ಅಸಮಾನತೆಗಳ ವಿರುದ್ಧ ಜಾಗೃತಿ ಮೂಡಿಸಿ ಸಮಾಜವನ್ನು ಒಗ್ಗೂಡಿಸಿದ ನಾರಾಯಣಗುರುಗಳು: ರವಿ ಪೇಜಾವರ

ಬಜ್ಪೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ -ಎಕ್ಕಾರು ಗ್ರಾಮ ಸಮಿತಿಯ ವತಿಯಿಂದ ಸಮಾಜ ಪರಿವರ್ತನೆಯ ಹರಿಕಾರ, ದಾರ್ಶನಿಕ, ಮಾನವತಾವಾದಿ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣಾ ಕಾರ್ಯಕ್ರಮದ ಅಂಗವಾಗಿ “ಸಮಾಜ ಸುಧಾರಣೆಯಲ್ಲಿ ಶ್ರೀ ನಾರಾಯಣ ಗುರುಗಳು. ವಿಚಾರ -ಮಂಥನ ಕಾರ್ಯಕ್ರಮವನ್ನು ಎಕ್ಕಾರು ಗ್ರಾಮಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಸಂಚಾಲಕರಾದ ಗಣೇಶ್ ಕೆಂಚಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ದ. ಸಂ.ಸ. ಮಂಗಳೂರು ತಾಲೂಕು ಸಂಚಾಲಕರಾದ ರವಿ ಪೇಜಾವರ ನಾರಾಯಣ ಗುರುಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,19-20ನೇ ಶತಮಾನದಲ್ಲಿ ಕೇರಳ ರಾಜ್ಯದಾದ್ಯಂತ ನಂಬೂದರಿ ಎಂಬ ಮನುವಾದಿಗಳಿಂದ ಅಸ್ಪೃಶ್ಯರು, ಶೂದ್ರರು ಹಾಗೂ ಮಹಿಳೆಯರ ಮೇಲೆ ಜಾತಿ ಹಾಗೂ ಮೌಡ್ಯಾಧರಿತ ಹಿಂಸಾಚಾರಗಳು ವಿಪರೀತವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ನಾರಾಯಣಗುರುಗಳು ಸಮಾಜದಲ್ಲಿ ನೆಲೆಯೂರಿದ್ದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮುಂತಾದ ಅಸಮಾನತೆಗಳ ವಿರುದ್ಧ ಜಾಗೃತಿ ಮೂಡಿಸಿ, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಡಿ ಸಮಾಜವನ್ನು ಒಗ್ಗೂಡಿಸುವಲ್ಲಿ ಸಫಲರಾದರು ಎಂದರು.
ವಿಚಾರ –ಮಂಥನ ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ಮಾಡಿದ ಸುರತ್ಕಲ್ ಗೋವಿಂದ ದಾಸ್ ಕಾಲೇಜಿನ ಅಧ್ಯಾಪಕರಾದ ಕು.ಆಶಾಲತಾ ಮಾತನಾಡಿ ” ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತಾನೆ, ಬೆಳೆದಂತೆ ಜಾತಿ, ಧರ್ಮ, ಕೋಮು ಮುಂತಾದ ವಿಚಾರಗಳಿಂದ ಅಲ್ಪ ಮಾನವನಾಗುತ್ತಾನೆ. ನಾರಾಯಣ ಗುರುಗಳು ತನ್ನ ಬಾಲ್ಯದಿಂದಲೇ ಸಮಾಜದ ತಪ್ಪುಗಳನ್ನು ಪ್ರಶ್ನೆ ಮಾಡುವ ಪ್ರವೃತ್ತಿಯನ್ನು ಬೆಳೆಸಿ, ಸಮಾಜದಲ್ಲಿರುವ ಸಹಜತೆಯನ್ನು ಒಪ್ಪಿ, ಅಸಹಜತೆಯನ್ನು ವಿರೋಧಿಸುತ್ತಾರೆ. ಶೋಷಿತ ಸಮಾಜದ ಸ್ತ್ರೀಯರಿಗಿರುವ ವಸ್ತ್ರ ಸಂಹಿತೆ, ಧಾರ್ಮಿಕ ಅಸಮಾನತೆ, ಸಾಮಾಜಿಕ ಅಸಮಾನತೆಯ ವಿರುದ್ಧ ನಿರಂತರ ಹೋರಾಟವನ್ನು ಮಾಡುತ್ತಾರೆ. ಈಳವ ಸಮುದಾಯಗಳಿಗೆ ಪ್ರತ್ಯೇಕ ಶಿವ ದೇವಸ್ಥಾನವನ್ನು ಕಟ್ಟಿ ದೈವ ದೇವರುಗಳಿಗೆ ಯಾವ ಮಧ್ಯವರ್ತಿಗಳೂ ಬೇಡ, ನಿಮ್ಮ ದೇವರನ್ನು ನೀವೇ ಪೂಜಿಸಿ ಎಂದು ಕರೆ ಕೊಟ್ಟರು.
ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಒಗ್ಗಟ್ಟಾಗಿಮತ್ತು ಉದ್ದಿಮೆಯಿಂದ ಆರ್ಥಿಕ ಸ್ವಾವಲಂಬಿಗಳಾಗಿ ಎನ್ನುವ ಇವರ ಘೋಷಣೆಯು ಶೋಷಿತ ಸಮುದಾಯಗಳಲ್ಲಿ ಪರಿವರ್ತನೆಯ ಜಾಗೃತಿಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಸಾರಾಯಣ ಗುರುಗಳು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಲ್ಲಿ ಸಾಮ್ಯತೆ ಇದ್ದು, ಇಂತಹ ಸಮಾಜ ಸುಧಾರಕರ ಆದರ್ಶ ಹಾಗೂ ವಿಚಾರಧಾರೆಗಳನ್ನು ತಿಳಿದು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಸಂಚಾಲಕರಾದ ರಘು ಕೆ. ಎಕ್ಕಾರು, ಮಂಗಳೂರು ತಾಲೂಕು ಸಂಘಟನಾ ಸಂಚಾಲಕರಾದ ರುಕ್ಕಯ್ಯ ಕರಂಬಾರು, ಬಜ್ಪೆ ಜೀವ ನಿಧಿ ಟ್ರಸ್ಟ್ ನ ನಿರ್ದೇಶಕರಾದ ಜಯಂತ್ ಉಪಸ್ಥಿತರಿದ್ದರು.
ಗ್ರಾಮ ಸಮಿತಿಯ ಸಂಘಟನಾ ಸಂಚಾಲಕರಾದ ವಾಸು ತೆಂಕ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮ ಸಂಘಟನಾ ಸಂಚಾಲಕಿ ಸೌಮ್ಯ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು. ಸುದರ್ಶನ್ ಕೆಂಚಗುಡ್ಡೆ ಸ್ವಾಗತಿಸಿ, ಉದಯ ತೆಂಕ ಎಕ್ಕಾರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ದಲಿತ ಕಲಾ ಮಂಡಳಿ ಮಂಗಳೂರು ತಾಲೂಕು ಸಮಿತಿಯಿಂದ ಕ್ರಾಂತಿ ಗೀತೆ ಹಾಡಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth