ಜಾತಿ ವ್ಯವಸ್ಥೆಯ ವಿರುದ್ಧ ಯೋಧರಾದ ರಾಮಜೀ ಸಕ್ಪಾಲರು | ಎಪಿಸೋಡ್- 42 - Mahanayaka

ಜಾತಿ ವ್ಯವಸ್ಥೆಯ ವಿರುದ್ಧ ಯೋಧರಾದ ರಾಮಜೀ ಸಕ್ಪಾಲರು | ಎಪಿಸೋಡ್- 42

29/11/2020

ಮಹಾನಾಯಕ” ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ:


Provided by

ವಾರ :ಶನಿವಾರ

ದಿನಾಂಕ :28/11/2020

ಹೋದ ಮಹಾ ಸಂಚಿಕೆಯಲ್ಲಿ ಮನುವಾದಿಗಳು ‘ಈ ಭೀಮರಾವ್ ಹಾಗೂ ಕುಟುಂಬದವರು ನಮ್ಮ ಧರ್ಮವನ್ನು ನಾಶ ಮಾಡುತ್ತಿದ್ದಾರೆ ಎಂದು ಭಾವಿಸಿ’, ಇವರಿಗೆ ಒಂದು ಗತಿ ಕಾಣಿಸೋಣವೆಂದು ಎಲ್ಲರೂ ಒಟ್ಟಿಗೆ ಸೇರಿ ಇನ್ನೇನೂ ಇವರೆಲ್ಲರನ್ನು ಹೊಡೆಯಲು ಕಟ್ಟಿಗೆ ಕೋಲುಗಳಿಂದ ತಲೆಯ ಮೇಲೆ ಹಾಕುವಷ್ಟರಲ್ಲಿ ರಾಮಜೀ ಸಕ್ಪಾಲರು ನಿಜಕ್ಕೂ ಸಿನಿಮಯ ರೀತಿಯಲ್ಲಿ ಬಂದು ಆ ಒಬ್ಬೊಬ್ಬ ಮನುವಾದಿಗಳನ್ನು ಹಿಗ್ಗಾ ಮುಗ್ಗಾ ಥಳಿಸಿ, ತಾವು ಮಿಲಿಟರಿಯಲ್ಲಿ ಇದ್ದಾಗ ನೂರಾರು ವೈರಿಗಳನ್ನು ಏಕಕಾಲಕ್ಕೆ ಹುಟ್ಟಡಿಗಿಸಿದ ನನಗೆ ನಮ್ಮೊಳಗಿನ ವೈರಿಗಳು ಸಂದರ್ಭ ಬಂದರೆ ನೀವೂ ಯಾವ ಲೆಕ್ಕ ನನ್ನಂತ ಸುಭೇದಾರನಿಗೆ ಎಂಬುದನ್ನು ಸಾಭೀತು ಮಾಡುವ ಮೂಲಕ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗುತ್ತಾರೆ. ಇದು ನಿಜಕ್ಕೂ ನಾವು ನ್ಯಾಯ ಪಡೆಯಬೇಕೆಂದ್ರ ಒಮ್ಮೊಮ್ಮೆ ಶಕ್ತಿಯ ಬಳಕೆಯನ್ನು ಮಾಡಬೇಕಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ಇವತ್ತಿನ ಸಂಚಿಕೆಯಲ್ಲಿ ಅದೇ ರಾಮಜಿಯವರಿಂದ ತನ್ನ ಬೆಂಬಲಿಗರಿಗೆ ಸೋಲಾಗಿ, ಜೊತೆಗೆ ತನ್ನ ಮಗ ಕೂಡ ಭೀಮವಾದ ಮೆಚ್ಚಿ ಅವರ ಜೊತೆಗೆ ಹೊರಟು ಹೋಗಿ ನಿಜಕ್ಕೂ ಈಗ ತನ್ನ ಅಂಧ ಧರ್ಮಧಿಕಾರಾದ ಪರಾಕಾಷ್ಟೆಯಲ್ಲಿ ನಿಜಕ್ಕೂ ಅನಾಥವಾಗಿ ನಿಂತಿದ್ದಾನೆ. ದುಃಖದಲ್ಲಿ ಇದ್ದಾನೆ.ಇದೇ ಸಮಯಕ್ಕೆ ಸಮಾಜದ ಸುಧಾರಣೆ ಬಯಸುವ ಪರೆಶ್ ಎಂಬಾತ “ಏನೂ ಆಚಾರ್ಯರೆ ಮುಂದಿನ ಕಥೆ ಏನು..? ಎಂದು ಕೇಳುತ್ತಾನೆ. ಆಗ ಕಳ್ಳ ಧರ್ಮಗುರು “ಏನೂ ಹೇಳುದೈತಿ, ಇನ್ನೂ ಮುಂದೆ ಇವರ ಮಗ ದ್ರುವ ಸತ್ತು ಹೋದನೆಂದು ಅವನ ತಿಥಿ ಕಾರ್ಯ ಮಾಡಿ ಮುಗಿಸಬೇಕು. ಮತ್ತು ಇದನ್ನು ಮಾಡಿದ ನಂತರ ಆಚಾರ್ಯರಿಗೂ ದ್ರುವನಿಗೂ ಏನೂ ಸಂಬಂಧ ಇರುವುದಿಲ್ಲ. ಅಪ್ಪ ಮತ್ತು ಅಸ್ತಿ ಬೇಕೆಂದು ದ್ರುವ ಬರಲು ಸಾಧ್ಯವಿಲ್ಲ. ಇದರ ಜೊತೆಗೆ ಆಚಾರ್ಯರು ಬದುಕಿರುವತನಕ ಮಾತ್ರ ಇದು ಇವರ ಅಸ್ತಿ. ಇವರು ಸತ್ತ ಮೇಲೆ ಇವರ ಎಲ್ಲ ಆಸ್ತಿಯೂ ಈ ನಮ್ಮ ದೇವಸ್ಥಾನದ ಸೊತ್ತು.” ಎಂದು ಹೇಳುತ್ತಾನೆ.

ನೋಡಿ ಯಾವ ಧರ್ಮವೂ ಕೂಡ ಹೀಗೆ ಒಬ್ಬ ವ್ಯಕ್ತಿಯ ಅಸ್ತಿ, ಕಿತ್ತುಕೊಂಡು ದೇವಸ್ಥಾನಕ್ಕೆ ಧರ್ಮದರ್ಶಿಗಳಿಗೆ ಕೊಡಬೇಕೆಂದು ಹೇಳುವುದಿಲ್ಲ. ಏಕೆಂದರೆ, ಉತ್ತಮ ಧರ್ಮ ಅಂದರೆ ಯಾರಿಗೂ ಅನ್ಯಾಯ ಮಾಡದಿರುವುದು. ಸಕಲರಿಗೂ ಒಳ್ಳೆಯದನ್ನೇ ಬಯಸುವುದು. ಒಳ್ಳೆಯ ಧರ್ಮ ಯಾವತ್ತೂ ಜಾತಿ, ವರ್ಗ, ಅಂತಸ್ತು ಲಿಂಗ ತಾರತಮ್ಯ ಮಾಡದಿರುವುದು. ಅದೇ ನಿಜವಾದ ಧರ್ಮ. ಇದನ್ನೇ ಗೌತಮ್ ಬುದ್ಧ, ಮಹಾವೀರ್, ಯೇಸು ಕ್ರಿಸ್ತ, ಮಹಮ್ಮದ್ ಪೈಗಂಬರ್, ಅನೇಕರು ಹೇಳಿದ್ದು, ಧರ್ಮದ ಆಳ ತಿಳಿಯಬೇಕೆ ಹೊರತು ಧರ್ಮವನ್ನೇ ನಮ್ಮ ಸ್ವಾರ್ಥಕ್ಕಾಗಿ ಹಾಳು ಮಾಡಬಾರದು. ಮತ್ತಿಲ್ಲಿ ಆಚಾರ್ಯರು, ಮಂಗೇಶ ಇಲ್ಲಿ ಅದೇ ಕೆಲಸ ಮಾಡುತ್ತಿದ್ದಾರೆ. ಇದು ಪ್ರೇಕ್ಷಕ ಪ್ರಭುಗಳಿಗೆ ಅರ್ಥವಾಗದೆ ಇರಲಾರದು.

ಅಲ್ಲಿನ ದುರಾಲೋಚನೆಯ ಜನರಿಗೆ ಆಚಾರ್ಯರು “ಏನೂ ಹೇಳುತ್ತಿದ್ದೀರಿ ನೀವೂ ನಾನೇನೋ ನನ್ನ ಮಗ ಸುದ್ದಿ ಕಾರ್ಯಕ್ಕೆ ಒಪ್ಪಿಕೊಳ್ಳಲಿ ಎಂಬ ಕಾರಣಕ್ಕೆ ಹೀಗೆ ಹೇಳುತ್ತೇನೆ ಹಂಗ ಅಂದ ಮಾತ್ರಕ್ಕೆ ನಾನು ನನ್ನ ಮಗನಾಗಲಿ ಅಥವಾ ನನ್ನ ಮಗ ನನ್ನಾಗಲಿ ಬಿಟ್ಟಿದ್ದೆವಂತ ಅಲ್ಲ.” ಎಂದು ಹೇಳುತ್ತಾನೆ. ಆಗ ಪರೇಶ್ “ಆಚಾರ್ಯರೆ ಈಗ ನಿಮಗೆ ನಿಮ್ಮ ಪರಂಪರೆ ಮುಖ್ಯ ನೋಡಿ, ಅದಕ್ಕೆ ಸಮಾಜದ ಕಟ್ಟು ಪಾಡುಗಳ ಮುಂದೆ ಯಾವುದು ಮುಖ್ಯ ಅಲ್ಲ ನೋಡಿ, ಹಾಗಾಗಿ ನಿಮ್ಮ ಮಗನಿಗೆ ಪಿಂಡ ಬಿಡಲು ಒಪ್ಪಿಕೊಳ್ಳಿ ” ಎಂದು ಅಪಹಾಸ್ಯ ಮಾಡುತ್ತಿದ್ದಾನೆ. ಆಗ ಇನ್ನೊಬ್ಬ ಮನುವಾದಿ “ಆಚಾರ್ಯರೆ ಪರೇಶ್ ಹೇಳುತ್ತಿರುವುದು ಸತ್ಯ ಇದೆ. ನಿಮ್ಮ ಮಗ ಕೇವಲ ನಿಮ್ಮ ಧರ್ಮ ಮಾತ್ರ ಹಾಳು ಮಾಡುತ್ತಿಲ್ಲ ಹಿಂದಿನಿಂದ ನಡೆದುಕೊಂಡು ಬಂದಿರುವ ಇಡೀ ನಮ್ಮ ಪರಂಪರೆಯನ್ನು ಹಾಳು ಮಾಡುತ್ತಿದ್ದಾನೆ. ಎಂದು ದೊಡ್ಡಸ್ತಿಕೆ ಮೆರೆಯುತ್ತಾನೆ. ಆಗ ಮಂಗೇಶ್ “ಆಚಾರ್ಯರೆ ನಿಮ್ಮ ಮಗ ಸತ್ತ ಮೇಲೆ ಸ್ವರ್ಗ ಕೂಡ ನೋಡಲಾರ ಏಕೆಂದರೆ ಆ ಕೀಳು ಜಾತಿಯವರ ಕೈ ಹಿಡಿದಿದ್ದಾನೆ. ಅಂತಹ ಮಗನ ಬಗ್ಗೆ ತಾವೂ ಯೋಚನೆ ಮಾಡಬೇಡಿ. ಮನಸ್ಸು ಕಲ್ಲು ಮಾಡಿಕೊಳ್ಳಿ ನಿಮ್ಮ ಮಗನ ಶ್ರದ್ದಾ ಕಾರ್ಯ ಮಾಡಿಬಿಡಿ.” ಎನ್ನುವನು. ಇಷ್ಟು ಹೇಳಿದ ಮೇಲೆ ಆಚಾರ್ಯ ಯೋಚಿಸುತ್ತಿರುವಾಗಲೇ ತನ್ನ ಜನಗಳಿಂದ ಪಂಡಿತ ಎಂದು ಕರೆಯಿಸಿಕೊಳ್ಳುವ ಕಳ್ಳಗುರು “ಮಂಗೇಶ್ ನೀ ನಡೆ ನನ್ನ ಜೊತೆ ಮುಂದಿನ ಕಾರ್ಯ ವಿಧಾನದ ಬಗ್ಗೆ ನಾನು ನಿನ್ನ ಮುಂದೆ ಹೇಳುತ್ತೇನೆ.”. ಹೀಗೆ ಹೇಳಿ ಎಲ್ಲರೂ ಅವನ ಜೊತೆ ಹೊರಡುತ್ತಾರೆ. ಈಗ ಪರೇಶ್ ಒಬ್ಬನೇ ಶೇಡಜಿ ಬಳಿ ನಿಂತು “ಆಚಾರ್ಯರೆ ಈಗಲಾದರೂ ನನ್ನ ಮಾತನ್ನು ಅರ್ಥ ಮಾಡಿಕೊಳ್ಳಿ, ನಿಮ್ಮ ಸುತ್ತ ಮುತ್ತ ಓಡಾಡುವ ನಿಮ್ಮ ಜನರೆ ಧರ್ಮದ ಗೋಡೆ ಅಡ್ಡ ಕಟ್ಟಿ ನಿಮ್ಮನ್ನು ನಿಮ್ಮ ಮಗನನ್ನು ದೂರ ಮಾಡುತ್ತಿದ್ದಾರೆ. ಅದೇ ರೀತಿ ಅಲ್ಲಿ ರಾಮಜೀ ಸಕ್ಪಾಲ್ ರನ್ನು ಇದೆ ಜನ ಧರ್ಮದ ಹೆಸರಿನಲ್ಲಿ ಕಾಡಿ ಪೀಡಿಸುತ್ತಿದ್ದಾರೆ. ” ಹೀಗೆ ಹೇಳಿದರೂ ಇನ್ನೂ ತಿಳಿದುಕೊಳ್ಳದ ಶೇಡಜಿ “ನನ್ನ ಮುಂದೆ ಏನೂ ಹೇಳಬೇಡ, ಹೋಗು ಹೊರಟು ಹೋಗು ಇಲ್ಲಿಂದ ನನ್ನ ಒಂಟಿಯಾಗಿ ಇರಲು ಬಿಡು” ಎಂದು ಹೇಳುತ್ತಾನೆ. ಈಗ ಆತ ಹೊರಟು ಹೋಗುತ್ತಾನೆ.

ರಾಮಜೀ ಸಕ್ಪಾಲ್ ರ ಜೊತೆಗೆ ದ್ರುವ ಕೂಡ ತನ್ನ ತಂದೆ ಹಾಗೂ ಎಲ್ಲವನ್ನು ಬಿಟ್ಟು ಬಂದಿದ್ದಾನೆ. ಆಗ ಮನೆಯ ಬಳಿ ಬಂದಾಗ, ರಾಮಜೀಯವರು ದ್ರುವ ನೀನು ನಮ್ಮ ಮನೆಯೊಳಗೆ ಬರುವದರ ಬಗ್ಗೆ ಮತ್ತೊಮ್ಮೆ ಯೋಚಿಸು ..? ಎಂದು ಹೇಳುತ್ತಾರೆ. ಆಗ ತಂಗಿ ಮೀರಾಬಾಯಿ ರಾಮಜೀಯವರನ್ನು ನೋಡಿ ಸಂತೋಷದಿಂದ “ರಾಮಜೀ” ಎಂದು ಓಡಿ ಬರುತ್ತಾರೆ. ರಾಮಜೀಯವರು ಆಕೆಯ ಕ್ಷೇಮ ವಿಚಾರಿಸಿ, ಮತ್ತಿಗ ರಾಮಜೀಯವರಿಗೆ ದ್ರುವನು ” ಚಿಕ್ಕಪ್ಪ” ಎಂದು ಬಾಯಿತುಂಬಾ ಕರೆಯುತ್ತಾನೆ ಮತ್ತು ಮುಂದುವರೆದು “ಚಿಕ್ಕಪ್ಪ ಇಂದಿನಿಂದ ನಾನು ಕೂಡ ನಿಮ್ಮವನು. ನಾನು ಇಲ್ಲಿ ಹೊರಗೆ ನಿಂತರೆ, ಮಳೆ ಬಂದ್ರೆ ಇಲ್ಲವೇ ಕ್ರೂರ ಪ್ರಾಣಿಗಳು ಬಂದ್ರೆ ನನಗೆ ಭಯ ಆಗುತ್ತದೆ. ದಯವಿಟ್ಟು ನನ್ನಿಂದ ನಿಮಗೆ ಯಾವ ತೊಂದ್ರೆನೂ ಬರುವುದಿಲ್ಲ. ನೀವೂ ಯಾರ ಬಗ್ಗೆ ಭಯ, ಚಿಂತಿಸಬೇಡಿ. ನಾನು ನಿಮ್ಮ ಮನೆಯಲ್ಲಿ ಇರುತ್ತೇನೆ. “ಹೀಗೆ ಕೇಳಿದಾಗ, ಭೀಮರಾವ ಕೂಡ ಅಲ್ಲಿಗೆ ಬರುತ್ತಾನೆ. “ಅಪ್ಪ ದ್ರುವ ನಮ್ಮೊಳಗೊಬ್ಬ ಅವನು ನಮ್ಮ ಮನೆಯೊಳಗೇ ಬರಬಹುದಲ್ವಾ ಎಂದು ತಂದೆಗೆ ಕೇಳುತ್ತಾನೆ. ಆಗ ರಾಮಜೀಯವರು “ಹಾಗಲ್ಲ ಭೀಮ, ದ್ರುವ ತನ್ನ ಇಷ್ಟದಂತೆ ತನಗೆ ಬಂದಂತೆ ಬದುಕಲಿ, ಮುಂದೆ ಒಂದು ದಿವಸ ತನ್ನ ತಂದೆ ಮನಸ್ಸು ಬದಲಿಸಿ ದ್ರುವನನ್ನು ಕರೆದುಕೊಂಡು ಹೋದರು ಹೋಗಲಿ. ಏಕೆಂದರೆ ಒಬ್ಬ ಮನುಷ್ಯ ಜೀವನ ಪೂರ್ತಿ ತನ್ನ ಸಮಾಜದವರನ್ನು ಕಳೆದುಕೊಂಡು ಒಂಟಿಯಾಗಿ ಬಾಳುವುದು ಸಾಧ್ಯವಿಲ್ಲ” ಎಂದು ಹೇಳುತ್ತಾರೆ.

 

ಇತ್ತ ಶೇಡಜಿ ತನ್ನ ಅಪ್ಪ ದ್ರುವನನ್ನು ನೆನೆಸಿಕೊಂಡು ಅಳುತ್ತಿದ್ದಾನೆ. ರಾಮಜೀಯವರು ಮಂಜುಳಾಳನ್ನು ತಬ್ಬಿಕೊಂಡು “ಮಗಳೇ ನಿನ್ನ ಮದುವೆ ಆಗಲಿಲ್ಲವೆಂದಾಯಿತು. ಭೀಮ ಮನೆಗೆ ಬಂದಿದ್ದು ತಾಯಿಯೊಡನೆ ಜಗಳ ಆಗಿರುತ್ತದೆ ಎಂದು ತಿಳಿದಿದ್ದೆ ಹೀಗೆ ಹೇಳಿದಾಗ, ಭೀಮ “ಹಾಗೇನೂ ಇಲ್ಲಪ್ಪ, ಹಂಗಂತ ಅಮ್ಮ ಏನೂ ಸುಮ್ಮನೆ ಇರಲಿಲ್ಲ. ಆದ್ರೆ ಸ್ವಲ್ಪ ದಿವಸ ನನ್ನನ್ನ ಆ ಕೋಣೆಯಲ್ಲಿ ಕೂಡಿ ಹಾಕಿದರು. ಆಮೇಲೆ ನಾನು ಹೊರಗೆ ಬಂದೆ. ಅಲ್ವಾ ಅಮ್ಮ”. ಎಂದು ಕೇಳುತ್ತಾನೆ. ಆಗ ಭೀಮಬಾಯಿಯವರು ರಾಮಜೀ ಸಕ್ಪಾಲರು ಇಲದಿದ್ದಾಗ ನಡೆದ ಎಲ್ಲ ಘಟನೆಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳುತ್ತಾರೆ.ಮತ್ತು ರಾಮಜೀಯವರು ಆತ್ಮಹತ್ಯೆ ಮಾಡಿಕೊಂಡರೆಂದು ಮನುವಾದಿಗಳು ಹುಟ್ಟಿಸಿದ ಸುದ್ದಿ ಹೇಳಿ ದುಃಖ್ಖ ತಡೆಯದೇ ಅಳುತ್ತಾರೆ. ಇದನ್ನೆಲ್ಲಾ ಕೇಳಿಸಿಕೊಂಡ ರಾಮಜೀಯವರು “ನಾನು ಇಲ್ಲದಾಗ ಇಷ್ಟೊಂದು ನಡೆದಿದೆಯಾ, ಅಷ್ಟು ಸುಲಭವಾಗಿ ನಾನು ಯಾವತ್ತು ನಿಮ್ಮನ್ನು ಬಿಟ್ಟು ಹೋಗಲಾರೆ”. ಎಂದು ಹೇಳುತ್ತಾರೆ. ಭೀಮರಾವ “ಅದೇನೆ ಇರಲಿ ಅಪ್ಪ ನೀವೂ ಇನ್ನೊಮ್ಮೆ ನಮ್ಮನ್ನು ಹೀಗೆ ಬಿಟ್ಟು ಹೋಗಬೇಡಿ “ಎಂದು ಅಪ್ಪನ ಅಪ್ಪುಗೆಯಲ್ಲಿ ಒಂದಾಗುತ್ತಾನೆ. ಆಗ ರಾಮಜೀಯವರು ಹೇಳುತ್ತಾರೆ “ನಾನು ಯಾವತ್ತೂ ನಿಮ್ಮನ್ನು ಬಿಟ್ಟು ಹೋಗಲಾರೆ. ಆದರೆ ಭೀಮ ಒಂದು ಮಾತನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೋ,ಭಾವನೆಗಳಿಗೆ ಕರಗುವುದು ಮತ್ತೊಬ್ಬರನ್ನು ಪ್ರೀತಿಸುವುದು ಇದೆಲ್ಲ ಒಂದು ಕಡೆ ಇರಲಿ. ಆದರೆ ಒಬ್ಬ ವ್ಯಕ್ತಿ ಒಳಗಿನಿಂದಲೇ ಗಟ್ಟಿಯಾಗಬೇಕಾಗುತ್ತದೆ. ಕೆಲವೊಮ್ಮೆ ಒಬ್ಬ ವ್ಯಕ್ತಿ ಜೀವನದ ಹಾದಿಯಲ್ಲಿ ಒಬ್ಬನೇ ಸಾಗಬೇಕಾಗುತ್ತದೆ”. ಹೀಗೆ ಹೇಳುವಾಗ ಈಗ ಮೀರಾಬಾಯಿಯವರು “ಅವನು ಇನ್ನೂ ಚಿಕ್ಕವನು” ಎಂದು ಹೇಳುತ್ತಾರೆ. ಅವಾಗ ರಾಮಜೀಯವರು ಮುಂದೆ ದೊಡ್ಡವನಾಗಲೇಬೇಕಲ್ಲ ಎಂದು ಹೇಳಿ ನಗುತ್ತಾರೆ. ಈಗ ರಾಮಜೀಯವರು “ನಾನು ಇಲ್ಲದಾದಾಗ ಇವೆಲ್ಲ ಘಟನೆಗಳು ನಡೆಯಬಾರದಿತ್ತು. ಈ ಮನೆಯ ಹಿರಿಯನಾಗಿ ನಾನು ಭಾಸ್ಕರ್ ಮನೆಗೆ ಹೋಗಿ ಬರುತ್ತೇನೆ “. ಹೀಗೆ ಹೇಳುವಾಗ “ಗೋವಿಂದ ಗೋವಿಂದ್ ಎಂದು ಹೇಳುತ್ತ ಅದೇ ಮನುವಾದಿಗಳು ಖಾಲಿ ಚಟ್ಟ ಹಿಡಿದು ನಾಲ್ಕು ಜನ ಅದನ್ನೂ ಹೆಗಲ ಮೇಲೆ ಹೊತ್ತುಕೊಂಡು ಅಂತಿಮ ಕ್ರಿಯೆ ನಡೆಸುವ ಎಲ್ಲ ಸಲಕರಣೆಗಳೊಂದಿಗೆ ಅಲ್ಲಿಗೆ ಬರುತ್ತಾರೆ. ಮತ್ತು ಧರ್ಮಗುರು ಎಂದು ತನಗೆ ತಾನೇ ಕರೆಸಿಕೊಳ್ಳುವ ಕಳ್ಳಗುರು “ಇವತ್ತಿನ ಈ ಶ್ರದ್ದಾ ಕಾರ್ಯವನ್ನು ಇಲ್ಲಿಯೇ ಈ ರಾಮಜೀ ಮನೆಯ ಮುಂದೇನೆ ಮಾಡೋಣ. ಇದನ್ನು ನೋಡಿಯಾದರೂ ಇವರಿಗೆ ನಾಚಿಕೆಯಾಗಲಿ, ಮುಂದೆ ಎಲ್ಲರಿಗೂ ಇದು ಪಾಠವಾಗಲಿ” ಎಂದು ಈ ಹಿಂದೆ ಹೇಳಿದ್ದನ್ನೇ ಈಗಲೂ ಹೇಳುತ್ತಾನೆ. ಮತ್ತು ಶ್ರದ್ದಕ್ಕೆ ಬೇಕಾಗುವ ಸಿದ್ಧತೆಗಳನ್ನು ಒಂದೊಂದೇ ಮಾಡಿಕೊಳ್ಳಲು ಮುಂದಾಗುತ್ತಾರೆ. ಆಗ ಭೀಮರಾವ ಶೇಡಜಿ ಬಳಿ ಬಂದು “ದಯವಿಟ್ಟು ಈ ಕೆಲಸ ಮಾಡಬೇಡಿ, ದ್ರುವ ನನ್ನ ಗೆಳೆಯ ಅವನು ಬದುಕಿರುವಾಗಲೇ ಹೀಗೆ ಮಾಡೋದು ತಪ್ಪಾಲ್ಲ್ವಾ..? ಅವನ ಮುಂದೇನೆ ಅದೇಗೆ ಮಾಡುತ್ತೀರಿ..? ಎಂದು ಕೇಳಿದಾಗ ಶೇಡಜಿ ಏನೂ ಮಾತನಾಡದೆ ಕಣ್ಣೀರು ಸುರಿಸಿಕೊಂಡು ಸುಮ್ಮನಿರುತ್ತಾನೆ. ಆಗ ಕಳ್ಳ ಗುರು “ನೋಡು ಭೀಮರಾವ್ ನಿನಗೆ ಇದರಲ್ಲಿ ನಂಬಿಕೆ ಇಲ್ಲವಲ್ಲ ನಿನಗೇಕೆ ದುಃಖವಾಗಬೇಕು. ಮೇಲಾಗಿ ಇದಕ್ಕೆಲ್ಲ ಕಾರಣ ನೀನೇ. ಎಂದು ಹೇಳುತ್ತಾನೆ. ಆಗ ಭೀಮರಾವ್ “ಆದ್ರೆ ನನ್ನ ಗೆಳೆಯ ಇದನ್ನು ನಂಬುತ್ತಾನೆ. ಮೇಲಾಗಿ ಅದೂ ಅವನಿಗೆ ಸಂಬಂಧ ಪಟ್ಟದ್ದು. ಹಾಗಾಗಿ ಮಾಡಬೇಡಿ “ಎಂದು ಕೇಳುತ್ತಾನೆ. ಆಗ ದ್ರುವ ಬಂದು ಭೀಮರಾವ ಅವರು ಏನೂ ಬೇಕಾದರೂ ಮಾಡಿಕೊಳ್ಳಲಿ ಬಿಡು” ಎಂದು ಭೀಮನನ್ನು ಕರೆದುಕೊಂಡು ಹೋಗುವಾಗ, ತಂದೆ ಶೇಡಜಿ “ದ್ರುವ ದಯವಿಟ್ಟು ನನ್ನ ಮಾತು ಕೇಳು, ಶುದ್ದಿ ಆಗಲು ಒಪ್ಪಿಕೊ “ಎಂದು ಕೇಳಿಕೊಳ್ಳುತ್ತಾನೆ. ಈಗ ದ್ರುವ “ಅಪ್ಪ ನಮ್ಮ ಅಮ್ಮ ಸತ್ತಾಗಲು ಅವರಿಗೆ ಹೀಗೇ ಮಾಡಿದ್ದ್ದೀರಿ ಅಲ್ವಾ..? ಈಗ ನಾನು ಬದುಕಿದ್ದಾಗಲೇ ಇದನ್ನು ಮಾಡಿ ನನ್ನ ಅಮ್ಮನ ಹತ್ತಿರ ಕಳಿಸುತ್ತಿದ್ದೀರಿ”. ತಡೆಯಲು ಬಂದ ಭೀಮರಾವನಿಗೆ “ಭೀಮ್ ನಿನಗೂ ಗೊತ್ತಲ್ಲ ಚಿಕ್ಕಂದಿನಿಂದಲೂ ನನಗೆ ಅಮ್ಮ ಅಂದ್ರೇ ಪ್ರಾಣ, ಯಾರಿಗ್ಗೊತ್ತು ನಾನು ಅಮ್ಮನಿಗೆ ಹತ್ರ ಆದ್ರೂ ಆಗಬಹುದು”. ಎಂದು ಹೇಳುತ್ತಾನೆ. ಈಗ ಕಳ್ಳ ಗುರು “ಬನ್ನಿ ಚಿದಾನಂದರೆ, ಸಮಯ ಮೀರಿ ಹೋಗಬಾರದು. ಎಂದು ಶೇಡಜಿಯನ್ನು ಕರೆಯುತ್ತಾನೆ. ಆಗ ಶೇಡಜಿ ಕೈಯಲ್ಲಿ ಮಡಿಕೆ ಹಿಡಿದು ಚಟ್ಟದ ಬಳಿ ಇಡುತ್ತಾನೆ. ಈಗ ಅಲ್ಲಿ ಚಟ್ಟ, ಆ ಚಟ್ಟದ ಮೇಲೊಂದು ಬಿಳಿಯ ಬಟ್ಟೆ ಮತ್ತು ಆ ಬಟ್ಟೆಯ ಮೇಲೆ ಕಟ್ಟಿಗೆಗಳನ್ನು ಜೋಡಿಸಿ ಇಟ್ಟಿದ್ದಾರೆ. ಮತ್ತು ಅದರ ಮೇಲೆ ಮತ್ತೊಂದು ಬಿಳಿಯ ಬಟ್ಟೆ ಹೊದಿಸುತ್ತಾರೆ. ಇದೆಲ್ಲವನ್ನು ತುಸು ದೂರದಲ್ಲಿ ಎದುರಿಗೆ ಕುಳಿತ ದ್ರುವನ ಮುಂದೇನೆ ಎಲ್ಲ ಮಾಡುತ್ತಿದ್ದಾರೆ. ಈಗ ಶೇಡಜಿ ಮಡಿಕೆ ಹೆಗಲ ಮೇಲೆ ಹೊತ್ತುಕೊಂಡು ಅದಕ್ಕೊಂದು ತೂತು ಹೊಡೆದು ಅದನ್ನೂ ಹೊತ್ತುಕೊಂಡು ಮೂರೂ ಸುತ್ತು ಹಾಕಿ ಅಲ್ಲಿಯೇ ಕೆಳಗೆ ಬೀಳಿಸುತ್ತಾನೆ. ಆಗ ಈ ಅನಾಗರಿಕ ನಡೆತೆಯನ್ನು ಕಂಡು ಸಮಾಜ ಸುಧಾರಾಕ ಪರಿಶೇ ‘ಏನೂ ಆಚಾರ್ಯರೆ ಇನ್ನೂ ನಿಮಗೆ ಬುದ್ದಿ ಬರಲಿಲ್ಲವೇ..? ಇಂತವರ ಜೊತೆಗೆ ನೀವೂ ಸೇರಿ ಇವರು ಹೇಳಿದಂತೆ ಮಾಡಿದಾಗ ನಿಮ್ಮನ್ನು ಇದು ಸರ್ವನಾಶ ಮಾಡುತ್ತದೆ’ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಂಡು ಈ ಹುಚ್ಚರ ಹುಚ್ಚಾಟ ಕಣ್ಣಾರೆ ಕಂಡು ಮರಗುತ್ತಾನೆ. ಮತ್ತೀಗ ಕಳ್ಳ ಗುರು ಶೇಡಜಿಯ ಕೈಗೆ ಬೆಂಕಿ ಕೊಟ್ಟು ಅದನ್ನೂ ಸುಡಲು ಹೇಳುತ್ತಾನೆ. ಶೇಡಜಿ ಅದಕ್ಕೆ ಬೆಂಕಿ ಹಚ್ಚುತ್ತಾನೆ. ಈಗ ಕಳ್ಳಗುರು “ನೋಡಿ ಈಗ ಸಂಸ್ಕಾರ ಪೂರ್ಣ ಆಯಿತು. ನಡೆಯಿರಿ ಎಲ್ಲರೂ ಮನೆಗೆ ಹೋಗಿ ತಲೆಗೆ ಸ್ನಾನ ಮಾಡಿ, ಅಲ್ಲಿಗೆ ಎಲ್ಲವೂ ಮುಗಿದಂತೆ “ಎಂದು ಹೇಳಿದಾಗ ಎಲ್ಲರೂ ಹೊರಡಲನುವಾಗುತ್ತಾರೆ. ಇಸ್ಟೊತ್ತು ಸುಮ್ಮನೆ ಕುಳಿತಿದ್ದ ದ್ರುವ ಈಗ ಎದ್ದು ನಿಂತು “ಈಗ ಇದೂ ಎಲ್ಲವೂ ಪ್ರಾರಂಭವಾಯಿತು”. ಎಂದು ಹೇಳಿದಾಗ ಎಲ್ಲ ಮನುವಾದಿಗಳು ತಿರುಗಿ ನೋಡುತ್ತಾರೆ. ದ್ರುವ ಮಾತು ಮುಂದುವರೆಸುತ್ತಾನೆ “ಇಲ್ಲಿ ನಿಮಗೆ ಗೊತ್ತಿರುವ ದ್ರುವ ಸತ್ತು ಹೋದನು. ಆದ್ರೆ ಮತ್ತೇ ಇಲ್ಲಿಯೇ ಹೊಸ ದ್ರುವ ಹುಟ್ಟಿ ಬಂದಿದ್ದಾನೆ. ರಾಮಜೀ ಚಿಕ್ಕಪ್ಪ ನನ್ನ ಅಸ್ತಿತ್ವ ಇನ್ನೂ ಸತ್ತು ಹೋಗಿಲ್ಲ ಬದಲಾಗಿ ಈಗ ನನ್ನ ಅಸ್ತಿತ್ವ ಹುಟ್ಟಿಕೊಂಡಿದೆ. ಅಪ್ಪ ಮಾಡಿದ ಕೆಟ್ಟ ಕೆಲಸದಿಂದ ಹುಟ್ಟಿರುವ ಮಗನ ಅಸ್ತಿತ್ವ ನಾನು ಸಮಾಜದಲ್ಲಿರುವ ಮೇಲೂ ಕೀಳು ಎಂಬ ಸುಟ್ಟು ಹೋಗಿರುವ ಬಾವದ ಸಾಕ್ಷಿ ನಾನು. ಎಲ್ಲರೂ ಕೇಳಿಸಿಕೊಳ್ಳಿ ಇವತ್ತಿನಿಂದ ಈ ರಾಮಜೀ ಸಕ್ಪಾಲ್ ರ ಬಂಧು ನಾನು. ಇವತ್ತಿನಿಂದ ನಂದು ದ್ರುವ ಸಕ್ಪಾಲ್ ಎಂದು ಹೊಸ ಹೆಸರು. ಮತ್ತಿಲ್ಲೆ ಇದೆ ಜಾಗದಲ್ಲಿ ನಾನು ಒಂದು ಮನೆ ಮಾಡಿಕೊತಿದ್ದೀನಿ. ಭೀಮನ ಸ್ನೇಹಿತ ಮಾತ್ರವಲ್ಲ ಅವನ ಬಂಧು ಆಗಿರ್ತೀನಿ. ಈ ಸಮಾಜಕ್ಕೆ ಅವರಪ್ಪ ಮಾಡಿರುವ ಪಾಪಕ್ಕೆ ನಾನು ಜೀತನಾಗಿರ್ತೀನಿ. ಇಷ್ಟು ಹೇಳಿದಾಗ ಕೇಳಿಸಿಕೊಂಡ ಎಲ್ಲರೂ ಉರಿದುಕೊಂಡು ಹೊರಟು ಹೋಗುತ್ತಾರೆ. ಮತ್ತೀಗ ಭೀಮ ದ್ರುವನಲ್ಲಿ ಬಂದು ಕೈ ಹಿಡಿದಾಗ “ಭೀಮ್ ನಿಮಗೆ ನಮ್ಮ ಸಮಾಜದವರು ತುಂಬಾನೇ ಕಾಟ ಕೊಟ್ಟಿದ್ದಾರೆ ಅಲ್ವಾ..? ಅದಕ್ಕೆ ನಾನು ನಿಮ್ಮ ಜೊತೆಗೆ ಇದ್ದು ಅದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳುತ್ತೇನೆ. ನಮ್ಮಪ್ಪನ ಪಾಪನಾ ಕಡಿಮೆ ಮಾಡುತ್ತೇನೆ ” ಹೀಗೆ ಹೇಳಿ ಅಳುತ್ತಾನೆ. ಪರಾಶೆ “ನನ್ನ ಕ್ಸಮಿಸು ದ್ರುವ ನಿಮ್ಮಪ್ಪನಿಗೆ ಅರ್ಥ ಮಾಡಿಸೋಕೆ ಎಲ್ಲ ಪ್ರಯತ್ನ ಪಟ್ಟೆ. ಆದ್ರೆ ನಿಮ್ಮಪ್ಪ ಅರ್ಥ ಮಾಡಿಕೊಳ್ಳಲಿಲ್ಲ. ಕೊನೆಗೆ ನಿನ್ನನ್ನು ಕಳೆದುಕೊಂಡರು”. ಎಂದು ಹೇಳುತ್ತಾರೆ. ಆಗ ದ್ರುವ “ಕಳಕೊಂಡಿದ್ದು ಅವರು ನಾನು ಬರೀ ಪಡೆದುಕೊಂಡೆ ಎಲ್ಲ ಹೊಸದು. ಹೊಸ ಅಸ್ತಿತ್ವ.., ಹೊಸ ಸಮಾಜ.., ಹೊಸ ಜೀವನ. ಮತ್ತೇ ಹೊಸ ಬಂಧುಗಳು. ಈಗ ಹೊಸ ಮನೆ ಮಾಡಿಕೊಳ್ಳುತ್ತೀನಿ”. ಹೀಗೆ ಹೇಳಿದಾಗ, ರಾಮಜೀಯವರು “ದ್ರುವ ನೀನು ನಮ್ಮ ಮನೆಯಲ್ಲಿ ಇದ್ದು ಬಿಡು” ಕೇಳುತ್ತಾರೆ. ಆದ್ರೆ ದ್ರುವ “ಚಿಕ್ಕಪ್ಪ ನೀವೂ ಭೀಮನಿಗೆ ಹೋರಾಟದ ದಾರಿ ಹೇಳಿ ಕೊಟ್ತ್ರಿ, ಆದ್ರೆ ನನಗೂ ಕೂಡ ಸಂಘರ್ಷದ ದಾರಿ ಹೇಳಿ ಕೊಡಿ. ಆಸರೆ ಕೊಟ್ಟು ನನ್ನ ಪರಾಶೆಯ ಮಾಡಬೇಡಿ ” ಕೇಳುತ್ತಾನೆ. ಈಗ ಭೀಮಾಬಾಯಿಯವರು “ಆದ್ರೆ ಪುಟ್ಟ ನೀನಿನ್ನು ಚಿಕ್ಕವನು ಹೀಗಾಗಿ ಈಗಲೇ ಬೇಡ ” ಹೇಳುವಾಗ “ಚಿಕ್ಕಮ್ಮ ಭೀಮ್ ನನಗಿಂತ ಚಿಕ್ಕವನು ಆದ್ರೆ ಇಡೀ ಊರೇ ಅವನ ಬಗ್ಗೆ ಮಾತಾಡುತ್ತೆ. ಇದಕ್ಕೆಲ್ಲ ವಯಸ್ಸು ನೋಡಬಾರದು ಛಲ ಮುಖ್ಯ ಆಗುತ್ತದೆ. ನಡೆ ಭೀಮ್ ಹೊಸ ಮನೆ ಕಟ್ಟೋಣ ಎಂದು ಹೇಳಿದಾಗ ಪರಿಷ ಕೂಡ “ದ್ರುವ ಪುಟ್ಟ ನಾನು ಮನೆ ಕಟ್ಟಲು ಸಹಾಯ ಮಾಡಬಹುದಾ?” ಎಂದು ಕೇಳಿದಾಗ ನಿಮಗೆ ಇಷ್ಟ ಇದ್ದರೆ ಕೈ ಜೋಡಿಸಿ ಎನ್ನುತ್ತಾನೆ. ಹೀಗೆ ಅವರು ಯಾವ ಜಾಗದಲ್ಲಿ ದ್ರುವನ ಅಂತಿಮ ಕ್ರಿಯೆ ಮಾಡಿದ್ದರೋ ಅದೇ ಜಾಗದಲ್ಲಿ ಎಲ್ಲರೂ ಸೇರಿ ದ್ರುವನಿಗೆ ಮನೆ ಕಟ್ಟಿ ಕೊಡುತ್ತಾರೆ.

ಇತ್ತ ಶೇಡಜೀ ಮನೆಯಲ್ಲಿ ಮತ್ತೆ ಚರ್ಚೆ ನಡೀತಿದೆ.”ನನ್ನ ಮಗ ದ್ರುವ ಸ್ವಲ್ಪ ಹಠ ಮಾರಿ ಕೆಲವು ದಿನ ಆದ ಮೇಲೆ ಮತ್ತೆ ನನ್ನ ಹುಡುಕಿಕೊಂಡು ಮನೆಗೆ ಬರುತ್ತಾನೆ. ಆಗ ಸುದ್ದಿ ಮಾಡಿಸಿದರೆ ಆಯಿತು”. ಎನ್ನುತ್ತಾನೆ ಆಗ ಆ ಕಳ್ಳಗುರು “ಸತ್ತವನು ಅದೇಗೆ ಬದುಕಿ ಬರಲು ಸಾಧ್ಯ? ಎಂದು ಕೇಳಿದಾಗ ಶೇಡಜೀ “ಬದುಕಿದವನನ್ನು ಸಾಯಿಸಿದ ಹಾಗೆ, ಸತ್ತವನನ್ನು ಬದುಕಿ ಬರುವಂತೆ ಎನಾದರೂ ಒಂದು ಮಾರ್ಗ ಇರುತ್ತದೆ. ಅದನ್ನೂ ಕಂಡು ಹಿಡಿಯಿರಿ. ನೀನಾದ್ರೂ ಹೇಳು” ಎಂದು ಮಂಗೇಶನಿಗೆ ಹೇಳಿದಾಗ ಆತನು “ಪಂಡಿತರೇ ಏನಾದ್ರೂ ಉಪಾಯ ಮಾಡಿ”. ಎನ್ನುತ್ತಾನೆ. ಈಗ ಶೇಡಜಿ ಬೇಕಾದ್ರೆ ಹಣ ಕೊಡುತ್ತೇನೆ ಎಂದು ಹೇಳುತ್ತಾನೆ. ಆಗ ಆ ಕಳ್ಳಗುರು “ಹೀಗೆ ದಿನಾಲೂ ಹಣ ಕೊಟ್ಟರೆ ನಿನ್ನ ಬಳಿ ಇರುವ ಎಲ್ಲ ಸಂಪತ್ತು ಕರಗಿ ಹೋಗುತ್ತದೆ. ಆದರೆ ಮುಂದೆ ದೇವಸ್ಥಾನ ಕಟ್ಟಲು ಏನೂ ಕೊಡುತ್ತೀರಿ..? ಹೀಗೆ ಹೇಳಿ, ಸನ್ಯಾಸಿಯಾಗಿ ಮೋಕ್ಷದ ಹಾದಿ ಹಿಡಿ”. ಎಂದು ವೇದಾಂತ ಹೇಳಿ ಹೊರಟು ಹೋಗುತ್ತಾನೆ.

 

ನೋಡಿ ಧರ್ಮದ ಹೆಸರಿನಲ್ಲಿ ಒಬ್ಬ ಕಳ್ಳಗುರು ಹೇಗೆ ಇಡೀ ಆಸ್ತಿಯನ್ನು ಹೊಡೆಯಲು ಕಾಯುತ್ತಿದ್ದಾನೆ.  ಈಗ ದ್ರುವನ ಮನೆ ತಯಾರಾಗಿದೆ ಮತ್ತು ದ್ರುವ “ಈಗ ನಮ್ಮಮ್ಮ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ಏಕೆಂದರೆ ಅವರ ಆಸೆ ಕೂಡ ಅದೇ ಆಗಿತ್ತು. ನನ್ನ ಮಗ ದೊಡ್ಡವನಾಗಿ ಮನೆ ಕಟ್ಟಲಿ ಎಂಬುದು”. ಆಗ ಭೀಮರಾವ “ನೀನು ಅಮ್ಮನ ಆಸೆ ಪೂರ್ತಿ ಮಾಡಿಬಿಟ್ಟೆ ಎನ್ನುತ್ತಾನೆ. ಆಗ ದ್ರುವ ಆದರೆ ಮನೆ ದೊಡ್ಡದೋ ಚಿಕ್ಕದೂ ಅದೂ ಬೆರೆ”. ಎನ್ನುವಾಗ ಭೀಮಾಬಾಯಿ ಬರುತ್ತಾರೆ ಮತ್ತು ಹೇಳುತ್ತಾರೆ “ಮನೆ ಚಿಕ್ಕದಾ..?, ಮನಸ್ಸುಗಳು ಶುದ್ದವಾಗಿದ್ದರೆ, ಸಂಬಂಧಗಳು ಗಟ್ಟಿಯಾಗಿದ್ದರೆ ಆಗ ಮಣ್ಣಿನ ಮನೆ ಕೂಡ ಅರಮನೆ ಅನ್ನಿಸೋಕೆ ಸುರು ಆಗತ್ತೆ. ಮನೆಯೇ ಮಂತ್ರಾಲಯ ಆಗತ್ತೆ”. ಹೀಗೆ ಹೇಳಿ ದ್ರುವನಿಗೆ ಅಡುಗೆ ಮಾಡಿ ತಿನ್ನಲು ಕೊಡುತ್ತಾರೆ. ಆಗ ದ್ರುವ “ಚಿಕ್ಕಮ್ಮ ನಾನೇ ಅಡಿಗೆ ಮಾಡಿಕೋಬೇಕೆಂದು”. ಹೀಗೆ ಹೇಳುವಾಗ ಭೀಮಾಬಾಯಿ “ಆಯಿತು ನಾಳೆ ನೀನೇ ಮಾಡಿಕೊಳ್ಳುವೆಯಂತೆ ಇವತ್ತು ತಿನ್ನು”. ಎಂದು ಹೇಳಿ ದ್ರುವ ಹಾಗೂ ಭೀಮ ಇಬ್ಬರಿಗೂ ತುತ್ತು ಮಾಡಿ ತಿನ್ನಿಸುತ್ತಾರೆ. ಆಗ ಅಮ್ಮನನ್ನು ನೆನಪಿಸಿಕೊಂಡ ದ್ರುವ ಅಮ್ಮ ಎಂದು ಭೀಮಭಾಯಿಯವರನ್ನು ತಬ್ಬಿಕೊಂಡು ಆನಂದದ ಕಣ್ಣೀರು ಸುರಿಸುವಾಗ ಮತ್ತೇ ಶೇಡಜಿ ಬರುತ್ತಾನೆ ಕೋಪದಿಂದ “ನೀನು ಹಾಳಾಗಿ ಹೋಗಿದ್ದೀಯ ಇಂತವಳನ್ನು ಅಮ್ಮ ಅಂತಿದ್ದೀಯಾ ನೋಡ್ತಾ ಇರು ಇದಕ್ಕೆಲ್ಲ ಕಾರಣರಾದ ಇವರ ಮೇಲೆ ಪ್ರತಿಕಾರ ತೀರಿಸಿಕೊಂಡೆ ಬಿಡುತ್ತೇನೆ”. ಹೀಗೆ ಹೇಳಿ ಹೊರಟು ಹೋಗುವಾಗ ದ್ರುವ “ಓ ಚಿದಾನಂದ ಅವರೇ ನೀವೂ ತಂದ ತಟ್ಟೆ ಎತ್ತಕೊಂಡು ಹೋಗಿ ಯಾರಿಗ್ಗೊತ್ತು ನಿಮ್ಮವರಿಗೆ ಈ ವಿಷಯ ಗೊತ್ತಾದ್ರೆ ನಿಮ್ಮನ್ನು ಸುದ್ದಿಕರಣ ಮಾಡಿಬಿಡ್ತಾರೆ ” ಹೀಗೆ ದ್ರುವ ಹೇಳಿದಾಗ ಅವಮಾನದಿಂದ ಶೇಡಜಿ ಹೊರಡುತ್ತಾನೆ. ಈಗ ಮನೆಯಲ್ಲಿ ಭೀಮಾಬಾಯಿ ರಾಮಜೀಯವರಿಗೆ ಶೇಡಜಿಯವರು ಬಂದು ಆಡಿದ ಪ್ರತೀಕಾರದ ಮಾತಿನ ಬಗ್ಗೆ ಹೇಳುತ್ತಾ, ಸತ್ಯದ ಪರವಾಗಿ ನಿಂತಿದ್ದಕ್ಕೆ ಏನಾಗಿದೆ ಅಂತಾ ನೀವೇ ನೋಡಿದ್ದೀರಲ್ಲ ಎನ್ನುತ್ತಾರೆ. ಆಗ ರಾಮಜೀಯವರು ಕೂಡ ಹೌದು. “ಹೌದು ನಾವು ದ್ರುವನ ಪರವಾಗಿ ಅಂದ್ರೇ ಸತ್ಯದ ಪರವಾಗಿ ನಿಂತಿದ್ದಕ್ಕೆ ಬೆಲೆ ತೆರಬೇಕಾಗಬಹುದು”. ಹೀಗೆ ಯೋಚಿಸುವಾಗ ಭೀಮರಾವ ಅಲ್ಲಿಗೆ ಬಂದು “ಅಪ್ಪ ನಾವು ದ್ರುವನ ಪರವಾಗಿ ನಿಲ್ಲದೆ ಹೋದರೆ ಅವನಿಗೆ ತುಂಬಾ ಕಷ್ಟವಾಗುತ್ತದೆ ” ಹೀಗೆ ಹೇಳುವಾಗ ಇವತ್ತಿನ ಸಂಚಿಕೆಗೆ ತೆರೆ ಬೀಳುತ್ತದೆ.

 

ನೋಡಿದ್ರೇಲ್ಲ ಪ್ರೇಕ್ಷಕರೆ ಇವತ್ತಿನ ಎಪಿಸೋಡ್ ಎಷ್ಟೊಂದು ಭಯಾನಕವಾಗಿತ್ತು. ಧರ್ಮದ ಹೆಸರಿನಲ್ಲಿ ಜೀವಂತ ಇರುವ ವ್ಯೆಕ್ತಿಯನ್ನೇ ಮಣ್ಣು ಮಾಡಿ ಕ್ರಿಯಾವಿದಿಗಳನ್ನು ನಡೆಸಿ ಸುಟ್ಟು ಹಾಕುವುದು ಎಂತಾ ಹೇಸಿತನ. ಮತ್ತು ಇದಕ್ಕೆ ದ್ರುವ ಕೂಡ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾನೆ. ಇಲ್ಲಿ ಮತ್ತೇ ನಮಗೆ ಅಣ್ಣ ಬಸವಣ್ಣ ನೆನಪಿಗೆ ಬಂದರು ನೋಡಿ ಏಕೆಂದರೆ ಬಸವಣ್ಣ ಕೂಡ ಐದು ವರ್ಷದ ಮಗುವಾಗಿದ್ದಾಗ ಅಕ್ಕನಿಗೆ ಹಾಕದ ಜನಿವಾರ ನನಗೇಕೆ ಎಂದು ಪ್ರತಿಭಟಿಸಿ ಜನಿವಾರ ಕಿತ್ತೆಸೆದು ಮನೆ ಬಿಟ್ಟು ಹೋಗುವ ಇತಿಹಾಸದ ಪುಟಗಳು ನೆನಪಿಗೆ ಬಂದವು ಪ್ರೇಕ್ಷಕರು ಕೂಡ ಇದನ್ನೇ ಮಾತಾನ್ನಾಡಿಕೊಳ್ಳುವುದು ಕಂಡು ಬಂದಿತು. ಅದರಲ್ಲೂ ಆ ಮಂಗೇಶ ‘ಹೇಗಾದ್ರು ಮಾಡಿ ನೀವೂ ಮನಸ್ಸು ಬದಲಾಯಿಸಿ ನಮಗೆ ಬೇಕಾದಂತೆ ಬದಲಾವಣೆ ಮಾಡಿ ನಿಮಗೆ ಬೇಕಾದಷ್ಟು ಹಣ ಸಿಗುತ್ತದೆ’ ಎಂದು ಹೇಳುವುದು ಮತ್ತು ಆ ಕಳ್ಳಗುರು(ಪಂಡಿತ) ಧರ್ಮದ ಹೆಸರಿನಲ್ಲಿ ಶೇಡಜಿಯ ಇಡೀ ಅಸ್ತಿಯನ್ನೇ ಲಪಟಾಯಿಸಲು ನೋಡುವುದು ಕಂಡು ಬರುತ್ತದೆ. ಇವೆಲ್ಲವೂ ಒಂದು ಒಳ್ಳೆಯ ಧರ್ಮವನ್ನು ಹೇಗೆ ತಮ್ಮ ಸ್ವಾರ್ಥ ಸಾಧನೆಗೇ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ತಿಳಿಯಬಹುದಾಗಿದೆ.

ಹಾಗಾದ್ರೆ ಮುಂದಿನ ಸಂಚಿಕೆಯಲ್ಲಿ ಸೇಡು ತೀರಿಸಿ ಕೊಳ್ಳಲು ಶೇಡಜಿ ಮನುವಾದಿಗಳ ಜೊತೆಗೆ ಸೇರಿ ಮತ್ತಾವ ಸಂಚು ಹೂಡಬಹುದು..? ಹಾಗೂ ಭಾಸ್ಕರ್ ನ ಮುಂದಿನ ನಡೆ ಏನೂ…? ಮುಂತಾದ ನೈಜ ಘಟನೆಗಳಿಗಾಗಿ ಮುಂದಿನ ಎಪಿಸೋಡಗಾಗಿ ಕಾಯೋಣ.

.. ಅಲ್ಲಿಯವರಿಗೂ 

    … ಜೈಭೀಮ್

     … ಮುಂದುವರೆಯುವುದು

ಗಣಪತಿ ಚಲವಾದಿ(ಗಗೋಚ), ಬಿಎಂಟಿಸಿ ನಿರ್ವಾಹಕರು , ಕಸಾಪ ಮಯೂರವರ್ಮ, ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

 

ಇತ್ತೀಚಿನ ಸುದ್ದಿ