರ್ಮ ಎಂತಹ ಅದ್ಭುತ ಧರ್ಮ ಅಲ್ಲವೇ? ಈ ವಿಚಾರ ಅರಿವಾಗುತ್ತಿದ್ದಂತೆಯೇ ಉಪಾಲಿ ಗೌತಮ ಬುದ್ಧರು ಹೇಳಿದ ಮಾತನ್ನು ಒಪ್ಪುತ್ತಾನೆ.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.